ಆನಂದ್ ಸಿಂಗ್ ಇಂದ ರಾಜೀನಾಮೆ ಪರ್ವ ಶುರು: ಆರ್ ಅಶೋಕ್
ಮೈಸೂರು, ಜುಲೈ 1: ಈ ಸಮ್ಮಿಶ್ರ ಸರ್ಕಾರ ಬೀಳುವುದು ಖಚಿತ. ಆದರೆ ಇದರಲ್ಲಿ ಬಿಜೆಪಿ ಪಾತ್ರ ಇರುವುದಿಲ್ಲ. ಆನಂದ್ ಸಿಂಗ್ ರಾಜೀನಾಮೆಯಿಂದ ಶಾಸಕರ ರಾಜೀನಾಮೆಯ ಪರ್ವ ಶುರುವಾಗಲಿದೆ ಎಂದು ಬಿಜೆಪಿ ಶಾಸಕ ಆರ್ ಅಶೋಕ್ ತಿಳಿಸಿದ್ದಾರೆ.
ಜೆಡಿಎಸ್ ಪಕ್ಷಕ್ಕೆ ದಿಕ್ಕು ದಿಸೆಯಿಲ್ಲ: ವ್ಯಂಗ್ಯವಾಡಿದ ಆರ್ ಅಶೋಕ್
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನಂದ್ ಸಿಂಗ್ ಒಬ್ಬರೇ ಇದ್ದಂತಿಲ್ಲ. ಅವರ ಜೊತೆ ಕೆಲವರು ಇದ್ದಾರೆ. ಲಾಟರಿಯಿಂದ ಸಿಎಂ ಆದ ಕುಮಾರಸ್ವಾಮಿ ಅವರು ಲಾಟರಿಯಿಂದಲೇ ಹೋಗುತ್ತಾರೆ. ಈ ಸರ್ಕಾರ ಕುಮಾರಸ್ವಾಮಿ, ಶಿವಕುಮಾರ್ ಗೆ ಬೇಕಾಗಿದೆ ಅಷ್ಟೆ. ಸಿದ್ದರಾಮಯ್ಯ ಸಮೇತವಾಗಿ ಬೇರೆ ಯಾರಿಗೂ ಬೇಕಾಗಿಲ್ಲ. ಸಿಎಂ ಅವರೇ ನಾನು ಅನಾಥ ಶಿಶು ಎಂದು ಹೇಳಿದ್ದಾರೆ. ಸರ್ಕಾರವೂ ಅನಾಥವಾಗಿ ಹೋಗಲಿದೆ. ಇನ್ನೆರಡು ದಿನ ಕಾದು ನೋಡಿ, ಅವರವರೇ ಕಚ್ಚಾಡಿಕೊಂಡು ಹೊರಬರುತ್ತಾರೆ. ಇದರಲ್ಲಿ ನಮ್ಮ ಪಾತ್ರಗಳಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಆನಂದ್ ಸಿಂಗ್ ರಾಜೀನಾಮೆಯಿಂದ ಸರ್ಕಾರ ಪತನವಾಗುತ್ತದೆ. ಇದು ಬೀಳುವ ಸರ್ಕಾರ. ಅದಷ್ಟು ಬೇಗ ಸರ್ಕಾರ ಬೀಳಿಸಲು ಕಾಂಗ್ರೆಸ್-ಜೆಡಿಎಸ್ ನಲ್ಲಿ ಅತೃಪ್ತ ಶಾಸಕರು ಗುಂಪುಗಾರಿಕೆ ಶುರು ಮಾಡಿದ್ದಾರೆ. ಅದು ಸ್ಫೋಟ ಆಗುವುದಕ್ಕೆ ಆನಂದ್ ಸಿಂಗ್ ಅವರು ಗುದ್ದಲಿ ಪೂಜೆ ಮಾಡಿದ್ದಾರೆ ಅಷ್ಟೇ ಎಂದರು.