ಫೆ.20 ರಂದು ಜಯಚಾಮರಾಜ ಒಡೆಯರ್ ಜನ್ಮಶತಮಾನೋತ್ಸವ ಸಮಾರಂಭ
ಮೈಸೂರು, ಫೆಬ್ರವರಿ 18: ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪ್ರತಿಷ್ಠಾನದ ವತಿಯಿಂದ ಶ್ರೀ ಜಯಚಾಮರಾಜ ಒಡೆಯರ್ ರವರ ಜನ್ಮ ಶತಮಾನೋತ್ಸವದ ಮೂರನೇ ಅವಧಿಯ ಕಾರ್ಯಕ್ರಮವನ್ನು ಫೆ.೨೦ರಂದು ಮೈಸೂರಿನಲ್ಲಿ ಆಯೋಜಿಸಲಾಗಿದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿಳಿಸಿದರು.
ಮೈಸೂರು ಅರಮನೆಯಲ್ಲಿ ಮಂಗಳವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.20 ರ ಮಧ್ಯಾಹ್ನ 3 ಗಂಟೆಗೆ ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ನಡೆಯುವ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಖ್ಯಾತ ಸಂಗೀತಗಾರರಾದ ಡಾ.ರಾ.ಸತ್ಯನಾರಾಯಣ ಅವರಿಗೆ ಮರಣೋತ್ತರವಾಗಿ, ಬೆಂಗಳೂರಿನ ಡಾ.ಟಿ.ಎಸ್.ಸತ್ಯವತಿ ಹಾಗೂ ಡಾ.ಸುಕನ್ಯಾಪ್ರಭಾಕರ್ ಅವರಿಗೆ ಶ್ರೀ ಜಯಚಾಮರಾಜೇಂದ್ರ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಸಿದ್ದರಾಮಯ್ಯ ಮಾಡಿದ ಅಭಿವೃದ್ಧಿಯ ಮನಸಾರೆ ಹೊಗಳಿದ ಪ್ರತಾಪ್ ಸಿಂಹ
ಇದಕ್ಕೂ ಮುನ್ನ ಡಾ.ಸುಕನ್ಯಾಪ್ರಭಾಕರ್ ಅವರು ಜಯಚಾಮರಾಜ ಒಡೆಯರ್ ಅವರು ರಚಿಸಿರುವ ೯೪ ಕೃತಿಗಳನ್ನೂ ಸೇರಿಸಿ ಗಣರಾಜೇಂದ್ರ ಶ್ರೀ ಜಯಚಾಮರಾಜೇಂದ್ರ ಸಂಗೀತ ರೂಪಕ ಪ್ರಸ್ತುತ ಪಡಿಸಲಿದ್ದಾರೆ. ರಾಜ್ಯಸಭಾ ಸದಸ್ಯ ಜೈರಾಂ ರಮೇಶ್ ಅವರು ಜಯಚಾಮರಾಜೇಂದ್ರ ಒಡೆಯರ್ ಮತ್ತು ಭಾರತೀಯ ವನ್ಯಜೀವಿ ಮಂಡಳಿ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.
ಜಯಚಾಮರಾಜ ಒಡೆಯರ್ ಅವರ ಪುತ್ರಿಯರಾದ ಮಹಾರಾಜಕುಮಾರಿಯರಾದ ಕಾಮಾಕ್ಷಿ ದೇವಿ ಮತ್ತು ಇಂದ್ರಾಕ್ಷಿ ದೇವಿ ಅವರು ತಂದೆಯ ನೆನಪುಗಳನ್ನು ಮೆಲಕು ಹಾಕಲಿದ್ದಾರೆ ಎಂದರು.
ಶ್ರೀ ವಿದ್ಯಾ ಸಂಕೀರ್ತನ ಸುಧಾಲಹರೀ ಕೃತಿ ಮಾರಾಟ:
ರಾಜವಾಗ್ಗೇಯಕಾರರಾಗಿದ್ದ ಶ್ರೀ ಜಯಚಾಮರಾಜ ಒಡೆಯರ್ ಅವರು 1940 ರಿಂದ 1947 ರ ಅವಧಿಯಲ್ಲಿ ರಚಿಸಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತದ ಕೈ ಬರಹದ 94 ಹಸ್ತಪ್ರತಿಗಳು ಅರಮನೆಯಲ್ಲಿ ಲಭ್ಯವಿದ್ದವು.
ಮೈಸೂರಿನ ದೇವರಾಜ ಮಾರುಕಟ್ಟೆ ಕೆಡವಲು ಒಪ್ಪುವುದಿಲ್ಲವೆಂದ ಯದುವೀರ್
ಚಿಂತಕ ರಾಜೇಂದ್ರ ಶಾಸ್ತ್ರೀಯವರ ಬಳಿ ಲಭ್ಯವಿದ್ದ ಮೂರು ಕೃತಿಗಳನ್ನು ಪಡೆದು ಒಟ್ಟು 97 ಸಂಗೀತ ಕೃತಿಗಳನ್ನು ಸೇರಿಸಿ ರಾಗ ಲಕ್ಷಣಗಳ ಕನ್ನಡ ಮತ್ತು ದೇವನಾಗರಿ ಲಿಪಿಯಲ್ಲಿ 528 ಪುಟಗಳ ಶ್ರೀಜಯಚಾಮರಾಜಕೃತ ಶ್ರೀ ವಿದ್ಯಾ ಸಂಕೀರ್ತನ ಸುಧಾಲಹರೀ ಕೃತಿಯನ್ನು ಅರಮನೆಯಿಂದಲೇ ಹೊರತಂದಿದ್ದು, ಅಂದಿನ ಕಾರ್ಯಕ್ರಮದಲ್ಲಿ 900 ರೂ. ಮುಖಬೆಲೆಯ ಈ ಕೃತಿ ಮಾರಾಟಕ್ಕೆ ಲಭ್ಯವಿರಲಿದೆ.
ಜತೆಗೆ ಮೈಸೂರು ಅರಮನೆ ಹಾಗೂ ಜಗನ್ಮೋಹನ ಅರಮನೆಯಲ್ಲೂ ಈ ಕೃತಿಯ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುವುದು.
ಜತೆಗೆ ಈ ಕೃತಿಯನ್ನು ಇ-ಬುಕ್ ಮಾಡುವ ಉದ್ದೇಶವಿದ್ದು, ಅದರ ಸಿದ್ಧತೆಯೂ ನಡೆದಿದೆ. ಇಂಗ್ಲೀಷ್ನಲ್ಲಿ ರಾಗಗಳನ್ನು ಮುದ್ರಿಸುವುದು ಕಷ್ಟ ಎಂಬ ಕಾರಣಕ್ಕೆ ಆಂಗ್ಲ ಭಾಷೆಯಲ್ಲಿ ಈ ಕೃತಿಯನ್ನು ಹೊರತಂದಿಲ್ಲವೆಂದರು.
ಮುಂದಿನ ದಿನಗಳಲ್ಲಿ ಜಯ ಚಾಮರಾಜ ಒಡೆಯರ್ ಅವರಿಗೆ ಸೇರಿದ ಬಹಳಷ್ಟು ಹಳೆಯ ದಾಖಲೆಗಳು ಅರಮನೆಯಲ್ಲಿದ್ದು, ಅವುಗಳನ್ನು ಪ್ರತಿಷ್ಠಾನದಿಂದ ಹೊರತರುವ ಕೆಲಸ ಮಾಡುವುದಾಗಿ ಹೇಳಿದ ಅವರು, ಇದರಿಂದ ಸಂಶೋಧನೆ ಮಾಡುವವರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಜತೆಗೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಪ್ರವಾಸ ಹೋದಾಗಲೆಲ್ಲ ಅಪರೂಪದ ವಸ್ತುಗಳನ್ನು ಸಂಗ್ರಹಿಸಿ ತಂದಿದ್ದು, ಅವುಗಳನ್ನು ಪ್ರದರ್ಶನಕ್ಕೆ ಇಡಬೇಕೆಂಬ ಉದ್ದೇಶವಿದೆ. ಆದರೆ, ಸುರಕ್ಷತೆ ಕಾರಣದಿಂದ ಪ್ರದರ್ಶನ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಅರಮನೆ ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪ್ರತಿಷ್ಠಾನದ ಕಾರ್ಯದರ್ಶಿ ರೆಜಿನಾಲ್ಡ್ ವೆಸ್ಲಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.