ಜೀವನ್ಮರಣದ ಹೋರಾಟದ ನಡುವೆಯೂ ಶಿವಣ್ಣನ ನೋಡಲು ಹೊರಟ ಬಾಲಕ
ಕಿಡ್ನಿ ಸಮಸ್ಯೆಯಿಂದಾಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಬಾಲಕನ ಕೊನೆಯ ಬಯಕೆ ಈಡೇರಿಸಲು ಮುಂದೆ ಬಂದ ಸ್ನೇಕ್ ಶ್ಯಾಂ.
ಮೈಸೂರು, ಮಾರ್ಚ್ 8: ಎರಡೂ ಕಿಡ್ನಿಯ ವೈಫಲ್ಯತೆಯಿಂದ ಬಳಲುತ್ತಿದ್ದು, ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತ ಕೊನೆಯ ದಿನಗಳನ್ನು ಎಣಿಸುತ್ತಿರುವ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಆಲನಹಳ್ಳಿ ಗ್ರಾಮದ ಮಂಜುಳ ಅವರ ಮಗ ಜಯಕುಮಾರ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನನ್ನು ಒಮ್ಮೆ ನೋಡುವ ಕಾತುರದಲ್ಲಿದ್ದನು. ಈಗ ಜಯಕುಮಾರನ ಕನಸು ನನಸಾಗುವ ಸಮಯ ಬಂದಿದೆ.
ಭಾನುವಾರ ಮಹಾನಗರಪಾಲಿಕೆ ಸದಸ್ಯ ಸ್ನೇಕ್ ಶ್ಯಾಂ ಆಸ್ಪತ್ರೆಗೆ ಭೇಟಿ ನೀಡಿ ಯುವಕನ ಆರೋಗ್ಯ ವಿಚಾರಿಸಿದ್ದರಲ್ಲದೇ ತನ್ನ ಕೈಲಾದ ಸಹಾಯವನ್ನೂ ಮಾಡುವುದಾಗಿ ತಿಳಿಸಿದ್ದರು.[ಎಕ್ಸ್ ಚೇಂಜ್ ಆಫರ್ ನಲ್ಲಿ ಮೈಸೂರು ಮೃಗಾಲಯಕ್ಕೆ ಬಂತು ಸಿಂಹ]
ಅಷ್ಟೇ ಅಲ್ಲದೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಸಂಸದ ಧ್ರುವನಾರಾಯಣ್ ಅವರನ್ನು ಭೇಟಿ ಮಾಡಿಸುವುದಾಗಿಯೂ ಭರವಸೆ ನೀಡಿದ್ದರು. ಇದೀಗ ಅವರು ಕೊಟ್ಟಿದ್ದ ಮಾತನ್ನು ಉಳಿಸಿಕೊಳ್ಳಲು, ಶಿವರಾಜ್ ಕುಮಾರ್ ರವರನ್ನು ನೋಡಲು ಆಸೆ ಪಟ್ಟ ಜಯಕುಮಾರ್ ಅವರನ್ನು ವಿಶೇಷ ಆಂಬುಲೆನ್ಸ್ ನಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಸ್ನೇಕ್ ಶ್ಯಾಮ್ ತಿಳಿಸಿದ್ದಾರೆ.[ಇತಿಹಾಸ ನಿರ್ಮಾಣ : ಟಿಪ್ಪು ಸುಲ್ತಾನ್ ಮದ್ದಿನಮನೆ ಸ್ಥಳಾಂತರ]