ಸರ್ಕಾರ ಗಲಭೆಕೋರರಿಂದಲೇ ನಷ್ಟ ಭರಿಸಬೇಕು; ಮೈಸೂರು ಬಿಜೆಪಿ ಅಧ್ಯಕ್ಷ
ಮೈಸೂರು, ಆಗಸ್ಟ್ 12: ಬೆಂಗಳೂರಿನಲ್ಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಯ ಮೇಲೆ ದಾಳಿ ಮಾಡಿದ್ದಲ್ಲದೆ ಸಾರ್ವಜನಿಕರ ಆಸ್ತಿ-ಪಾಸ್ತಿ ನಷ್ಟವನ್ನುಂಟು ಮಾಡಿರುವ ಕೃತ್ಯ ಖಂಡನಾರ್ಹ. ಪೊಲೀಸರು, ಮಾಧ್ಯಮದವರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸುತ್ತೇನೆ ಎಂದು ಮೈಸೂರು ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್.ಶ್ರೀವತ್ಸ ಹೇಳಿದ್ದಾರೆ.
Recommended Video
ಮೈಸೂರಿನಲ್ಲಿ ಇಂದು ಮಾತನಾಡಿದ ಅವರು, "ಶಾಸಕರೊಬ್ಬರ ಮನೆಗೆ ನುಗ್ಗಿ ಧ್ವಂಸ ಮಾಡಿರುವುದು ನಾಚಿಕೆಗೇಡು. ಸಾರ್ವಜನಿಕ ಆಸ್ತಿಪಾಸಿಗಳಿಗೆ ಹಾನಿ ಮಾಡಿದ್ದಾರೆ. ಸಾರ್ವಜನಿಕರ ವಾಹನ, ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಿ ಬೆಂಕಿ ಹಚ್ಚಿರುವುದು ಸರಿಯಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಾಜದ ಶಾಂತಿ ಹದಗೆಡಿಸಲು, ಕೋಮುಗಲಭೆಯನ್ನು ಹುಟ್ಟು ಹಾಕುತ್ತಿರುವ ಪಿಎಫ್ ಐ, ಎಸ್ಡಿಪಿಐ ಸಂಘಟನೆಗಳ ಕಾರ್ಯಕರ್ತರು ಈ ಘಟನೆಯಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಲ್ಲರನ್ನು ಕೂಡಲೇ ಬಂಧಿಸುವ ಜತೆಗೆ ಸಂಘಟನೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಗಲಭೆಕೋರರಿಂದ ಹಲವು ಬಡಾವಣೆಗಳ ಕಿಟಕಿ ಗಾಜುಗಳು, ವಾಹನಗಳು ಹಾನಿಗೀಡಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಪರಿಹಾರ ಕಲ್ಪಿಸಬೇಕು. ಗಲಭೆಕೋರರಿಂದಲೇ ನಷ್ಟವನ್ನು ಭರಿಸುವಂತಹ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಹೇಳಿದ್ದಾರೆ.
ಕೊರೊನಾ ಸಮಸ್ಯೆಯ ನಡುವೆ ಕೆಲಸ ಮಾಡುತ್ತಿರುವ ಮಾಧ್ಯಮದವರು, ಪೊಲೀಸರ ಮೇಲೆ ಹಲ್ಲೆ ನಡೆಸಿದ ಕೃತ್ಯವನ್ನು ಸಹಿಸಲಾಗದು. ಈ ವಿಚಾರದಲ್ಲಿ ಯಾರೇ ತಪ್ಪು ಎಸಗಿದ್ದರೂ ಅಂತಹವರನ್ನು ಬಂಧಿಸಿ ಜೈಲಿಗಟ್ಟಬೇಕು. ಸಮಾಜದಲ್ಲಿ ಹಗಲಿರುಳು ಕೆಲಸ ಮಾಡುವ ಪತ್ರಕರ್ತರಿಗೆ ಗಲಭೆಯ ವೇಳೆ ಸೂಕ್ತ ರಕ್ಷಣೆ ಕೊಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹಸಚಿವ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದರು.