ಆನ್ಲೈನ್ ಕ್ಯಾಂಪೇನ್: ಬ್ರಿಂಗ್ ಬ್ಯಾಕ್ ರೋಹಿಣಿ ಸಿಂಧೂರಿ!
ಮೈಸೂರು, ಜೂನ್ 12: ನಿರ್ಗಮಿತ ಮೈಸೂರು ಜಿಲ್ಲಾಧಿಕಾರಿ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪರ ಮತ್ತೆ ಆನ್ಲೈನ್ ಕ್ಯಾಂಪೇನ್ ಶುರುವಾಗಿದೆ.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯನ್ನು ಮತ್ತೆ ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ನೇಮಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಮಾಡಲಾಗುತ್ತಿದೆ.
"ರೋಹಿಣಿ ಸಿಂಧೂರಿ ಆಂಧ್ರಕ್ಕೆ ಹೋಗಿ ಮಕ್ಕಳನ್ನಾಡಿಸಲಿ''
"ಬ್ರಿಂಗ್ ಬ್ಯಾಕ್ ರೋಹಿಣಿ ಸಿಂಧೂರಿ" ಸಹಿ ಸಂಗ್ರಹ ಅಭಿಯಾನ ಶುರುವಾಗಿದ್ದು, "ಚೇಂಜ್ ಆರ್ಗ್' ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ ಆರಂಭಿಸಲಾಗಿದೆ.
ಈಗಾಗಲೇ ಸುಮಾರು 26 ಸಾವಿರ ಜನರಿಂದ ಸಹಿ ಸಂಗ್ರಹ ಮಾಡಲಾಗಿದ್ದು, ರೋಹಿಣಿ ಸಿಂಧೂರಿಯನ್ನು ಮರಳಿ ಮೈಸೂರು ಜಿಲ್ಲಾಧಿಕಾರಿಯನ್ನಾಗಿ ನೇಮಿಸುವಂತೆ ಮನವಿ ಮಾಡಲಾಗುತ್ತಿದೆ.
ಸಹಿ ಸಂಗ್ರಹ ಅಭಿಯಾನದ ಮೂಲಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ಗೆ ಮನವಿ ಮಾಡಿದ್ದು, ರೋಹಿಣಿ ಸಿಂಧೂರಿ ಭೂ ಮಾಫಿಯಾದ ಬಲಿಪಶು ಎಂದು ಹೇಳಿಕೊಂಡ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ವ್ಯಕ್ತವಾಗುತ್ತಿದೆ.
35 ಸಾವಿರ ಸಹಿ ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ಆನ್ಲೈನ್ ಅಭಿಯಾನ ಮುಂದುವರಿಕೆಯಾಗಲಿದೆ ಎಂದು ಅಭಿಯಾನ ಆಯೋಜಕರು ಹೇಳಿದ್ದಾರೆ.
ಐಎಎಸ್ ಅಧಿಕಾರಿಗಳಾದ ಶಿಲ್ಪಾನಾಗ್ ಮತ್ತು ರೋಹಿಣಿ ಸಿಂಧೂರಿ ಅಸಮಾಧಾನ ಬಹಿರಂಗವಾದ ನಂತರ ಈ ಇಬ್ಬರೂ ಅಧಿಕಾರಿಗಳನ್ನು ಕಳೆದ ಒಂದು ವಾರದ ಹಿಂದೆ ವರ್ಗಾವಣೆ ಮಾಡಿ, ಅವರ ಜಾಗಕ್ಕೆ ಬೇರೆ ಅಧಿಕಾರಿಗಳನ್ನು ನೇಮಿಸಲಾಗಿದೆ.