ಕಾರು ಚಲಿಸಿ ಜೀವ ಬಿಟ್ಟಿದ್ದ ಜೋಡಿ ಗಿಳಿಗಳಿಗೆ ಅಂತ್ಯ ಸಂಸ್ಕಾರ ಮಾಡಿದ ಪಕ್ಷಿಪ್ರೇಮಿ
ಮೈಸೂರು, ಜುಲೈ 15: ಮೇಲ್ನೋಟಕ್ಕೆ ಸಣ್ಣ ಪುಟ್ಟ ಸಂಗತಿ ಎನಿಸುವಂಥದ್ದು ಆಳದಲ್ಲಿ ಹಲವರ ಮನಸ್ಸನ್ನು ಕಲುಕಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂಥ ಘಟನೆಯೊಂದು ಈ ವರದಿಯಲ್ಲಿ ಇದೆ. ಅಪಘಾತದಲ್ಲಿ ಸಾವಿಗೀಡಾಗಿದ್ದ ಜೋಡಿ ಗಿಳಿಗಳ ಅಂತ್ಯಸಂಸ್ಕಾರ ಮಾಡಿದ ಪಕ್ಷಪ್ರೇಮಿಯೊಬ್ಬರ ಮಾನವೀಯತೆ ಈಗ ಚರ್ಚೆ ಆಗುತ್ತಿದೆ.
ಅಂದಹಾಗೆ ಈ ಘಟನೆ ವರದಿ ಆಗಿರುವುದು ಶ್ರೀರಂಗಪಟ್ಟದಿಂದ. ಜೋಡಿ ಗಿಳಿಗಳಿಗೆ ಅಪಘಾತವಾಗಿ ರಸ್ತೆ ಮಧ್ಯದಲ್ಲೇ ಮೃತಪಟ್ಟಿದ್ದವು. ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಮುಂಭಾಗದ ಸಂತೆ ಮೈದಾನದ ರಸ್ತೆಯಲ್ಲಿ ಕಾರೊಂದು ಏಕಾಏಕಿ ಗಿಳಿಗಳ ಮೇಲೆ ಚಲಿಸಿತ್ತು. ಪರಿಣಾಮವಾಗಿ ಜೋಡಿ ಪಕ್ಷಿಗಳು ಸ್ಥಳದಲ್ಲೇ ಮೃತಪಟ್ಟಿದ್ದವು.
ಸಾಕಿದ ಗಿಳಿಗೆ ಸಾಂಪ್ರದಾಯಿಕ ಅಂತ್ಯಸಂಸ್ಕಾರ
ಬೆಳ್ಳಂಬೆಳಗ್ಗೆ ಆಹಾರ ಅರಸಿ ಗುಂಪಿನ ಜತೆಗೆ ಬಯಲಿಗೆ ತೆರಳಿದ್ದ ಈ ಗಿಳಿಗಳೆರಡು ಸಂಜೆ ಮರಳಿ ಶ್ರೀರಂಗನಾಥ ದೇವಾಲಯ ಗೋಪುರದ ಗೂಡಿಗೆ ಮರಳುವ ಸಮಯದಲ್ಲಿ ಈ ಅವಘಡ ಸಂಭವಿಸಿತ್ತು. ಇವೆರಡು ಗಿಳಿಗಳನ್ನು ಕಂಡ ವಾಯುವಿಹಾರಿಗಳು ಹಾಗೂ ಪಕ್ಷಿಪ್ರಿಯರು ಕೆಲಕಾಲ ಮಮ್ಮಲ ಮರುಗಿದರು. ಗಿಳಿಗಳನ್ನು ಬದುಕಿಸಲು ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ.
ಆನಂತರ ಶ್ರೀರಂಗಪಟ್ಟಣದ ಪಕ್ಷಿಪ್ರೇಮಿ ರಮೇಶ್ ಈ ಮೃತ ಗಿಳಿಗಳಿಗೆ ಅಂತ್ಯ ಸಂಸ್ಕಾರ ನೆರವೇರಿಸಿದರು. ಅಂತ್ಯ ಸಂಸ್ಕಾರ ಅಂದರೆ, ರಸ್ತೆ ಮಧ್ಯೆ ಬಿದ್ದಿದ್ದ ಗಿಳಿಗಳನ್ನು ತೆಗೆದುಕೊಂಡು ಹೋಗಿ, ಸಣ್ಣದಾದ ಎರಡು ಗುಂಡಿ ತೋಡಿ, ಅಕ್ಕ ಪಕ್ಕ ಮಣ್ಣು ಮಾಡಿದರು. ಅಲ್ಲೇ ರಸ್ತೆಯಲ್ಲಿ ಬಿಟ್ಟಿದ್ದರೆ ಆ ಪುಟ್ಟ ಪಕ್ಷಿಗಳ ಮೇಲೆ ಇನ್ನಷ್ಟು ವಾಹನ ಹರಿಯುತ್ತಿತ್ತು. ಹಾಗಾಗದಂತೆ ಅಂತ್ಯಸಂಸ್ಕಾರ ನೆರವೇರಿಸಿದ ರಮೇಶ್ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.