ವಲಸೆ ಹಕ್ಕಿಗಳು ಹೋಗುವವರೆಗೆ ಕುಕ್ಕರಹಳ್ಳಿ ಕೆರೆಯಲ್ಲಿ ಮೀನುಗಾರಿಕೆ ನಡೆಸಬೇಡಿ:ಆಕ್ಷೇಪ
ಮೈಸೂರು, ಫೆಬ್ರವರಿ 8: ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ ಆರಂಭವಾಗಿರುವ ಮೀನುಗಾರಿಕೆಗೆ ಪರಿಸರ ಪ್ರಿಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕನಿಷ್ಠ ಪಕ್ಷ ವಲಸೆ ಬಂದಿರುವ ಹಕ್ಕಿಗಳು ಹೋಗುವವರೆಗೆ ಇಲ್ಲಿ ಮೀನುಗಾರಿಕೆ ನಡೆಯಬಾರದು ಎಂದು ಅವರು ಸಾಮಾಜಿಕ ಮಾಧ್ಯಮಗಳಲ್ಲಿ ದನಿ ಎತ್ತಿದ್ದಾರೆ.
ಹೌದು, ಕುಕ್ಕರಹಳ್ಳಿ ಕೆರೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ತೆಪ್ಪ ಬಳಸಿ ಮೀನುಗಾರಿಕೆ ನಡೆಸಿ ದಿನಕ್ಕೆ ನೂರಾರು ಮೀನುಗಳನ್ನು ಹಿಡಿದು ಮಾರಾಟ ಮಾಡಲಾಗುತ್ತಿದೆ. ಈಗ ದೇಶ - ವಿದೇಶದ ಅಪರೂಪದ ಪಕ್ಷಿಗಳು ವಲಸೆ ಬರುವ ಕಾಲವಾಗಿದೆ. ಮೀನುಗಾರಿಕೆಯಿಂದ ವಲಸೆ ಪಕ್ಷಿಗಳು ಹೆದರುತ್ತಿದೆ. ವಲಸೆ ಪಕ್ಷಿಗಳು ಸಂತಾನೋತ್ಪತ್ತಿ ಕೊನೆಗೊಳ್ಳುವವರೆಗೂ ಮೀನು ಹಿಡಿಯಬಾರದು ಎಂಬುದು ಪಕ್ಷಿ ಪ್ರೇಮಿಗಳ ಕೂಗು.
ಕೊಕ್ಕರೆ ಬೆಳ್ಳೂರಿನಲ್ಲಿ ಪೆಲಿಕಾನ್ ಪಕ್ಷಿ ಸಾವು: ಮತ್ತೆ ಆತಂಕ
ಮೀನುಗಾರಿಕೆ ಮಹಾಮಂಡಳಕ್ಕೆ ಎಲ್ಲ ಕೆರೆಗಳು ಒಳಪಡುವಂತೆ ಕುಕ್ಕರಳ್ಳಿ ಕೆರೆಯೂ ಸೇರುತ್ತದೆ. ಹಲವು ವರ್ಷಗಳಿಂದ ಕೆರೆಗೆ ಮಹಾಮಂಡಲ ಮೀನು ಮರಿಗಳನ್ನು ಬಿಟ್ಟು, ಗುತ್ತಿಗೆ ಪಡೆದು ಮೀನುಗಾರಿಕೆ ನಡೆಸುತ್ತಾ ಬಂದಿದೆ. ಆದರೆ ಯಾವ ವರ್ಷವೂ ಮೀನುಗಾರಿಕೆಯಿಂದ ಪಕ್ಷಿಗೆ ತೊಂದರೆಯಾಗಿಲ್ಲ.
ಈಗಾಗಲೇ ಹಲವು ವರ್ಷಗಳ ಕಾಲ ಕುಕ್ಕರಹಳ್ಳಿ ಕೆರೆಗೆ ಒಳಚರಂಡಿ ನೀರು ಸೇರಿದೆ. ಈ ನೀರು ಬೇರೆಲ್ಲೂ ಹರಿದು ಹೋಗಿಲ್ಲ. ಈಗಲೂ ಶುದ್ಧ ನೀರಿನ ಜತೆ ಕಲುಷಿತ ನೀರು ಸೇರಿದೆ. ಕೆರೆಯ ಮಾಲಿನ್ಯದ ಕುರಿತು ಹಲವು ಬಾರಿ ಚರ್ಚೆಗಳೂ ನಡೆದಿವೆ.
ಕರಾವಳಿಯಲ್ಲಿ ಲೈಟ್ ಫಿಶಿಂಗ್ ನಿಷೇಧ, ನಿರಾಳರಾದ ಪಾರಂಪರಿಕ ಮೀನುಗಾರರು
ಇಂತಹ ಕೆರೆಯ ನೀರಿನಲ್ಲಿ ಬೆಳೆದ ಮೀನುಗಳನ್ನು ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಎಷ್ಟು ಸರಿ ಎಂಬ ಚರ್ಚೆಯೂ ಆರಂಭವಾಗಿವೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಈ ನಿಟ್ಟಿನಲ್ಲಿ ಪರಿಶೀಲಿಸಲಿ ಎಂಬ ಆಗ್ರಹವೂ ವ್ಯಕ್ತವಾಗಿದೆ.