ದುರ್ಬಲ ಮುಖ್ಯಮಂತ್ರಿಗೆ ಮಾತ್ರ ಬ್ಲಾಕ್ ಮೇಲ್ ಮಾಡ್ತಾರೆ: ಸಿದ್ದರಾಮಯ್ಯ
ಮೈಸೂರು, ಜನವರಿ 14: ನಾಯಕತ್ವ ಬದಲಾವಣೆಗೆ ಸಿದ್ದರಾಮಯ್ಯ ದಿನಾಂಕ ನಿಗದಿ ಮಾಡಲಿ ಎಂಬ ಸಿಎಂ ಯಡಿಯೂರಪ್ಪ ಅವರ ಹೇಳಿಕೆ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಇಷ್ಟು ದಿನಗಳ ಕಾಲ ಮಂತ್ರಿಮಂಡಲ ವಿಸ್ತರಣೆ ಯಾಕೆ ಮಾಡಿರಲಿಲ್ಲ. ಮಂತ್ರಿಮಂಡಲ ವಿಸ್ತರಣೆಗೆ ಯಾಕೆ ತಡವಾಯ್ತು? ಗೋಗರೆದು ಕೈಕಾಲು ಕಟ್ಟಿ ಮಂತ್ರಿಮಂಡಲ ವಿಸ್ತರಣೆ ಮಾಡಿಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.
"ನಾಲಿಗೆ, ಮಾತು ಎರಡೂ ಕಳೆದುಕೊಂಡ ಸಿಎಂ ಯಡಿಯೂರಪ್ಪ''
ಒಬ್ಬ ಸಚಿವನನ್ನು ಸಂಪುಟದಿಂದ ಬಿಟ್ಟಿದ್ದಾರೆ, ಯಾವ ಕಾರಣಕ್ಕೆ ಬಿಟ್ಟಿದ್ದಾರೆ ಎಂದು ಕಾರಣ ಕೊಟ್ಟಿಲ್ಲ. ಪಕ್ಷೇತರನಾಗಿ ಕಾಂಗ್ರೆಸ್ ಪಕ್ಷದ ಸಹಾಯದೊಂದಿಗೆ ಗೆದ್ದಿದ್ದ ಪಕ್ಷೇತರ ಶಾಸಕ ಎಚ್.ನಾಗೇಶ್ ರನ್ನು ಯಾಕೆ ಕೈಬಿಟ್ಟಿದ್ದಾರೆ? ಅವರನ್ನು ಯಾವ ಕಾರಣಕ್ಕೆ ಡ್ರಾಪ್ ಮಾಡಿದ್ದಾರೆ ಎಂದು ಹೇಳಿಲ್ಲ. ಅವರು ಕೂಡ ಆಪರೇಷನ್ ಕಮಲಕ್ಕೆ ಒಳಪಟ್ಟವರು. ಈಗ ಮುನಿರತ್ನನನ್ನು ಕೈ ಬಿಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಅವನನ್ನು ಮಿನಿಸ್ಟರ್ ಮಾಡಲು ಆಗಲಿಲ್ಲ ಎಂದಮೇಲೆ ಯಾಕೆ ತಗೆದುಕೊಂಡರು? ಕಾನೂನು ತೊಡಕಿದೆ ಎಂದು ಗೊತ್ತಿದ್ದರೂ ಯಾಕೆ ಕರೆದುಕೊಂಡರು. ಎಚ್.ವಿಶ್ವನಾಥ್ ಪಾಪ ಬಾಯಿ ಬಡ್ಕೊತ್ತಿದ್ದಾನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ ಮಾಡಿದರು.
ಸಿಎಂ ವಿರುದ್ಧ ಸಿಡಿ ಬ್ಲಾಕ್ ಮೇಲ್ ಬಗ್ಗೆ ಕ್ರಿಮಿನಲ್ ಕೇಸ್ ದಾಖಲು ಮಾಡಬೇಕು. ಎಲ್ಲರಿಗೂ ಹಾಗೆ ಬ್ಲಾಕ್ ಮೇಲ್ ಮಾಡೋಕೆ ಆಗಲ್ಲ. ದುರ್ಬಲ ಮುಖ್ಯಮಂತ್ರಿಗೆ ಮಾತ್ರ ಬ್ಲಾಕ್ ಮೇಲ್ ಮಾಡ್ತಾರೆ. ಅದರ ಬಗ್ಗೆ ಕ್ರಿಮಿನಲ್ ಕೇಸ್ ಹಾಕಲಿ ಎಂದು ಹೇಳಿದರು.
ಸಿಡಿ ವಿಚಾರ ಬಗ್ಗೆ ಆ ಪಕ್ಷದವರೆ ಆರೋಪ ಮಾಡಿದ್ದಾರೆ. ನಾವೇನು ಆರೋಪ ಮಾಡ್ತಿಲ್ಲ, ಅದರಲ್ಲಿ ಸತ್ಯ ಇದೆ ಅಲ್ವಾ. ನಾವು ಮಾಡಿದರೆ ವಿರೋಧ ಪಕ್ಷದವರು ಅಂತಾರೆ. ಈಗ ಅವರೇ ಮಾಡಿದ್ದಾರೆಂದರು.
ಮುಖ್ಯಮಂತ್ರಿಗಳು ಬ್ಲಾಕ್ ಮೇಲ್ ಗೆ ಒಳಗಾಗಿದ್ದಾರೋ ಅಥವಾ ಒತ್ತಡಕ್ಕೆ ಒಳಗಾಗಿದ್ದಾರೋ ಅನ್ನೋದು ನಂಗೆ ಗೊತ್ತಿಲ್ಲ. ಅದಕ್ಕೆಲ್ಲ ತನಿಖೆ ಮಾಡಿ ಅಂತ ಹೇಳಲ್ಲ, ಕ್ರಿಮಿನಲ್ ಕೇಸ್ ಕೊಡಲಿ ಎಂದು ಹೇಳುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಬಿಜೆಪಿನಲ್ಲಿ ಕುಟುಂಬ ರಾಜಕಾರಣ ಬಗ್ಗೆ ಬಹಳ ಹಿಂದೆ ನಾನು ಹೇಳಿದ್ದೇನೆ. ಬಿಡಿಎ ಹಗರಣದಲ್ಲಿ 7 ಕೋಟಿ 40 ಲಕ್ಷ ಹಣ ಅವರ ಕುಟುಂಬದವರ ಖಾತೆಗೆ ಹೋಗಿದೆ, ಅದರ ಅರ್ಥ ಕುಟುಂಬ ರಾಜಕಾರಣ ಇದೆ ಅಂತ ಅಲ್ವಾ. ಈ ಸರ್ಕಾರದ ಬಗ್ಗೆ ಜನ ಬೇಸತ್ತಿದ್ದಾರೆ. ಜನರೇ ಉತ್ತರ ಕೊಡುತ್ತಾರೆ. ನನ್ನ ಕಾಲದಲ್ಲಿ ಜಾರಿಗೆ ತಂದಿದ್ದ ಎಲ್ಲ ಜನಪರ ಕೆಲಸಗಳನ್ನು ನಿಲ್ಲಿಸುತ್ತಿದ್ದಾರೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.