ಬಿಜೆಪಿಯ ಮುಂದಿನ ಟಾರ್ಗೆಟ್ ಹಳೇ ಮೈಸೂರು...!
ಮೈಸೂರು, ಜನವರಿ 14: ಹಳೇ ಮೈಸೂರು ಭಾಗದಲ್ಲಿ ರಾಜಕೀಯವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಬದ್ಧ ವೈರಿಗಳೆಂಬುದನ್ನು ತಳ್ಳಿಹಾಕಲಾಗದು. ಈ ಹಿಂದೆ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಒಟ್ಟಾಗಿ ಸಮ್ಮಿಶ್ರ ಸರ್ಕಾರ ನಡೆಸಿದರೂ ಕೂಡ ಈ ಭಾಗದಲ್ಲಿ ಅವೆರಡು ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರಲ್ಲಿ ಒಮ್ಮತ ಕಂಡು ಬರಲಿಲ್ಲ ಎಂಬುದು ನಾವು ಕಂಡ ಸತ್ಯವಾಗಿದೆ.
ಈಗ ಕಾಲ ಮಿಂಚಿ ಹೋಗಿದೆ. ಒಂದಾದ ಎರಡು ಪಕ್ಷಗಳ ನಾಯಕರು ದೂರವಾಗಿದ್ದಾರೆ. ಜತೆಗೆ ಒಬ್ಬರ ಮೇಲೆ ಮತ್ತೊಬ್ಬರು ಹಠಕ್ಕೆ ಬಿದ್ದವರಂತೆ ಆಗಾಗ್ಗೆ ವಾಗ್ವಾದಗಳ ಸುರಿಮಳೆಗೈಯುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಹಳೇ ಮೈಸೂರು ವಿಭಾಗದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಕಿತ್ತಾಟದ ಲಾಭ ಪಡೆದುಕೊಳ್ಳಲು ಬಿಜೆಪಿ ಹವಣಿಸುತ್ತಿದೆ.
"ನನ್ನದೇನಿದ್ದರೂ ಸೈಲೆಂಟ್ ರಾಜಕಾರಣ" ಎಂದು ಎಚ್ ಡಿಕೆಗೆ ತಿವಿದ ಜಿಟಿಡಿ
ಈಗಾಗಲೇ ಮೈಸೂರು ಜಿಲ್ಲೆಯಲ್ಲಿ ನಿಧಾನವಾಗಿ ತನ್ನ ಸ್ಥಾನಗಳನ್ನು ಗಟ್ಟಿ ಮಾಡುತ್ತಾ ಹೋಗುತ್ತಿರುವ ಬಿಜೆಪಿ ಅತ್ತ ಮಂಡ್ಯದಲ್ಲಿ ಜೆಡಿಎಸ್ ಭದ್ರಕೋಟೆಗೆ ನುಗ್ಗಿದ ಸಂಭ್ರಮದಲ್ಲಿ ಮುಳುಗಿ ಹೋಗಿದೆ.
ಬಿಜೆಪಿಗೆ ಎದುರಾಳಿಯಾಗಿ ಯಾರು ನಿಲ್ಲುತ್ತಿಲ್ಲ
ಬಿಜೆಪಿಯು ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಹಳೇ ಮೈಸೂರು ವಿಭಾಗದಲ್ಲಿ ಪ್ರಬಲವಾಗಿ ಎದ್ದು ನಿಲ್ಲಲು ಈಗಿನಿಂದಲೇ ತಳಮಟ್ಟದಿಂದಲೇ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಇಲ್ಲಿ ಈ ಹಿಂದಿನಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಾಯಕರು ತಮಗೆ ಬಿಜೆಪಿ ಎದುರಾಳಿಯೇ ಅಲ್ಲ ಎಂಬ ಭ್ರಮೆಯಲ್ಲಿದ್ದರು.
ಹೀಗಾಗಿ ಇವರು ರಾಜಕೀಯವಾಗಿ ಒಬ್ಬರನೊಬ್ಬರು ಎದುರಿಸಿಕೊಂಡು ಬಂದರೇ ವಿನಃ ಬಿಜೆಪಿ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ, ಆದರೆ ಈಗ ಕಾಲ ಬದಲಾಗಿದೆ. ಎದುರಾಳಿ ಪಕ್ಷಗಳ ನಾಯಕರಿಗೆ ಗಾಳ ಹಾಕಿ ಗೆಲುವು ಪಡೆದುಕೊಳ್ಳುವ ಮಟ್ಟಕ್ಕೆ ಬಿಜೆಪಿ ಬೆಳೆದು ನಿಂತಿದೆ. ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಎದುರಾಳಿ ಪಕ್ಷಗಳ ಒಂದಷ್ಟು ಪ್ರಬಲ ನಾಯಕರು ಕಮಲ ಮುಡಿದರೂ ಅಚ್ಚರಿಪಡುವಂತಹದ್ದೇನಿಲ್ಲ.
ಪದೇ ಪದೇ ಸೋಲಿನಿಂದ ಕಂಗಾಲಾದ ಕಾಂಗ್ರೆಸ್, ಜೆಡಿಎಸ್
ಈಗ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ಕಲಹಗಳು, ಭಿನ್ನಾಭಿಪ್ರಾಯಗಳು ಬಹಳಷ್ಟು ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ. ಜತೆಗೆ ಇತ್ತೀಚಿಗಿನ ಚುನಾವಣೆಗಳಲ್ಲಿ ಈ ಪಕ್ಷಗಳಿಗೆ ಆಗುತ್ತಿರುವ ಸೋಲು ಆ ಪಕ್ಷದ ನಾಯಕರನ್ನು ಕಂಗಾಲಾಗುವಂತೆ ಮಾಡಿದೆ.
ಅದರಲ್ಲೂ ಸಮ್ಮಿಶ್ರ ಸರ್ಕಾರ ರಚಿಸಿ ಅದು ಪತನಗೊಂಡ ಬಳಿಕವಂತು ಎರಡು ಪಕ್ಷಗಳ ನಡುವಿನ ರಾಜಕೀಯ ಬಾಂಧವ್ಯ ಸಂಪೂರ್ಣ ನೆಲಕಚ್ಚಿದೆ. ಅಷ್ಟೇ ಅಲ್ಲ ಎರಡು ಪಕ್ಷಗಳ ನಾಯಕರಲ್ಲಿನ ಇರಿಸು ಮುರಿಸು ಪಕ್ಷಕ್ಕೆ ಹಾನಿ ಮಾಡಿದ್ದಲ್ಲದೆ, ಇವರ ಮೈತ್ರಿ ಮುಂದೆ ಯಾವತ್ತೂ ನಡೆಯಲ್ಲ ಎಂಬ ಸಂದೇಶವನ್ನು ಸಾರಿದಂತಾಗಿದೆ.
"ಕರ್ನಾಟಕ ಉಪ ಚುನಾವಣೆಯಲ್ಲಿ ಒಂದು ಕ್ಷೇತ್ರಕ್ಕೆ 100 ಕೋಟಿ ಖರ್ಚು"
ಒಂದೊಂದಾಗಿ ಸ್ಥಾನ ಕಳೆದುಕೊಳ್ಳಳುತ್ತಿರುವ ಜೆಡಿಎಸ್
ಮೈಸೂರು ವ್ಯಾಪ್ತಿಯ ಜೆಡಿಎಸ್ ನ ಪ್ರಭಾವಿ ನಾಯಕರಾಗಿರುವ ಜಿ.ಟಿ.ದೇವೇಗೌಡರಂತು ಜೆಡಿಎಸ್ ನಲ್ಲಿದ್ದರಾ? ಎಂಬ ಸಂಶಯವನ್ನು ಹುಟ್ಟು ಹಾಕುವಂತೆ ನಡೆದುಕೊಳ್ಳುತ್ತಿದ್ದಾರೆ. ಕಳೆದ ವಿಧಾನಸಭಾ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡಲೇ ಇಲ್ಲ. ಚುನಾವಣೆಯಿಂದ ದೂರವಾಗಿಯೇ ಉಳಿದು ಬಿಟ್ಟಿದ್ದರು.
ಇನ್ನು ಈ ವಿಭಾಗದಲ್ಲಿ ಇದೀಗ ಶಾಸಕ ಸಾ.ರಾ.ಮಹೇಶ್ ಹೊರತು ಪಡಿಸಿದರೆ ಜೆಡಿಎಸ್ ನಲ್ಲಿ ಪಕ್ಷ ಸಂಘಟನೆಗೆ ಹೆಗಲುಕೊಟ್ಟು ದುಡಿಯುವ ನಾಯಕರು ಕಂಡು ಬರುತ್ತಿಲ್ಲ.
ಜಿ.ಟಿ.ದೇವೇಗೌಡ ಬಿಜೆಪಿ ತೆಕ್ಕೆಗೆ..?
ಕಾಂಗ್ರೆಸ್ ವಿಚಾರಕ್ಕೆ ಬಂದರೆ ಸಿದ್ದರಾಮಯ್ಯ ಅವರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ನ ಪ್ರಭಾವಿ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡರ ಎದುರು ಪರಾಭವಗೊಂಡ ಬಳಿಕವಂತು ಅವರು ಕುಗ್ಗಿ ಹೋಗಿದ್ದಾರೆ.
ಜತೆಗೆ ಸಂಸದ ಶ್ರೀನಿವಾಸಪ್ರಸಾದ್ ಮತ್ತು ಮಾಜಿ ಸಚಿವ ಎಚ್.ವಿಶ್ವನಾಥ್ ಅವರ ವೈರತ್ವವನ್ನು ಕಟ್ಟಿಕೊಂಡಿದ್ದು, ಈ ಪ್ರಭಾವಿ ನಾಯಕರು ಇದೀಗ ಬಿಜೆಪಿ ತೆಕ್ಕೆಯಲ್ಲಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನೂ ಮೂರೂವರೆ ವರ್ಷಗಳಿವೆ. ಅಷ್ಟರಲ್ಲಿ ರಾಜಕೀಯವಾಗಿ ಬಹಳಷ್ಟು ಬೆಳವಣಿಗೆಯಾದರೆ ಅಚ್ಚರಿ ಪಡಬೇಕಾಗಿಲ್ಲ.
ಮೈತ್ರಿ ಪಕ್ಷದ ನಾಯಕರಿಗೆ ಬಿಜೆಪಿ ಗಾಳ
ಆದರೆ ಬಿಜೆಪಿ ಈಗಿನಿಂದಲೇ ಸಂಘಟನೆಗೆ ಒತ್ತು ನೀಡುತ್ತಿದೆ. ತಳಮಟ್ಟದಿಂದಲೇ ಪಕ್ಷವನ್ನು ಸಂಘಟಿಸುತ್ತಾ ಹೋಗುತ್ತಿದೆ. ಅಗತ್ಯ ಬಿದ್ದರೆ ಎದುರಾಳಿ ಪಕ್ಷದ ನಾಯಕರಿಗೆ ಗಾಳ ಹಾಕಲು ಹಿಂಜರಿಯುವುದಿಲ್ಲ. ಈಗಿನ ರಾಜಕೀಯ ಪರಸ್ಥಿತಿಯನ್ನು ಅವಲೋಕಿಸಿದರೆ ಬಿಜೆಪಿ ಹಳೇ ಮೈಸೂರಿನಲ್ಲಿ ಗಟ್ಟಿಯಾಗುತ್ತಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಸಾಮಾನ್ಯವಾಗಿ ಚುನಾವಣೆಗೆ ಹತ್ತಿರವಿರುವಾಗ ಮಾತ್ರ ರಾಜಕೀಯ ಅಖಾಡಕ್ಕಿಳಿಯುತ್ತವೆ. ಜತೆಗೆ ಬರೀ ಆರೋಪ ಮಾಡುವುದಕ್ಕಷ್ಟೆ ಸೀಮಿತವಾಗಿ ಬಿಡುತ್ತವೆ.
ಹಳೇ ಮೈಸೂರಿಗೆ ಬಿ.ವೈ.ವಿಜಯೇಂದ್ರ ಸಾರಥ್ಯ
ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಾಯಕರಿಗೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದೇ ಸವಾಲ್ ಆಗಿ ಪರಿಣಮಿಸಿದೆ. ಹಾಗಾಗಿ ಅವೆರಡು ಪಕ್ಷಗಳ ನಾಯಕರು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವತ್ತ ಪೈಪೋಟಿಗೆ ಬಿದ್ದಿದ್ದಾರೆ. ಇದರ ಲಾಭ ಪಡೆಯಲು ಬಿಜೆಪಿ ಎಲೆಮರೆಯಲ್ಲೇ ತಂತ್ರ ರೂಪಿಸುತ್ತಿದೆ.
ಮೈಸೂರು ಜಿಲ್ಲೆಯ ಹನ್ನೊಂದು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಗೆಲುವು ಪಡೆದಿರುವ ಬಿಜೆಪಿ ಮುಂದಿನ ಚುನಾವಣೆ ವೇಳೆಗೆ ಇನ್ನಷ್ಟು ಸ್ಥಾನಗಳ ಮೇಲೆ ಕಣ್ಣಿಟ್ಟಿದೆ. ಸದ್ಯ ತಲಾ ನಾಲ್ಕು ಸ್ಥಾನಗಳನ್ನು ಹೊಂದಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಬಿಜೆಪಿಯನ್ನು ಕಟ್ಟಿ ಹಾಕಲು ಯಾವ ತಂತ್ರ ರೂಪಿಸಬಹುದು ಎಂಬುದನ್ನು ಕಾದುನೋಡಬೇಕಾಗಿದೆ.