150ಕ್ಕಿಂತ ಹೆಚ್ಚು ಸ್ಥಾನದಲ್ಲಿ ಗೆಲುವು; ನಳಿನ್ ಕುಮಾರ್ ಕಟೀಲ್
ಮೈಸೂರು, ಏಪ್ರಿಲ್ 12; "ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಕ್ಕಿಂತ ಹೆಚ್ಚು ಗೆಲ್ಲಲು ಸಿದ್ಧತೆ ಮಾಡಿಕೊಂಡಿದ್ದೇವೆ. ಬಿಜೆಪಿ ಅಭಿವೃದ್ಧಿ ಮೇಲೆ ವಿಶ್ವಾಸ ಹೊಂದಿದೆ. ಅಭಿವೃದ್ಧಿ ಮತ್ತು ಸಂಘಟನೆಯ ಆಧಾರದಲ್ಲೇ ಚುನಾವಣೆ ಎದುರಿಸುತ್ತೇವೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಮಂಗಳವಾರ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, "ರಾಜ್ಯದಲ್ಲಿ ಇನ್ನೊಂದು ವರ್ಷದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. 3 ವರ್ಷಗಳ ಕಾಲ ಬಿಜೆಪಿ ಆಡಳಿತವಿದ್ದು, ಪಕ್ಷವು ಸಂಘಟನಾತ್ಮಕವಾಗಿ ಬೆಳೆದಿದೆ" ಎಂದರು.
ಕಾಂಗ್ರೆಸ್, ಜೆಡಿಎಸ್ ಮುಖಂಡರು ನಮ್ಮ ಸಂಪರ್ಕದಲ್ಲಿದ್ದಾರೆ: ಕಟೀಲ್
"ಕೋವಿಡ್ನ ಸುಮಾರು ಎರಡರಿಂದ ಎರಡೂವರೆ ವರ್ಷಗಳ ನಡುವೆಯೂ ಪಕ್ಷವು ಸಂಘಟನಾತ್ಮಕವಾಗಿ ಬೆಳೆದಿದೆ. ಗ್ರಾಮ ಪಂಚಾಯತಿ, ವಿಧಾನಸಭೆ ಉಪ ಚುನಾವಣೆ, ಇತರ ಚುನಾವಣೆಗಳಲ್ಲಿ ಪಕ್ಷ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದೆ" ಎಂದು ತಿಳಿಸಿದರು.
150 ಸ್ಥಾನಗಳ ಗುರಿ ಮುಟ್ಟಲು ರೂಪಿಸಿದ ರೋಡ್ ಮ್ಯಾಪ್ ಈ 'ಆಹಾರ ತಾರತಮ್ಯ': ಎಚ್ಡಿಕೆ
"ಇದೀಗ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ 3 ತಂಡಗಳ ಪ್ರವಾಸ ಹಮ್ಮಿಕೊಳ್ಳಲಾಗಿದೆ. ತಾವು, ಬಸವರಾಜ ಬೊಮ್ಮಾಯಿ, ಅರುಣ್ ಸಿಂಗ್ ಹಾಗೂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಈ ಪ್ರವಾಸ ನಡೆಯುತ್ತಿದೆ" ಎಂದು ವಿವರಣೆ ನೀಡಿದರು.
40% ಕಮಿಷನ್ ಬಿಜೆಪಿ ಸರ್ಕಾರವನ್ನು ತೆಗೆಯಬೇಕು, ಕಾಂಗ್ರೆಸ್ 150 ಸೀಟು ಗೆಲ್ಲಬೇಕು: ರಾಹುಲ್
"ಇಂದಿನ ರಾಜಕೀಯ ಸ್ಥಿತಿಗತಿ, ಕಾರ್ಯಕರ್ತರ ಅಭಿಪ್ರಾಯ, ವ್ಯತ್ಯಾಸಗಳ ಮಾಹಿತಿ ಸಂಗ್ರಹ ಮಾಡಲಾಗುವುದು. ವಿಭಾಗದಿಂದ ಆರಂಭಿಸಿ ಶಕ್ತಿ ಕೇಂದ್ರಗಳ ತನಕ ಪ್ರಮುಖರ ಸಮಾವೇಶವನ್ನೂ ನಡೆಸಲಾಗುವುದು. ಇದರಿಂದ ಎಲ್ಲ ಸ್ತರದ ಕಾರ್ಯಕರ್ತರ ಜೊತೆ ಸಂವಹನ ಸಾಧ್ಯವಾಗಲಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಬ್ಲೂಪ್ರಿಂಟ್ ತಯಾರಿಸಲು ಇದು ಪೂರಕ" ಎಂದರು.
ಬೂತ್ ಬಲಪಡಿಸುವುದು; "ಬೂತ್ ಮತ್ತು ಪೇಜ್ ಕಮಿಟಿಗಳನ್ನು ಬಲಪಡಿಸಲಾಗುತ್ತಿದೆ. ಬೂತ್ ಅಧ್ಯಕ್ಷರ ಮನೆಗಳಿಗೆ ನಾಮಫಲಕ ಜೋಡಣೆ ಯಶಸ್ವಿಯಾಗಿದೆ. ವಿಸ್ತಾರಕ್ ಯೋಜನೆಯೂ ಯಶಸ್ಸು ಪಡೆದಿದೆ. ರಾಜ್ಯದಲ್ಲಿ ಶೇ 60ರಷ್ಟು ಪೇಜ್ ಕಮಿಟಿ ಸಂಘಟಿಸಲಾಗಿದೆ" ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
"ಕೋವಿಡ್ ವೇಳೆ ಕೈಗೊಂಡ ಕ್ರಮಗಳು, ಲಸಿಕಾಕರಣ, ಉಕ್ರೇನ್ ಸಂದರ್ಭದಲ್ಲಿ 22 ಸಾವಿರ ಭಾರತೀಯರನ್ನು ಮರಳಿ ಕರೆತಂದಿರುವುದು, ಆರ್ಥಿಕ ಚೇತರಿಕೆ ಮನಗಂಡು ಜನರು ಬಿಜೆಪಿಯತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ" ಎಂದು ವಿವರಿಸಿದರು.
"ರಾಜ್ಯ ಸರಕಾರದ ಸಾಧನೆಯೂ ಅತ್ಯುತ್ತಮವಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಬಗ್ಗೆ ಆ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಭ್ರಮನಿರಸನಗೊಂಡಿದ್ದಾರೆ. ಅಂಥವರ ಪಕ್ಷ ಸೇರ್ಪಡೆ ಬಗ್ಗೆ ಪರಿಶೀಲಿಸಲಾಗುತ್ತಿದೆ" ಎಂದರು.
"ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿ ಕಾರಣ ಎಲ್ಲರೂ ತಮ್ಮ ಕ್ಷೇತ್ರಗಳಿಗೆ ತೆರಳಲಿದ್ದಾರೆ. ಅಲ್ಲದೆ ಏಪ್ರಿಲ್ 15ರಂದು ಯಾತ್ರೆ ಇರುವುದಿಲ್ಲ. 16, 17ರಂದು ಪಕ್ಷದ ರಾಜ್ಯ ಕಾರ್ಯಕಾರಿಣಿ ಇರುವ ಕಾರಣ ಯಾತ್ರೆ ಇರುವುದಿಲ್ಲ. ಏಪ್ರಿಲ್ 18ರ ಬಳಿಕ 24ರವರೆಗೆ ಯಾತ್ರೆ ಮುಂದುವರಿಯಲಿದೆ. 3 ತಂಡಗಳಲ್ಲಿ 10 ವಿಭಾಗಗಳು, ಎಲ್ಲ ಜಿಲ್ಲೆಗಳಿಗೆ ತಂಡಗಳು ತೆರಳಲಿವೆ" ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವರಾದ ಕೆ. ಎಸ್. ಈಶ್ವರಪ್ಪ, ವಿ. ಸೋಮಣ್ಣ, ಕೆ. ಸಿ. ನಾರಾಯಣಗೌಡ, ಕೆ. ಗೋಪಾಲಯ್ಯ ಮುಂತಾದವರು ಉಪಸ್ಥಿತರಿದ್ದರು.