ಪ್ರೀತ್ಸೆ ಪ್ರೀತ್ಸೆ ಅಂತ ಅಪ್ರಾಪ್ತೆ ಹಿಂದೆ ಬಿದ್ದ; ಮುಂದೇನಾಯ್ತು?
ಮೈಸೂರು, ಜನವರಿ 24: ತನ್ನನ್ನು ಪ್ರೀತಿಸುವಂತೆ ಅಪ್ರಾಪ್ತೆಯನ್ನು ಪೀಡಿಸಿ, ಆಕೆ ಮನೆಯವರಿಗೂ ಬೆದರಿಕೆ ಹಾಕುತ್ತಿದ್ದ ಹುಡುಗನೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಹುಣಸೂರು ತಾಲೂಕಿನ ಕಲ್ಕುಣಿಕೆ ಸುಣ್ಣದಗೂಡಿನ ನಿವಾಸಿ ನಾಗೇಂದ್ರ ಎಂಬ ಯುವಕ ಬಂಧಿತ ಆರೋಪಿ. ಈತ 8ನೇ ತರಗತಿಯಲ್ಲಿ ಓದುತ್ತಿದ್ದ ಅಪ್ರಾಪ್ತೆಯ ಹಿಂದೆ ಬಿದ್ದು, ತನ್ನನ್ನು ಪ್ರೀತಿ ಮಾಡು ಎಂದು ಪೀಡಿಸುತ್ತಿದ್ದನಂತೆ. ಆದರೆ ಬಾಲಕಿ ಈತನ ಪ್ರೀತಿಯನ್ನು ನಿರಾಕರಿಸಿದ್ದಾಳೆ. ಇದರಿಂದ ಆಕ್ರೋಶಿತನಾದ ನಾಗೇಂದ್ರ ತನ್ನ ಪ್ರೇಮ ನಿವೇದನೆಯನ್ನು ಮನೆಯವರಿಗೆ ತಿಳಿಸಿದರೆ ನಿನ್ನ ಮುಖಕ್ಕೆ ಆಸಿಡ್ ಹಾಕಿ ವಿಕೃತಗೊಳಿಸುತ್ತೇನೆ ಎಂದೂ ಬೆದರಿಕೆ ಒಡ್ಡಿದ್ದಾನೆ.
ಪ್ರೇಮ ವಿವಾಹಕ್ಕೆ ಸಾಕ್ಷಿಯಾಗಿದ್ದಕ್ಕೆ ಗೆಳತಿಗ್ಯಾಕೆ ಈ ಶಿಕ್ಷೆ?
ಇದಷ್ಟೇ ಅಲ್ಲ ಪ್ರೀತಿ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ ತನ್ನ ಕೈಗಳನ್ನೇ ಬ್ಲೇಡಿನಿಂದ ಕೊಯ್ದುಕೊಂಡಿದ್ದಾನೆ. ಬಾಲಕಿಯ ಮನೆಗೂ ಹೋಗಿ ಪೋಷಕರೊಂದಿಗೂ ಜಗಳವಾಡಿದ್ದಾನೆ. ಈತನ ಪ್ರೀತಿಯ ಹುಚ್ಚು ತಾರಕಕ್ಕೇರಿ ಅಪ್ರಾಪ್ತೆಯ ಮನೆಯಲ್ಲಿದ್ದ ಬೀರು ಒಡೆದು ಹಾಕಿ ತನಗೆ ಆಕೆಯನ್ನು ಮದುವೆ ಮಾಡಿ ಕೊಡದಿದ್ದರೆ ಎಲ್ಲರನ್ನೂ ಕೊಲ್ಲುವುದಾಗಿ ಬೆದರಿಸಿದ್ದಾನೆ.
ಈತನ ಕಾಟ ತಾಳಲಾರದೆ ಬಾಲಕಿಯ ತಾಯಿ ಹುಣಸೂರು ಪಟ್ಟಣ ಪೊಲೀಸರಿಗೆ ದೂರು ನೀಡಿದ್ದರು. ಈ ದೂರು ಸ್ವೀಕರಿಸಿದ ಪೊಲೀಸರು ಕಾಟ ಕೊಟ್ಟಿದ್ದ ಯುವಕನನ್ನು ಗುರುವಾರ ಬಂಧಿಸಿದ್ದಾರೆ. ತನಿಖೆ ಮುಂದುವರೆದಿದೆ.