ಸಾಮಾಜಿಕ ನ್ಯಾಯ, ಮೀಸಲಾತಿ ವಿರುದ್ಧ ಬಿಜೆಪಿ ಇದೆ: ಸಿದ್ದರಾಮಯ್ಯ ಆರೋಪ
ಮೈಸೂರು, ಆಗಸ್ಟ್ 11: "ಸಾಮಾಜಿಕ ನ್ಯಾಯ ಹಾಗೂ ಮೀಸಲಾತಿ ವಿರುದ್ಧ ಇರುವ ಬಿಜೆಪಿ ಯಾವತ್ತೂ ಹಿಂದುಳಿದ ವರ್ಗಗಳ ಪರವಾಗಿ ಇಲ್ಲ," ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, "ಬಿಜೆಪಿ ಎಲ್ಲಾ ಹಂತದಲ್ಲೂ ಮೀಸಲಾತಿಗೆ ವಿರೋಧ ಮಾಡಿದ್ದಾರೆ. ಒಂದೊಮ್ಮೆ ಬಿಜೆಪಿ ಮೀಸಲಾತಿ ಪರವಾಗಿದ್ದಿದ್ದರೆ, ಸಂವಿಧಾನ ಬದಲಾಗಬೇಕು ಅಂತಿರಲಿಲ್ಲ. ಮೀಸಲಾತಿ ವಿಚಾರ ಬಂದಾಗೆಲ್ಲ ಆರ್ಎಸ್ಎಸ್ನವರು ಅದನ್ನು ನಿಲ್ಲಿಸಬೇಕು ಅಂತ ಮುಂದಾದರು. ಜೊತೆಗೆ ಸಂವಿಧಾನ ಬದಲಾಯಿಸಬೇಕು ಅಂತ ಹುನ್ನಾರ ಮಾಡಿದರು. ಈಗ ಮುಂದುವರಿದ ಜಾತಿಗಳಲ್ಲೂ ಕೂಡಾ ಬಡವರಿಗೆ ಮೀಸಲಾತಿ ಕೊಟ್ಟಿದ್ದಾರೆ. ಆದಾದ ಬಳಿಕ ಆರ್ಎಸ್ಎಸ್ ಅಜೆಂಡಾ ಬದಲಾಗಿದ್ದು, ಈಗ ಅವರು ಮೀಸಲಾತಿ ಬಗ್ಗೆ ಮಾತನಾಡುತ್ತಿಲ್ಲ,'' ಎಂದು ಟೀಕಿಸಿದರು.
ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ಸಂವಿಧಾನ ಬಾಹಿರ
"ಅದಕ್ಕಾಗಿ ಸರ್ಕಾರ ಜಾತಿ ಗಣತಿ ಮಾಡಿಸಬೇಕು. ಆಗ ಸಮಾಜದಲ್ಲಿ ಯಾರು ಬಡತನದಲ್ಲಿದ್ದಾರೆ ಅಂತಾ ಗೊತ್ತಾಗಲಿದೆ. ಆ ವೇಳೆ ವಿಶೇಷವಾಗಿ ಆ ಜನರಿಗೆ ಮೀಸಲಾತಿ ನೀಡಲು ಅನುಕೂಲವಾಗಲಿದ್ದು, ಇದು ಒಂದು ದಾಖಲೆಯಾಗಿ ಉಳಿಯುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಜಾತಿಗಣತಿ ಮಾಡಿದರೆ ಜಾತಿ ಜಾತಿಗಳ ನಿಖರ ಸಂಖ್ಯೆ ಗೊತ್ತಾಗುತ್ತದೆ. ಇದರಿಂದ ಸಮಾಜದಲ್ಲಿ ಬಡತನದಲ್ಲಿರುವವರಿಗೆ ವಿಶೇಷ ಯೋಜನೆ ಕೊಡಬಹುದಾಗಿದ್ದು, ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಜಾತಿ ಗಣತಿ ಆಗಬೇಕು," ಎಂದು ಆಗ್ರಹಿಸಿದರು.
ಜಾತಿಗಣತಿ ವರದಿ ಪಡೆಯುತ್ತೇವೆ
"ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಜಾತಿಗಣತಿ ವರದಿ ತೆಗೆದುಕೊಳ್ಳಲಿದ್ದು, ಸರ್ಕಾರ ಬಂದ ವೇಳೆ ಮಾಡುವ ಮೊದಲ ಕೆಲಸವೇ ರಿಪೋರ್ಟ್ ಪಡೆಯುವುದು. ಈ ವರದಿ ತೆಗೆದುಕೊಂಡು ಅದನ್ನು ಚರ್ಚೆಗೆ ಇಡುತ್ತೇನೆ, ರಿಪೋರ್ಟ್ ಪಡೆಯದಿದ್ದರೆ ಅದರಲ್ಲಿ ಎನಿದೆ ಅಂತ ತಿಳಿಯೋದಾದರೂ ಹೇಗೆ? ಎಂದು ಪ್ರಶ್ನಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ನನ್ನ ಸರ್ಕಾರ ಇದ್ದಾಗ ಜಾತಿಗಣತಿ ಮಾಡಿಸಿದ್ದೆ, ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಅದು ರೆಡಿಯಾಯ್ತು. ಆದರೆ ಅಂದು ಸಚಿವರಾಗಿದ್ದ ಪುಟ್ಟರಂಗಶೆಟ್ಟಿಗೆ ರಿಪೋರ್ಟ್ ಪಡೆಯದಂತೆ ಕುಮಾರಸ್ವಾಮಿ ಸೂಚಿಸಿದರು. ಆದರೆ ನಾನು ಅದನ್ನು ರಿಪೋರ್ಟ್ ತೆಗೆದುಕೊಂಡು ಚರ್ಚೆ ಮಾಡಿಸುತ್ತೇನೆ,'' ಎಂದು ಹೇಳಿದರು.
ಅಸಮಾಧಾನ ಸ್ಪೋಟವಾಗಲಿದೆ
ಇದೇ ವೇಳೆ ಸಚಿವ ಆನಂದ ಸಿಂಗ್ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿದ್ದರಾಮಯ್ಯ, "ಸಚಿವ ಆನಂದ್ ಸಿಂಗ್ ರಾಜೀನಾಮೆ ವಿಚಾರದಿಂದ ಬಿಜೆಪಿ ಸಂಪುಟ ರಚನೆಯಲ್ಲಿ ಮನಸ್ತಾಪ ಇದೆ ಅನ್ನುವುದನ್ನು ತೋರಿಸುತ್ತಿದೆ. ಸಂಪುಟ ರಚನೆ ವೇಳೆಯೇ ಅಸಮಾಧಾನ ಹೊಗೆಯಾಡ್ತಿತ್ತು. ಇದು ಮುಂದೆ ಜ್ವಾಲೆಯಾಗಿ ಸ್ಪೋಟ ಆಗುವ ಲಕ್ಷಣ ಇದೆ. ಯಾರಿಗೆ ಸಾಮಾಜಿಕ ನ್ಯಾಯದ ಮೇಲೆ ಗೌರವ ಇಲ್ಲವೋ ಅಂತವರ ಕೈಯಲ್ಲಿ ಉತ್ತಮ ಆಡಳಿತ ಕೊಡಲು ಹೇಗೆ ಸಾಧ್ಯ," ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಎಲ್ಲವನ್ನು ನೀವೆ ಸೃಷ್ಠಿ ಮಾಡ್ತೀರಾ
ಶಾಸಕ ಜಮೀರ್ ಅಹ್ಮದ್ ಜೊತೆಗೆ ಸಿದ್ದರಾಮಯ್ಯ ಅಂತರ ಕಾಯ್ದುಕೊಂಡರು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, "ಇವೆಲ್ಲವನ್ನೂ ನೀವೇ ಸೃಷ್ಟಿ ಮಾಡ್ಕೊಳ್ತೀರಾ? ಆ ರೀತಿ ಏನೂ ಆಗಿಲ್ಲ, ಜಮೀರ್ ಅಜ್ಮೀರ್ಗೆ ಹೋಗಿದ್ದರು. ಡಿ.ಕೆ. ಶಿವಕುಮಾರ್ ಹಾಗೂ ಜಮೀರ್ ಭೇಟಿ ಮಾಡಿರುವ ವಿಚಾರದಲ್ಲಿ ಯಾವುದೇ ಬಣ್ಣ ಕಟ್ಟುವ ಅಗತ್ಯವಿಲ್ಲ. ಅವರು ಪಕ್ಷದ ಅಧ್ಯಕ್ಷನಾಗಿ ಭೇಟಿ ಮಾಡಿದ್ದಾರೆ," ಎನ್ನುವ ಮೂಲಕ ಜಮೀರ್ ಅಹ್ಮದ್ರನ್ನು ಮಾತನಾಡಿಸಿಲ್ವಾ? ಎಂಬ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡದ ಸಿದ್ದರಾಮಯ್ಯ, ಮಾಧ್ಯಮದ ಕಡೆಗೆ ಬೊಟ್ಟು ಮಾಡಿದರು.
ಕಮಿಟ್ಮೆಂಟ್ ಇದ್ದರೆ ಯೋಜನೆ ಮಾಡಲಿ
ಇದೇ ವೇಳೆ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಮಾತನಾಡಿದ ಸಿದ್ದರಾಮಯ್ಯ, "ತಮಿಳುನಾಡಿನ ಪಾಲಿಗೆ ಧಕ್ಕೆ ಆದಾಗ ಮಾತ್ರ ವಿರೋಧ ಮಾಡ್ತಾರೆ. ಸರ್ಕಾರಕ್ಕೆ ಕಮಿಟ್ಮೆಂಟ್ ಇದ್ದರೆ ಯೋಜನೆ ಮಾಡಬೇಕು. ಕೇಂದ್ರದ ಟ್ರಿಬ್ಯೂನಲ್ ಬಳಿ ಹೋಗಿ ಅನುಮತಿ ಪಡೆಯಲಿ. ಆ ನಂತರ ಯೋಜನೆ ಪ್ರಾರಂಭ ಮಾಡಲಿ. ಅದನ್ನು ಬಿಟ್ಟು ತಮಿಳುನಾಡಿಗೆ ಪತ್ರ ಬರೆದು ಕೇಳುತ್ತೇವೆ, ಮಾಡುತ್ತೇವಿ ಅಂದ್ರೆ ಹೇಗೆ? ಮೊದಲು ಯೋಜನೆಯನ್ನು ಕೈಗೆತ್ತಿಕೊಂಡು ಶುರು ಮಾಡಬೇಕು,'' ಎಂದರು.
ನಾಳೆ ಸಿದ್ದರಾಮಯ್ಯ ಹುಟ್ಟುಹಬ್ಬ
ಸಿದ್ದರಾಮಯ್ಯ ಅವರು ಮೈಸೂರಿಗೆ ಆಗಮಿಸಿರುವ ಹಿನ್ನೆಲೆಯಲ್ಲಿ ನೂರಾರು ಮಂದಿ ಕಾರ್ಯಕರ್ತರು ಮಾಜಿ ಸಿಎಂ ಮನೆಗೆ ಆಗಮಿಸಿದ್ದರು. ಅಲ್ಲದೇ ಆ.12ರಂದು ಸಿದ್ದರಾಮಯ್ಯ ಅವರ ಜನ್ಮದಿನದ ಹಿನ್ನೆಲೆಯಲ್ಲಿ ನೂರಾರು ಮಂದಿ ಕಾರ್ಯಕರ್ತರು ಹಾಗೂ ಮುಖಂಡರು, ಸಿದ್ದರಾಮಯ್ಯರಿಗೆ ಶುಭಾಶಯ ತಿಳಿಸಲು ಮುಗಿಬಿದ್ದರು. ಈ ವೇಳೆ ತಮ್ಮ ಜನ್ಮದಿನದ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, "3/8/1947 ಇದು ನಾನು ಶಾಲೆಗೆ ದಾಖಲಾದ ದಿನವಾಗಿದ್ದು, ಇದು ತಪ್ಪಾಗಿ 12/8/1947 ಅಂತ ಆಗಿದೆ. 1957 ನಲ್ಲಿ 5ನೇ ತರಗತಿ ಸೇರಿಕೊಂಡೆ. ಮೇಷ್ಟ್ರು ಮಾಡಿಕೊಂಡ ಎಡವಟ್ಟಿನಿಂದ ದಿನಾಂಕ ತಪ್ಪಾಗಿದೆ. ಆದರೆ ನಾನು ಎಂದಿಗೂ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ನಾನು ಹುಟ್ಟಿದ ದಿನಾಂಕ ನಮ್ಮ ಅಪ್ಪ- ಅಮ್ಮ, ನನ್ನ ಮೇಷ್ಟ್ರಿಗೂ ಗೊತ್ತಿಲ್ಲ,'' ಎಂದರು.