ಈಶ್ವರಪ್ಪಗೆ ಟಾಂಗ್, ಶ್ರೀನಿವಾಸ್ ಪ್ರಸಾದ್ ಗೆ ಉಪಾಧ್ಯಕ್ಷ ಪಟ್ಟ ಕಟ್ಟಿದ ಬಿಎಸ್ವೈ
ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನ ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಿಸಿ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಮುಂದಿನ ಚುನಾವಣೆಯಲ್ಲಿ ಕೆಎಸ್ ಈಶ್ವರಪ್ಪಗೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ.
ಮೈಸೂರು, ಮೇ 2: ಬಣ ರಾಜಕೀಯದಿಂದ ಬಿಜೆಪಿಯಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸಲು ಹೈಕಮಾಂಡ್ ಯತ್ನಿಸುತ್ತಿದ್ದರೆ, ಈ ಮಧ್ಯೆ ಪರಿಷತ್ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪಗೆ ಬಿಎಸ್ ಯಡಿಯೂರಪ್ಪ ಟಾಂಗ್ ನೀಡಿದ್ದಾರೆ.
ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನ ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಿಸಿ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಮುಂದಿನ ಚುನಾವಣೆಯಲ್ಲಿ ಕೆಎಸ್ ಈಶ್ವರಪ್ಪಗೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.[ಗುರುರಾಯರ ಸನ್ನಿಧಿಗೆ ಆಗಮಿಸಿದ ಈಶ್ವರಪ್ಪ]
ದಲಿತ ನಾಯಕನಿಗೆ ಪಟ್ಟ ಕಟ್ಟುವ ಮೂಲಕ ಬಿಎಸ್ ಯಡಿಯೂರಪ್ಪ, ರಾಯಣ್ಣ ಬ್ರಿಗೇಡ್ ಚಟುವಟಿಕೆಗೆ ಮೂಗುದಾರ ಹಾಕಲು ಮುಂದಾಗಿದ್ದಾರೆ ಎಂದು ಈ ಬೆಳವಣಿಯನ್ನು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.
ಕೆಲವು ತಿಂಗಳ ಹಿಂದಷ್ಟೇ ಬಿಜೆಪಿ ಸೇರ್ಪಡೆಯಾಗಿದ್ದ ಶ್ರೀನಿವಾಸ್ ಪ್ರಸಾದ್ ಉಪಚುನಾವಣೆಯಲ್ಲಿ ಸೋತಿದ್ದರೂ ಒಂದಷ್ಟು ಮತದಾರರನ್ನ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಯಡಿಯೂರಪ್ಪ ದಲಿತ ನಾಯಕನಿಗೆ ಪಟ್ಟ ಕಟ್ಟುವ ಮೂಲಕ ಭಿನ್ನಮತೀಯರ ವಿರುದ್ಧ ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ.
ಕಳೆದ ಎರಡು ದಿನದ ಹಿಂದಷ್ಟೆ ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್ ಬೆಂಗಳೂರಿಗೆ ಆಗಮಿಸಿ ರಾಜ್ಯ ನಾಯಕರ ಅಭಿಪ್ರಾಯ ಸಂಗ್ರಹಿಸಿದ್ದರು. ಪಕ್ಷದ ಹೊರಗೆ ಯಾವುದೇ ಸಂಘಟನೆ ಮಾಡುವಂತಿಲ್ಲ.ಯಾವುದೇ ಚಟುವಟಿಕೆಯಲ್ಲಿ ತೊಡಗುವ ಹಾಗಿಲ್ಲ ಎಂದು ಎಚ್ಚರಿಕೆಯನ್ನೂ ಅವರು ಈ ಸಂದರ್ಭ ನೀಡಿದ್ದರು.[ರಾಜ್ಯ ಬಿಜೆಪಿಯ ಎರಡು ಒಡೆದ ಮನಸ್ಸುಗಳು ಮತ್ತಷ್ಟು ದೂರ..ದೂರ?]
ಜತೆಗೆ ಯಾವುದೇ ಕಾರಣಕ್ಕೂ ರಾಯಣ್ಣ ಬ್ರಿಗೇಡ್ ಚಟುವಟಿಕೆ ಮುಂದುವರಿಸುವುದಾಗಲಿ, ಪಕ್ಷ ವಿರೋಧಿ ಹೇಳಿಕೆ ನೀಡಬಾರದು ಎಂದು ಈಶ್ವರಪ್ಪಗೆ ಬಿಜೆಪಿ ಹೈಕಮಾಂಡ್ ಕಡೆಯಿಂದ ಸೂಚನೆ ನೀಡಿಸಿದ್ದರು. ಆದರೆ ಹೈಕಮಾಂಡ್ ಸೂಚನೆ ಸೆಡ್ಡು ಹೊಡೆದು ಈಶ್ವರಪ್ಪ ಇಂದು ಬ್ರಿಗೇಡ್ ಸಭೆ ನಡೆಸಿದ್ದಾರೆ.
ಈ ಮೂಲಕ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಕಿತ್ತಾಟ ತೀವ್ರ ಕುತೂಹಲ ಮೂಡಿಸಿದೆ.