"ಹುಲಿ ಅಂತ ಅಬ್ಬರಿಸುತ್ತಿದ್ದ ಸಿದ್ದರಾಮಯ್ಯರನ್ನು ಬೋನಿಗೆ ಹಾಕಿದ ಕುಮಾರಸ್ವಾಮಿ''
ಮೈಸೂರು, ಫೆಬ್ರವರಿ 24: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೈಸೂರು ಭಾಗದ ಹುಲಿ ಅಂತ ಅಬ್ಬರಿಸುತ್ತಿದ್ದರು. ಆ ಹುಲಿಯನ್ನು ಇನ್ನೊಬ್ಬ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಬೋನಿಗೆ ಹಾಕಿದ್ದಾರೆ ಎಂದು ಸಂಸದ ಪ್ರತಾಪ ಸಿಂಹ ವ್ಯಂಗ್ಯವಾಡಿದರು.
ಮೈಸೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಮುಖಭಂಗವಾದ ಬಗ್ಗೆ ಮೈಸೂರು ನಗರದಲ್ಲಿ ಸಂಸದ ಪ್ರತಾಪ್ ಸಿಂಹ ಸುದ್ದಿಗಾರರೊಂದಿಗೆ ಮಾತನಾಡಿದರು.
ಮೈಸೂರು ಪಾಲಿಕೆ ನೂತನ ಮೇಯರ್ ಆಗಿ ರುಕ್ಮಿಣಿ ಮಾದೇಗೌಡ ಆಯ್ಕೆ; ಬಿಜೆಪಿಗೆ ಮುಖಭಂಗ
ಕಾಂಗ್ರೆಸ್ ಪಕ್ಷವು ಹಿರಿಯ ಸದಸ್ಯೆ ಶಾಂತಕುಮಾರಿ ಅವರನ್ನು ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಅವರದೇ ಪಕ್ಷದ ಅಭ್ಯರ್ಥಿ ಪರವಾಗಿ ಕಾಂಗ್ರೆಸ್ ಸದಸ್ಯರು ವೋಟು ಹಾಕಿಲ್ಲ. ಕೈ ಎತ್ತದಂತೆ ಕಟ್ಟಿಹಾಕಿದವರು ಯಾರು? ನಾವು ಪ್ರಾಮಾಣಿಕ ಪ್ರಯತ್ನ ಮಾಡಿದೆವು, ಸೋತಿದ್ದೇವೆ. ಆದರೆ, ಈ ಚುನಾವಣೆಯಲ್ಲಿ ಕಾಂಗ್ರೆಸ್ನ ಹೀನಾಯ ಸ್ಥಿತಿ ಏನು ಎಂಬುದು ಬಯಲಾಗಿದೆ ಎಂದು ಪ್ರತಾಪ್ ಸಿಂಹ ಕುಟುಕಿದರು.
ಇನ್ನು ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯ ಕುರಿತು ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಗೆ ಶಾಸಕ ತನ್ವೀರ್ ಸೇಠ್ ತಿರುಗೇಟು ನೀಡಿದ್ದು, ರಾಜಕಾರಣದಲ್ಲಿ ಕೊನೇ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ ಮೈಸೂರು ಮೇಯರ್ ಚುನಾವಣೆ ಒಂದು ಉತ್ತಮ ಉದಾಹರಣೆ ಎಂದು ತಿಳಿಸಿದ್ದಾರೆ.
ಮೇಯರ್ ಚುನಾವಣೆ ನಂತರ ಮಾಧ್ಯಮದವರ ಪ್ರಶ್ನೆಗ ಉತ್ತರಿಸಿದ ಅವರು, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕೊನೆ ಹಂತದ ಕಾರ್ಯಚರಣೆ ನಡೆಸಿ ಯಶಸ್ವಿಯಾಗಿದ್ದೇವೆ. ಒಪ್ಪಂದದ ಪ್ರಕಾರ ನಮಗೆ ಮೇಯರ್ ಸ್ಥಾನ ಸಿಗಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಬಿಜೆಪಿಗೆ ಸಿಗುವ ಲಕ್ಷಣ ಇದ್ದ ಕಾರಣ ನಾವು ಕಾರ್ಯತಂತ್ರ ಬದಲಿಸಿ ಮೇಯರ್ ಸ್ಥಾನ ಬಿಟ್ಟುಕೊಟ್ಟೆವು ಎಂದು ಹೇಳಿದರು.
ಜೆಡಿಎಸ್ ನಮಗೆ ಬೆಂಬಲ ಕೇಳಿತ್ತು, ಕೇಳಿಲ್ಲ ಎಂಬುದು ಬೇರೆ ಪ್ರಶ್ನೆ. ನಮಗೆ ನಮ್ಮ ಉದ್ದೇಶ ಈಡೇರಬೇಕಿತ್ತು ಅಷ್ಟೇ ಎಂದು ತನ್ವೀರ್ ಸೇಠ್ ಕಾಂಗ್ರೆಸ್ ಕಾರ್ಯತಂತ್ರ ಬಿಚ್ಚಿಟ್ಟರು.
ಹುಲಿಗಳನ್ನು ಬೋನಿಗೆ ಹಾಕಿದ್ದೇವೆ ಎನ್ನುವ ಪ್ರತಾಪ್ ಸಿಂಹ ಹೇಳಿಕೆ ವಿಚಾರವಾಗಿ ಮಾತನಾಡಿದ ಸೇಠ್ ಅವರು, ಹುಲಿಗಳನ್ನು ಬೋನಿಗೆ ಹಾಕುವುದು ಹಳೇ ಸಂಸ್ಕೃತಿ. ಆದರೆ, ಮಂಗಗಳು ಎಲ್ಲಿ ಇರುತ್ತವೆ ಎಂಬುದು ಪ್ರತಾಪ್ ಸಿಂಹಗೆ ಕೇಳಿ ಎಂದು ಶಾಸಕ ತನ್ವೀರ್ ಸೇಠ್ ವ್ಯಂಗ್ಯವಾಗಿ ನುಡಿದರು.