ಚಿತ್ರಗಳು; ಹಕ್ಕಿ ಜ್ವರವಿದ್ದರೂ ಮೈಸೂರು ಗಡಿಯ ಚೆಕ್ ಪೋಸ್ಟ್ನಲ್ಲಿ ನಿರ್ಲಕ್ಷ್ಯ
ಮೈಸೂರು, ಜನವರಿ 10: ಕೋವಿಡ್ ಮಹಾಮಾರಿಯ ನಡುವೆ ಹಕ್ಕಿ ಜ್ವರದ ಭೀತಿ ಇದೀಗ ಜನರನ್ನು ಕಾಡಲು ಆರಂಭಿಸಿದೆ. ಕೇರಳದಲ್ಲಿ ಹಕ್ಕಿ ಜ್ವರದ ತೀವ್ರತೆ ಹೆಚ್ಚಿರುವ ಹಿನ್ನಲೆಯಲ್ಲಿ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಚೆಕ್ ಪೋಸ್ಟ್ಗಳಲ್ಲಿ ನಿಗಾ ವಹಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರ ಸೂಚಿಸಿದೆ.
ಸರ್ಕಾರದ ಸೂಚನೆಯಿದ್ದರೂ ಅದು ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬುದಕ್ಕೆ ಮೈಸೂರು ಜಿಲ್ಲೆಯ ಹೆಚ್. ಡಿ. ಕೋಟೆ ತಾಲೂಕಿನ ಬಾವಲಿ ಚೆಕ್ ಪೋಸ್ಟ್ ಸಾಕ್ಷಿಯಾಗಿದೆ. ಕೇರಳ-ಕರ್ನಾಟಕ ಗಡಿಯ ಬಾವಲಿ ಚೆಕ್ ಪೋಸ್ಟ್ನ ಚಿತ್ರಣ ಇಲ್ಲಿದೆ.
ಕೊರೊನಾವೈರಸ್ ಬಿಕ್ಕಟ್ಟಿನ ನಡುವೆ ಪಕ್ಷಿ ಜ್ವರ: ದೆಹಲಿ ಬಳಿ 50 ಕಾಗೆಗಳ ಸಾವು
ಮೈಸೂರು ಮತ್ತು ಕೇರಳ ನಡುವೆ ಸಂಪರ್ಕ ಕಲ್ಪಿಸುವ ರಸ್ತೆಯ ಗಡಿಭಾಗದಲ್ಲಿ ಬಾವಲಿ ಚೆಕ್ ಪೋಸ್ಟ್ ಇದೆ. ಕೇರಳದಿಂದ ಬರುವ ಎಲ್ಲಾ ವಾಹನಗಳನ್ನು ತಪಾಸಣೆ ಮಾಡಿ ಕೋಳಿ ಸಾಗಾಟ ಮಾಡುವ ವಾಹನಗಳಿಗೆ ಸ್ಯಾನಿಟೈಸ್ ಮಾಡುವಂತೆ ಸರ್ಕಾರ ಸೂಚನೆ ನೀಡಿತ್ತು.
ಹಕ್ಕಿ ಜ್ವರ; ಮೊಟ್ಟೆ, ಮಾಂಸ ಸಂಪೂರ್ಣ ಬೇಯಿಸದೇ ತಿನ್ನಬೇಡಿ
ಪಶುಸಂಗೋಪನಾ ಇಲಾಖೆ, ಅರಣ್ಯ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚನೆ ಬಂದ ತಕ್ಷಣ ಚೆಕ್ ಪೋಸ್ಟ್ಗೆ ತೆರಳಿ, ಪಿಪಿಇ ಕಿಟ್ ತೊಟ್ಟು, ಸ್ಯಾನಿಟೈಸ್ ಮಾಡುತ್ತಿದ್ದರಾದರೂ ಇದೀಗ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕೇರಳದಲ್ಲಿ ಹಕ್ಕಿ ಜ್ವರ; ಕೊಡಗಿನಲ್ಲಿ ಹೈ ಅಲರ್ಟ್
ಸರ್ಕಾರದ ಆದೇಶ ಪಾಲನೆಯಾಗುತ್ತಿಲ್ಲ
ಚೆಕ್ ಪೋಸ್ಟ್ನಲ್ಲಿ ಮಾಮೂಲಿ ಕಾರ್ಯನಿರ್ವಹಿಸುವ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಹೊರತು ಪಡಿಸಿದರೆ ಪಶುಸಂಗೋಪನೆ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಇತ್ತ ಧಾವಿಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮೊದಲಿಗೆ ಕೇರಳ ರಾಜ್ಯದಿಂದ ಬರುವ ಹಾಗೂ ಹೋಗುವ ವಾಹನನ್ನು ಕಟ್ಟುನಿಟ್ಟಾಗಿ ತಪಾಸಣೆ ನಡೆಸಿ ವಾಹನಗಳಿಗೆ ಸ್ಯಾನಿಟೈಸ್ ಮಾಡಲಾಗುತ್ತಿತ್ತು. ಆ ಮೂಲಕ ಹಕ್ಕಿಜ್ವರ ರಾಜ್ಯಕ್ಕೆ ಕಾಲಿಡದಂತೆ ನೋಡಿಕೊಳ್ಳಲು ಕಟ್ಟು ನಿಟ್ಟಿನ ಆದೇಶವನ್ನು ಜಿಲ್ಲಾಡಳಿತ ನೀಡಿತ್ತು.
ರಜಾ ದಿನದಲ್ಲಿ ವೈರಸ್ ಬರುವುದಿಲ್ಲವೆ?
ಮೊದಲಿಗೆ ಎಲ್ಲವೂ ಸರಿಯಾಗಿ ನಡೆಯುತ್ತಿತ್ತಾದರೂ ಇದೀಗ ನಿರ್ಲಕ್ಷ್ಯ ವಹಿಸಿರುವುದು ಎದ್ದು ಕಾಣುತ್ತಿದೆ. ಈ ಕುರಿತಂತೆ ಆರೋಪಿಸಿರುವ ಸಾರ್ವಜನಿಕರು ಮೊದಲೆರಡು ದಿನ ಪಶುಸಂಗೋಪನೆ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಬಂದರೂ, ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಕೆಲವೊಮ್ಮೆ ಬಂದು ಪಿಪಿಇ ಕಿಟ್ ತೊಟ್ಟು, ಸ್ಯಾನಿಟೈಸ್ ಮಾಡಿ ಹೋಗುತ್ತಿದ್ದಾರೆ. ಇನ್ನು ಎರಡನೇ ಶನಿವಾರವಾದ ಕಾರಣ ಯಾವುದೇ ಇಲಾಖೆ ಅಧಿಕಾರಿಗಳು ಇತ್ತ ಸುಳಿದಿಲ್ಲ, ಇಲ್ಲಿನ ಪೊಲೀಸ್ ಚೌಕಿಯಲ್ಲಿರುವ ಚೆಕ್ ಪೋಸ್ಟ್ ಸಿಬ್ಬಂದಿ ಮಾತ್ರ ವಾಹನದಲ್ಲಿ ಏನಿದೆ ಎಂದು ಪರಿಶೀಲಿಸಿ ವಾಹನಗಳನ್ನು ಕಳುಹಿಸುತ್ತಿದ್ದರು. ಹಾಗಾದರೆ ರಜಾ ದಿನಗಳಲ್ಲಿ ಹಕ್ಕಿಜ್ವರದ ವೈರಸ್ ರಾಜ್ಯದೊಳಗೆ ಬರುವುದಿಲ್ಲವೆ? ಎಂಬುದು ಜನರ ಪ್ರಶ್ನೆ.
ವಾಹನಗಳಿಗೆ ಮಾಡುತ್ತಿಲ್ಲ ಸ್ಯಾನಿಟೈಸ್
ಜನವರಿ 8 ರಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಮಾದಪ್ಪ ಗಡಿಭಾಗದ ಚೆಕ್ ಪೋಸ್ಟ್ಗಳಿಗೆ ಭೇಟಿ ನೀಡಿ ಹಕ್ಕಿಜ್ವರ ರಾಜ್ಯಕ್ಕೆ ಕಾಲಿಡದಂತೆ ಹೆಚ್ಚಿನ ನಿಗಾ ವಹಿಸುವ ಸಲುವಾಗಿ ತಾಂತ್ರಿಕ ಕ್ರಮಗಳ ಮೂಲಕ ವಾಹನಗಳ ತಪಾಸಣೆ ಮಾಡಿ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದರು. ಆದರೆ, ಅದು ಅವತ್ತಿನ ದಿನವಷ್ಟೆ ನಡೆಯಿತ್ತಾದರೂ ಮತ್ತೆ ಎಂದಿನಂತೆ ವಾಹನಗಳ ಮೇಲೆ ನಿಗಾ ವಹಿಸುವವರೇ ಇಲ್ಲದಾಗಿರುವುದರಿಂದ ಕೋಳಿ ಸಾಗಣೆ ಮಾಡುವ ವಾಹನಗಳಿಗೆ ಸ್ಯಾನಿಟೈಸ್ ಮಾಡದೆ ತೆರಳುವಂತಾಗಿದೆ.
ಚೆಕ್ ಪೋಸ್ಟ್ನಲ್ಲಿಯೇ ನಿರ್ಲಕ್ಷ್ಯವಾದರೆ ಗತಿಯೇನು?
ಮೊದಲಿಗೆ ನೆರೆ ರಾಜ್ಯ ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾಣಿಸಿಕೊಂಡಿದ್ದ ಹಕ್ಕಿಜ್ವರ ನಮ್ಮ ರಾಜ್ಯದಲ್ಲಿಯೂ ಭಯವನ್ನುಂಟು ಮಾಡಿದೆ. ಹೀಗಾಗಿ ಎಚ್ಚರಿಕೆ ವಹಿಸುವ ಸಲುವಾಗಿ ಗಡಿಭಾಗದ ಚೆಕ್ ಪೋಸ್ಟ್ಗಳಲ್ಲಿ ನಿಗಾವಹಿಸಲಾಗುತ್ತಿದೆ. ಆದರೆ, ಚೆಕ್ ಪೋಸ್ಟ್ಗಳಲ್ಲೇ ನಿರ್ಲಕ್ಷ್ಯವಾದರೆ ಮುಂದೇನು ಗತಿ? ಎಂದು ಜನರು ಆತಂಕಗೊಂಡಿದ್ದಾರೆ.