ಪ್ರತಿಬಾರಿಯೂ ಕೊಡಗಿನವರಿಗೆ ಟಿಕೆಟ್ ಸಿಗುವುದಿಲ್ಲವೆಂಬ ಬೇಸರ !
ಮೈಸೂರು, ಮಾರ್ಚ್ 16 : ಮೈಸೂರು - ಕೊಡಗು ಲೋಕಸಭಾ ಕ್ಷೇತ್ರಕ್ಕೆ ಕೊಡಗು ಜಿಲ್ಲೆಯಿಂದಲೂ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಗಳು ಟಿಕೆಟ್ ಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದು, ಜಾ.ದಳ ಹೊರತುಪಡಿಸಿ ಕಾಂಗ್ರೆಸ್ ಮತ್ತು ಬಿಜೆಪಿಯ ನಾಯಕರು ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.
ಈ ಜಿಲ್ಲೆಗೆ ಪ್ರತ್ಯೇಕವಾದ ಲೋಕಸಭಾ ಕ್ಷೇತ್ರ ಇಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ. ಇದುವರೆಗೆ ಕೊಡಗು ಜಿಲ್ಲೆಯ ಯಾವೊಬ್ಬ ಕೂಡ ರಾಷ್ಟ್ರೀಯ ಪಕ್ಷಗಳ ಮುಖಾಂತರ ಚುನಾವಣೆಗೆ ಸ್ಪರ್ಧಿಸಿಲ್ಲ. ಇದೀಗ ಕೊಡಗು ಜಿಲ್ಲೆಯ ಕೆಲವು ಪ್ರಭಾವಿ ನಾಯಕರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛೆ ವ್ಯಕ್ತಪಡಿಸಿದ್ದು, ರಾಜ್ಯ ನಾಯಕರ ಹಿಂದೆ ಬಿದ್ದಿದ್ದಾರೆ.
ದೇವೇಗೌಡರು ಸ್ಪರ್ಧೆ ಮಾಡಿದರೆ ಹೆದರುವುದಕ್ಕೆ ನಾನು ಸೀರೆ ಉಟ್ಟಿಲ್ಲ: ಜಿಎಸ್ ಬಿ
ಈಗಾಗಲೇ ಮೈಸೂರು - ಕೊಡಗು ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ನಲ್ಲಿ ಟಿಕೆಟ್ ಗಾಗಿ ಪೈಪೋಟಿ ಶುರುವಾಗಿದೆ. ದಿನಕ್ಕೊಬ್ಬರು ಆಕಾಂಕ್ಷಿಗಳು ಹುಟ್ಟಿಕೊಳ್ಳುತ್ತಿದ್ದು, ಪ್ರತಿ ಚುನಾವಣೆಯಲ್ಲೂ ಹೊರಗಿನ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುತ್ತಿದೆ.
ಈ ಬಾರಿ ಜಿಲ್ಲೆಯ ಸೂಕ್ತ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂಬ ಅಭಿಪ್ರಾಯ ಕೂಡಾ ವ್ಯಕ್ತವಾಗಿದೆ. ಮೈತ್ರಿ ಸರ್ಕಾರದ ಮಾತುಕತೆಯ ಮೂಲಕ ಮೈಸೂರು - ಕೊಡಗು ಕ್ಷೇತ್ರವನ್ನು ಕಾಂಗ್ರೆಸ್ ಪಡೆದುಕೊಂಡಿದ್ದು, ಕೊಡಗಿನ ಕಾಂಗ್ರೆಸ್ ಮುಖಂಡರ ಆಗ್ರಹದಂತೆ ಕಳೆದ ವಿಧಾನಸಭಾ ಚುನಾವಣೆ ವೇಳೆ ಮಡಿಕೇರಿ ಕ್ಷೇತ್ರದಿಂದ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಟಿಕೇಟ್ ತಪ್ಪಿಸಿಕೊಂಡಿದ್ದ ಉಚ್ಚ ನ್ಯಾಯಾಲಯದ ವಕೀಲ ಚಂದ್ರಮೌಳಿ ಹಾಗೂ ವಿಧಾನಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿ ಬ್ರಿಜೇಶ್ ಕಾಳಪ್ಪ ಇಬ್ಬರು ರೇಸ್ ನಲ್ಲಿದ್ದಾರೆ .
ಲೋಕಸಭಾ ಚುನಾವಣೆ ಹೊತ್ತಿಗೆ ಗೌಡರ ಕುಟುಂಬದಲ್ಲಿ ಯಾರ್ಯಾರು, ಏನೇನು?
ಇತ್ತ ಮೈತ್ರಿ ಧರ್ಮವನ್ನು ಪಾಲಿಸಲು ಮುಂದಾಗಿರುವ ದಳ ತಟಸ್ಥವಾಗಿದ್ದು ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೆಂಬಲ ಸೂಚಿಸಲು ತಯಾರಾಗಿ ನಿಂತಿದೆ. ಇನ್ನು ಮಾಜಿ ಸಂಸದ ವಿಜಯಶಂಕರ್ ಕಾಂಗ್ರೆಸ್ ನ ಪ್ರಬಲ ಅಭ್ಯರ್ಥಿಯಾಗಿ ಮುಂಚೂಣಿಯಲ್ಲಿದ್ದು, ಹೈಕಮಾಂಡ್ ಸೂಚನೆಗಾಗಿ ಕಾದು ಕುಳಿತಿದ್ದಾರೆ.
ಬಿಜೆಪಿಯಿಂದ ಹಾಲಿ ಸಂಸದ ಪ್ರತಾಪ್ ಸಿಂಹ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಅದರ ನಡುವೆಯೇ ಕೊಡಗಿನವರಿಗೆ ಬಿಜೆಪಿಯಿಂದ ಟಿಕೆಟ್ ನೀಡಬೇಕೆಂಬ ಒತ್ತಾಯವೂ ಕೇಳಿ ಬರುತ್ತಿದೆ. ಅದರಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಹಾಗೂ ಬಿಜೆಪಿ ಹಿರಿಯ ಮುಖಂಡ ದೇವಯ್ಯ ಅವರ ಹೆಸರು ಮುಂಚೂಣಿಯಲ್ಲಿದೆ.
ದೆಹಲಿಯಲ್ಲಿ ಆಪ್ ದೋಸ್ತಿ ಇಲ್ಲದೆ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಕಾಂಗ್ರೆಸ್
ಈ ಬಾರಿ ಲೋಕಸಭಾ ಕ್ಷೇತ್ರವು ಕೊಡಗು ಜಿಲ್ಲೆಯ ಎರಡು ಸೇರಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಒಕ್ಕಲಿಗರು ಲಿಂಗಾಯಿತರು ಮತ್ತು ಕುರುಬ ಸಮುದಾಯದವರು ಅಧಿಕ ಸಂಖ್ಯೆಯಲ್ಲಿದ್ದಾರೆ .
ಒಟ್ಟಾರೆ ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಕೊಡಗಿನಿಂದ ಆಕಾಂಕ್ಷಿಗಳು ಮುಂದೆ ಬಂದಿದ್ದು, ರಾಜಕೀಯ ರಣರಂಗವಾಗುವ ಈ ಕ್ಷೇತ್ರದಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಯಾರನ್ನು ಅಭ್ಯರ್ಥಿಯಾಗಿ ಘೋಷಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.