"ರೋಷನ್ ಬೇಗ್ ಗೆ ಬಿಜೆಪಿ ಯಾವುದೇ ಆಶ್ವಾಸನೆ ಕೊಟ್ಟಿರಲಿಲ್ಲ"
ಮೈಸೂರು, ನವೆಂಬರ್ 24: ಬಿಜೆಪಿಯಲ್ಲಿ ಯಾವುದೇ ಟೀಂ ಇಲ್ಲ. ಬಾಂಬೆ ಟೀಂ, ಹಳೇ ಟೀಂ, ಹೊಸ ಟೀಂ ಎಂದೆಲ್ಲ ಇಲ್ಲ. ನಾವೆಲ್ಲರೂ ಒಂದೇ, ಅದು ಬಿಜೆಪಿ ಟೀಂ.
ಒಂದಿಬ್ಬರು ಮಾತನಾಡಿದರೆ ಇಡೀ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ಇದೆ ಎಂದಲ್ಲ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
"ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಅಪಸ್ವರ ಬೇಡ"
ಯಾವುದೇ ಕಾರಣಕ್ಕೂ ನಾಯಕತ್ವ ಬದಲಾವಣೆ ಇಲ್ಲ. ಬಿ.ಎಸ್.ಯಡಿಯೂರಪ್ಪ ಅವರೇ ನಮ್ಮ ಮುಖ್ಯಮಂತ್ರಿಗಳು. ಇದೆಲ್ಲ ಊಹಾಪೋಹ. ನಮಗೆಲ್ಲರಿಗೂ ಟಿಕೆಟ್ ನೀಡಿ ಸಚಿವ ಸ್ಥಾನವನ್ನು ನೀಡುವ ಮೂಲಕ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ಕೊಟ್ಟ ಮಾತಿನಂತೆ ನಡೆದರು. ಅವರು ಎಂದಿಗೂ ಮಾತು ತಪ್ಪಿದವರಲ್ಲ ಎಂದು ಹೇಳಿದರು. ಮುಂದೆ ಓದಿ...
"ರೋಷನ್ ಬೇಗ್ ಕಾಂಗ್ರೆಸ್ ಒಳರಾಜಕೀಯದಿಂದ ಹೊರಬಂದವರು"
ರೋಷನ್ ಬೇಗ್ ಅವರು ಬಿಜೆಪಿ ನಂಬಿ ಬಂದವರಲ್ಲ. ಐಎಂಎ ಪ್ರಕರಣದಲ್ಲಿ ಅವರನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ. ಅವರು ಏನೂ ತಪ್ಪು ಮಾಡಿಲ್ಲ ಎಂದಾದರೆ ಹೊರಗಡೆ ಬರುತ್ತಾರೆ. ಬೇಗ್ ಅವರು ಕಾಂಗ್ರೆಸ್ ಪಕ್ಷದ ಒಳರಾಜಕೀಯದಿಂದ ಬೇಸತ್ತು ಹೊರಬಂದಿದ್ದಾರೆಯೇ ವಿನಃ ಬಿಜೆಪಿಗೋಸ್ಕರ ಬಂದಿರಲಿಲ್ಲ. ಅವರಿಗೆ ಬಿಜೆಪಿ ಯಾವುದೇ ತರಹದ ಆಶ್ವಾಸನೆ ಕೊಟ್ಟಿರಲಿಲ್ಲ. ಅವರಿಗೆ ಬೇಕಿದ್ದರೆ ಶಿವಾಜಿನಗರದಲ್ಲಿ ಪಕ್ಷ ಟಿಕೆಟ್ ಕೊಡುತ್ತಿತ್ತು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜೂನ್ ಒಳಗೆ 5 ಸಾವಿರ ಉದ್ಯೋಗ
ಕೋವಿಡ್ ಸಂಕಷ್ಟ ಕಾಲದಲ್ಲಿ ಅನೇಕರಿಗೆ ಉದ್ಯೋಗ ನಷ್ಟವಾಗಿದೆ. ಹಲವರಿಗೆ ಉದ್ಯೋಗ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ 40 ಸಾವಿರ ಸಹಕಾರ ಸಂಘಗಳ ಮೂಲಕ 5 ಸಾವಿರ ಉದ್ಯೋಗವನ್ನು ಜೂನ್ ಒಳಗೆ ಸೃಷ್ಟಿಸಲು ಸೂಚನೆ ನೀಡಿದ್ದೇನೆ. ಯಾವ ಯಾವ ವಿಭಾಗದಿಂದ ಯಾವ ಯಾವ ಹಾಗೂ ಎಷ್ಟು ಉದ್ಯೋಗವನ್ನು ನೀಡುತ್ತಿದ್ದೇವೆ ಎಂಬ ಮಾಹಿತಿಯನ್ನು ಹಂತ ಹಂತವಾಗಿ ನೀಡುತ್ತೇನೆ ಎಂದು ಸಚಿವರು ತಿಳಿಸಿದರು.
39300 ಕೋಟಿ ರೂಪಾಯಿ ಸಾಲ
ಆರ್ಥಿಕ ಸ್ಪಂದನ ಕಾರ್ಯಕ್ರಮಗಳ ಮೂಲಕ ರಾಜ್ಯದ ಬೆಂಗಳೂರು, ಮೈಸೂರು, ಕಲಬುರಗಿ ಹಾಗೂ ಬೆಳಗಾವಿ ವಿಭಾಗಗಳ ಮೂಲಕ ಚಾಲನೆ ಕೊಟ್ಟು 39300 ಕೋಟಿ ರೂಪಾಯಿ ಸಾಲ ನೀಡುತ್ತಿದ್ದೇವೆ. ಅಲ್ಲದೆ, ಈ ಯೋಜನೆಯ ಸದ್ವಿನಿಯೋಗವಾಗಬೇಕು, ಪಾರದರ್ಶಕವಾಗಿರಬೇಕು ಎಂಬ ನಿಟ್ಟಿನಲ್ಲಿ ನಾಲ್ಕು ವಿಭಾಗಗಳಿಗೂ ನೋಡಲ್ ಅಧಿಕಾರಿಗಳ ನೇಮಕ ಮಾಡಿದ್ದೇವೆ ಎಂದು ಸೋಮಶೇಖರ್ ತಿಳಿಸಿದರು.
ರೈತರಿಗೆ 15300 ಕೋಟಿ ರೂ. ಸಾಲ ನೀಡುವ ಗುರಿ
ರೈತರಿಗೆ ಬೆಳೆ ಸಾಲವಾಗಿ ಪ್ರಸಕ್ತ ಸಾಲಿನಲ್ಲಿ 24.50 ಲಕ್ಷ ರೈತರಿಗೆ ಒಟ್ಟು 15300 ಕೋಟಿ ರೂ. ಸಾಲ ನೀಡುವ ಗುರಿ ಹಾಕಿಕೊಂಡಿದ್ದು, ಇಲ್ಲಿಯವರೆಗೆ 15,22,076 ರೈತರಿಗೆ 9945.82 ಕೋಟಿ ರೂಪಾಯಿ ಸಾಲ ನೀಡಿದ್ದೇವೆ. ಶೀಘ್ರದಲ್ಲಿ ಗುರಿ ತಲುಪಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭ ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿ, "ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದು, ಸರ್ಕಾರ ಯಾವುದೇ ಸಮಸ್ಯೆ ಇಲ್ಲದೆ ನಡೆಯುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಬಿಜೆಪಿ ಸಭೆಯಾಗಿದ್ದು, ಒಟ್ಟು 6 ವಿಭಾಗಗಳನ್ನು ಮಾಡಲಾಗಿದೆ. ಮೈಸೂರು ವಿಭಾಗಕ್ಕೆ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಅವರ ಜೊತೆಗೆ ನಾನು ಹಾಗೂ ಸಚಿವರಾದ ನಾರಾಯಣಗೌಡ ಅವರೂ ಇದ್ದೇವೆ ಎಂದು ತಿಳಿಸಿದರು.