"70 ವರ್ಷ ಹಿಂದಕ್ಕೆ ಹೋಗಿದ್ದು ದೇಶವಲ್ಲ, ಸಿದ್ದರಾಮಯ್ಯ ಮೆದುಳು''
ಮೈಸೂರು, ಜೂನ್ 1: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಜ್ವರ ಬಂದಿದೆ ಎಂಬ ವಿಷಯ ಕೇಳಲ್ಪಟ್ಟೆ, ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಆಶಿಸುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿ.ಟಿ ರವಿ, ""ಸಿದ್ದರಾಮಯ್ಯ ಒಬ್ಬ ಉತ್ತಮವಾಗಿ ಹಣಕಾಸು ಖಾತೆ ನಿರ್ವಹಿಸಿದ ನಾಯಕ. ಆದರೆ, ಬಿಜೆಪಿ ಆಡಳಿತದಿಂದ ದೇಶ 70 ವರ್ಷ ಹಿಂದಕ್ಕೆ ಹೋಗಿದೆ ಎನ್ನುತ್ತಾರೆ. ಅವರ ಮೆದುಳು 70 ವರ್ಷಕ್ಕೆ ಹೋಗಿದೆ'' ಎಂದು ವಾಗ್ದಾಳಿ ನಡೆಸಿದರು.
ವಿಜಯ್ ಮಲ್ಯನಿಗೆ ಸಾಲ ಕೊಟ್ಟಿದ್ದು ಮೋದಿ ಅಲ್ಲ, ಲಲಿತ್ ಮೋದಿಗೆ ಸಾಲ ಕೊಟ್ಟಿದ್ದು ಮೋದಿ ಅಲ್ಲ, ನಿಮ್ಮ ಪಕ್ಷದ ಚಿದಂಬರಂ, ಸೋನಿಯಾ ಗಾಂಧಿ ಅವರುಗಳು ಕೊಟ್ಟಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಸಿ.ಟಿ ರವಿ ಟಾಂಗ್ ನೀಡಿದರು.
ಕೋವಿಡ್ನಲ್ಲೂ ಮೋದಿ ಸರ್ಕಾರ ಸಮರ್ಥವಾಗಿದೆ
ಉದ್ಯಮಿಗಳೊಂದಿಗೆ ವ್ಯಾವಹಾರಿಕ ಸಂಬಂಧ ಇಟ್ಟುಕೊಂಡು ಸಾಲ ನೀಡಿದ್ದಾರೆ. ಕಾಂಗ್ರೆಸ್ನಲ್ಲಿ ಗುಲಾಮಗಿರಿ ಪದ್ಧತಿ ಇದೆ. ಸಿದ್ದರಾಮಯ್ಯ ಗುಲಾಮರಾಗಿದ್ದಾರೆ. ಅವರಿಗೆ ಅಸಹಾಯಕತೆ ಕಾಡುತ್ತಿದೆ ಎಂದು ಹರಿಹಾಯ್ದರು. ಕೋವಿಡ್ನಲ್ಲೂ ಮೋದಿ ಸರ್ಕಾರ ಸಮರ್ಥವಾಗಿ ನಡೆಸಿಕೊಂಡು ಹೋಗಿದೆ. ಬಾದಾಮಿ, ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ಬಿಜೆಪಿಗೆ ಲೀಡ್ ಬಂದಿದೆ ಎಂದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕೋವಿಡ್ನಂತ ಸಂದರ್ಭ ಎದುರಾಗಿರಲಿಲ್ಲ. ರಾಜ್ಯದಲ್ಲಿ ಅತಿ ಹೆಚ್ಚು ಸಾಲ ಮಾಡಿದ ಸಿಎಂ ಎಂದರೆ ಅದು ಸಿದ್ದರಾಮಯ್ಯ, ಅದನ್ನು ಅವರು ಎದೆ ತಟ್ಟಿಕೊಂಡು ಹೇಳಿಕೊಳ್ಳಬಹುದು. ಯಾವ ಕಾರಣಕ್ಕೆ ಅತಿ ಹೆಚ್ಚು ಸಾಲ ಮಾಡಿದಿರಿ? ಎಂದು ಮಾಜಿ ಸಚಿವ ಸಿ.ಟಿ ರವಿ ಪ್ರಶ್ನಿಸಿದರು.
ಕಾಂಗ್ರೆಸ್ ಹೈಕಮಾಂಡ್ಗೆ ಕಪ್ಪ ಕೊಡಬೇಕಿತ್ತು
ಕಾಂಗ್ರೆಸ್ ಹೈಕಮಾಂಡ್ಗೆ ಕಪ್ಪ ಕೊಡಬೇಕಿತ್ತು, ಆದರೆ ಅಂತಹ ದುಸ್ಥಿತಿ ನರೇಂದ್ರ ಮೋದಿ ಅವರಿಗೆ ಬಂದಿಲ್ಲ. ಜನಧನ್ ಖಾತೆಗೆ 3 ಸಾವಿರ ಹಣ ಹಾಕಿದೆ. ಉದ್ದಿಮೆದಾರರ, ಸಣ್ಣ ಕೈಗಾರಿಕೋದ್ಯಮಿಗಳಿಗೆ ಪ್ಯಾಕೇಜ್ ನೀಡಿದೆ. ನಿಮಗೂ ಸತ್ಯ ಗೊತ್ತಿದೆ, ಆದರೆ ಸತ್ಯ ಒಪ್ಪಿಕೊಂಡರೆ ಕಾಂಗ್ರೆಸ್ನಿಂದ ಹೊರ ಬರಬೇಕಾಗುತ್ತದೆ ಆದ್ದರಿಂದ ಸುಮ್ಮನಿದ್ದೀರಿ. ಈ ವಿಚಾರವಾಗಿ ಚರ್ಚೆಗೂ ನಾವು ಸಿದ್ಧ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿ.ಟಿ ರವಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ
ಕೋವಿಡ್ ಮೊದಲನೇ ಅಲೆಯನ್ನು ಸಮರ್ಥವಾಗಿ ಎದುರಿಸಿ ಎರಡನೇ ಅಲೆಯನ್ನು ಎದುರಿಸುತ್ತಿದ್ದೇವೆ. ರಾಜ್ಯದಲ್ಲಿ ಹಾಗೂ ದೇಶದಲ್ಲಿ ಇದೀಗ ಸೋಂಕು ಹತೋಟಿಗೆ ಬರುತ್ತಿದೆ. ಕೋವಿಡ್ ಎದುರಿಸಲು ಸರ್ಕಾರದ ಬೆಂಬಲಕ್ಕೆ ನೂರಾರು ಸಂಘ-ಸಂಸ್ಥೆಗಳಿವೆ. ಕಾಂಗ್ರೆಸ್ ನಂತರ ನಾವು ಒಂದು ಜವಾಬ್ದಾರಿಯುತ ಪಕ್ಷವಾಗಿ ನಡೆದುಕೊಳ್ಳುತ್ತಿದ್ದೇವೆ. ಈ ವಿಚಾರದಲ್ಲಿ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕಿಡಿಕಾರಿದರು.
ಅಡ್ಡಗೋಡೆ ಮೇಲೆ ದೀಪವಿಟ್ಟ ಸಿ.ಟಿ ರವಿ
ಸದ್ಯಕ್ಕೆ ಬಿ.ಎಸ್ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ. ಭವಿಷ್ಯದ ಬಗ್ಗೆ ನನಗೆ ಗೊತ್ತಿಲ್ಲ. ನಾನು ವರ್ತಮಾನ ಬಗ್ಗೆ ಮಾತ್ರ ಮಾತನಾಡಬಲ್ಲೆ. ನಾಳೆ, ನಾಡಿದ್ದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಸಿ.ಟಿ ರವಿ ಮಾತನಾಡಿದರು.
ಬಿಜೆಪಿ ಪಕ್ಷ ಸರ್ವಾನುಮತದಿಂದ ಯಡಿಯೂರಪ್ಪನವರನ್ನು ಆಯ್ಕೆ ಮಾಡಿದೆ. ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಬಹುಮತದಿಂದ ಮುಖ್ಯಮಂತ್ರಿ ಆಯ್ಕೆ ಮಾಡಬಹುದು. ಆದರೆ ಸರ್ವಾನುಮತದಿಂದ ಸಾಧ್ಯವಿಲ್ಲ ಎಂದು ಉತ್ತರಿಸಿದ ಅವರು, ಯಾರು ದೆಹಲಿಗೆ ಹೋಗಿದ್ದಾರೆ ಎಂಬುದು ಗೊತ್ತಿಲ್ಲ. ಈ ವಿಚಾರ ನನಗೇನು ಗೊತ್ತಿಲ್ಲ, ನನಗೆ ಸಂಬಂಧವಿಲ್ಲ. ವಿಜಯೇಂದ್ರ ವೈಯುಕ್ತಿಕ ಕಾರಣಕ್ಕೂ ಹೋಗಿರಬಹುದು. ಸದ್ಯ ಈ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮೈಸೂರಿನಲ್ಲಿ ಸ್ಪಷ್ಟಪಟಿಸಿದರು.