ಯುಪಿಎ ಸರಕಾರದ ಸಾಧನೆಯಿಂದ ಬಿಜೆಪಿಗೆ ಹೊಟ್ಟೆಕಿಚ್ಚು: ಮೊಯಿಲಿ
ಮೈಸೂರು, ಮೇ 27: ಈ ಹಿಂದಿನ ಯುಪಿಎ ಸರಕಾರದ ಸಾಧನೆಯಿಂದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ ಹೊಟ್ಟೆ ಕಿಚ್ಚು ಶುರುವಾಗಿದ್ದು, ನಮ್ಮ ಸರಕಾರ ಮಾಡಿದ ಸಾಧನೆಯನ್ನು ತನ್ನದು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದೆ ಎಂದು ಕೇಂದ್ರ ಸರಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ- ಸಂಸದ ವೀರಪ್ಪ ಮೊಯಿಲಿ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಕೇಂದ್ರ ಸರಕಾರ ಮೂರು ವರ್ಷ ಪೂರ್ಣ ಮಾಡಿದ್ದೇ ಹೆಚ್ಚು. ನಮ್ಮ ಯುಪಿಎ ಸರಕಾರದ ಸಾಧನೆಯನ್ನು ತಮ್ಮ ಸಾಧನೆ ಎನ್ನುತ್ತಿದ್ದಾರೆ. ದೇಶದ ಉನ್ನತಿಗೆ ಅಡಿಪಾಯ ಹಾಕಿದ್ದು ಕಾಂಗ್ರೆಸ್ ಎಂದರು.[ನಾಲ್ಕು ತಾಸಿನಲ್ಲಿ ಮಂಗಳೂರಿನಿಂದ ಬೆಂಗಳೂರು ತಲುಪುವ ರಸ್ತೆ ಯೋಜನೆ]
ಮಾಜಿ ಸಂಸದ ಎಚ್.ವಿಶ್ವನಾಥ್ ಪಕ್ಷ ಬಿಡುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಿಶ್ವನಾಥ್ ನನ್ನ ಸಂಪರ್ಕದಿಂದ ದೂರವಾಗಿ ಬಹಳ ದಿನವಾಗಿದೆ. ನಾನು ಪ್ರತಿಕ್ರಿಯೆ ನೀಡಲಾರೆ ಎಂದರು. ಕೆಪಿಸಿಸಿ ಅಧ್ಯಕ್ಷರ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಕೆಪಿಸಿಸಿ ಅಧ್ಯಕ್ಷರ ನೇಮಕ ಹೈಮಾಂಡ್ ಗೆ ಬಿಟ್ಟಿದ್ದು. ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ ಎಂದು ಹೇಳಿದರು.