ಮೈಸೂರಿನಲ್ಲಿ ಹಕ್ಕಿ ಜ್ವರ; ಶುಕವನದ 3 ಸಾವಿರ ಗಿಳಿಗಳ ಕಥೆ?
ಮೈಸೂರು, ಮಾರ್ಚ್ 19: ಮೈಸೂರು ಜಿಲ್ಲೆಯಲ್ಲಿ ಹಕ್ಕಿ ಜ್ವರ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಎಲ್ಲೆಲ್ಲೂ ಬಂದೋಬಸ್ತ್ ಮಾಡಲಾಗುತ್ತಿದೆ. ಇಲ್ಲಿನ ಹಕ್ಕಿಗಳ ಸರ್ವೇ ಕಾರ್ಯ ನಡೆಸಿದ್ದು, ಹಕ್ಕಿ ಜ್ವರ ಕಾಣಿಸಿಕೊಂಡ ವ್ಯಾಪ್ತಿಯ ಸುಮಾರು ಆರು ಸಾವಿರ ಹಕ್ಕಿಗಳನ್ನು ಸಾಮೂಹಿಕವಾಗಿ ಕೊಲ್ಲಲು ತೀರ್ಮಾನಿಸಲಾಗಿದೆ. ಹಾಗಿದ್ದರೆ ಇಲ್ಲಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮೂರು ಸಾವಿರಕ್ಕೂ ಅಧಿಕ ಗಿಳಿಗಳ ಕಥೆಯೇನು ಎಂಬುದು ಮುಂದಿರುವ ಪ್ರಶ್ನೆಯಾಗಿದೆ.
ಶುಕವನದಲ್ಲಿನ ಈ ಗಿಳಿಗಳಿಗೆ ಸದ್ಯಕ್ಕೆ ವಿಶೇಷ ಆರೈಕೆ ಮಾಡಲಾಗುತ್ತಿದೆ. ಆಶ್ರಮದ ಸಚ್ಚಿದಾನಂದ ಸ್ವಾಮೀಜಿಗಳು ಸ್ವತಃ ಮೂರು ಸಾವಿರ ಗಿಳಿಗಳ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಮೈಸೂರಿನಲ್ಲಿ ಹಕ್ಕಿಜ್ವರ; ಎಷ್ಟು ಹಕ್ಕಿ, ಕೋಳಿಗಳನ್ನು ಕೊಲ್ಲಲಾಗುತ್ತಿದೆ?
ಶುಕವನದಲ್ಲಿವೆ ಮೂರು ಸಾವಿರ ಗಿಳಿಗಳು
ಸಚ್ಚಿದಾನಂದ ಆಶ್ರಮದ ಶುಕವನದಲ್ಲಿ ಸುಮಾರು 3 ಸಾವಿರ ಗಿಳಿಗಳಿದ್ದು, 450 ಪ್ರಭೇದದ ಗಿಳಿಗಳಿಗೆ ಆಶ್ರಯ ನೀಡಲಾಗಿದೆ. ಇದೀಗ ನಿತ್ಯವೂ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳೇ ಗಿಳಿಗಳ ಆರೈಕೆಯಲ್ಲಿ ತೊಡಗಿದ್ದು, ನೀರು, ಆಹಾರ ನೀಡಿ ಆರೈಕೆ ಮಾಡುತ್ತಿದ್ದಾರೆ. ಆಶ್ರಮದೊಳಕ್ಕೆ ಹೊರಗಿನಿಂದ ಹಕ್ಕಿ ಪಕ್ಷಿಗಳು ಬಾರದಂತೆ ಬಲೆಯನ್ನೂ ಹಾಕಲಾಗಿದ್ದು, ಕಾವಲುಗಾರರನ್ನೂ ನೇಮಿಸಲಾಗಿದೆ. ಹೊರಗಿನಿಂದ ಪಕ್ಷಿಗಳು ಬಂದು ಆಶ್ರಮದ ಪಕ್ಷಿಗಳ ಜತೆ ಬೆರೆತರೆ ಪಕ್ಷಿಗಳು ರೋಗಪೀಡಿತವಾಗುವುದರಿಂದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಆಶ್ರಮದ ಸುತ್ತಮುತ್ತ ಎಚ್ಚರಿಕೆ
ಆಶ್ರಮದ ಸುತ್ತ ಮುತ್ತ ಕೊಕ್ಕರೆ ಇನ್ನಿತರ ಪಕ್ಷಿಗಳು ಬೇಲಿ ದಾಟಿ ಒಳ ಬರದಂತೆ ಎಚ್ಚರಿಕೆ ವಹಿಸಲಾಗಿದೆ. ಕಳೆದ ವಾರ ಕುಂಬಾರಕೊಪ್ಪಲಿನ ಬಳಿ ಮನೆಯೊಂದರಲ್ಲಿ ಮೃತಪಟ್ಟಿದ್ದ ಕೋಳಿ ಮತ್ತು ಸ್ಮಶಾನದಲ್ಲಿ ಮೃತಪಟ್ಟಿದ್ದ ಪಕ್ಷಿಯ ಮೃತದೇಹದ ಮಾದರಿಗಳನ್ನು ಭೂಪಾಲ್ ನ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಅನಿಮಲ್ ಡೀಸಿಸ್ ಗೆ ಕಳುಹಿಸಲಾಗಿತ್ತು. ಮೈಸೂರಿನಿಂದ ಕಳುಹಿಸಿದ್ದ ಏಳು ಮಾದರಿಗಳಲ್ಲಿ ಎರಡು ಮಾದರಿಗಳು ಪಾಸಿಟಿವ್ ಬಂದಿದೆ.
ಕುಂಬಾರಕೊಪ್ಪಲಿನ 10ಕಿ.ಮೀ. ವ್ಯಾಪ್ತಿ ಸೂಕ್ಷ್ಮ ವಲಯ
ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ತಕ್ಷಣವೇ ಸಾಕು ಪಕ್ಷಿಗಳ ಸರ್ವೆ ನಡೆಸಿ, ಮೂರ್ನಾಲ್ಕು ದಿನಗಳಲ್ಲಿ 6,436 ಪಕ್ಷಿಗಳನ್ನು ಕೊಲ್ಲಲು ನಿರ್ಧರಿಸಿದೆ. ಇದಕ್ಕಾಗಿ ರೆಸ್ಕೊ ಟೀಮ್ ಕೂಡ ನೇಮಿಸಲಾಗಿದೆ. ಈವರೆಗೆ ಒಟ್ಟು 6,436 ಪಕ್ಷಿಗಳನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಹೀಗಾಗಿ ಕುಂಬಾರಕೊಪ್ಪಲಿನ 10 ಕಿ.ಮೀ. ವ್ಯಾಪ್ತಿಯನ್ನು ಸೂಕ್ಷ್ಮ ವಲಯ ಎಂದು ಘೋಷಣೆ ಮಾಡಲಾಗಿದೆ.
ಎಲ್ಲ ಹಕ್ಕಿಗಳನ್ನೂ ನಾಶಪಡಿಸಲು ನಿರ್ಧಾರ
ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿ ಒಟ್ಟು 17,820 ಮನೆಗಳಿವೆ. ಅದರಲ್ಲಿ 144 ಮನೆಗಳಲ್ಲಿ ಪಕ್ಷಿಗಳಿವೆ. ಈ ಪೈಕಿ ನೈಸರ್ಗಿಕ ಪಕ್ಷಿಗಳು 1,252, ಔದ್ಯಮಿಕ ಪಕ್ಷಿಗಳು 5,100 ಹಾಗೂ ಸಾಕು ಪಕ್ಷಿಗಳು 254 ಎಂದು ಗುರುತಿಸಲಾಗಿದೆ. ಇದರಲ್ಲಿ ಕ್ವೈಲ್ಸ್ 12 ಹಾಗೂ ಟರ್ಕಿ 18 ಸೇರಿ ಒಟ್ಟು 6,436 ಪಕ್ಷಿಗಳಿದ್ದು, ಎಲ್ಲವನ್ನೂ ನಾಶಪಡಿಸಲು ನಿರ್ಧರಿಸಲಾಗಿದೆ.