ಮೈಸೂರು, ಪೊಲೀಸರಿಂದ ತಪ್ಪಿಸಿಕೊಳ್ಳುವಾಗ ಇಬ್ಬರು ಸಾವು
ಮೈಸೂರು, ಮೇ 20: ಸಂಚಾರಿ ಪೊಲೀಸರ ವಾಹನ ತಪಾಸಣೆ ಸಮಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡ ಮೂವರ ಪೈಕಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಓರ್ವ ಯುವಕನ ಸ್ಥಿತಿ ಗಂಭೀರವಾಗಿದೆ.
ನಂಜನಗೂಡಿನ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬೈಕ್ನಲ್ಲಿ ಮೂವರು ಸಂಚಾರ ನಡೆಸುತ್ತಿದ್ದರು. ಮೃತಪಟ್ಟವರನ್ನು ಕೂಡ್ಲಾಪುರದ ಸಚಿನ್ ಹಾಗೂ ಉತ್ತನಹಳ್ಳಿಯ ದೊರೆಸ್ವಾಮಿ ಎಂದು ಗುರುತಿಸಲಾಗಿದೆ.
ಮತ್ತೊಬ್ಬ ಸವಾರ ರಘು ಸ್ಥಿತಿ ಗಂಭೀರವಾಗಿದೆ. ನಂಜನಗೂಡಿನ ಸಿಂಧುವಳ್ಳಿ ಬಳಿಯ ಹುಣಸನಾಳು ಗ್ರಾಮಕ್ಕೆ ತೆರಳುವಾಗ ರಸ್ತೆಯಲ್ಲಿ ಅಪಘಾತ ನಡೆದಿದೆ.
ಗುರುವಾರ ಸಂಜೆ ಡ್ಯೂಟಿ ಮುಗಿಸಿ ಹುಣಸನಾಳು ಗ್ರಾಮದತ್ತ ಯುವಕರು ಬೈಕ್ನಲ್ಲಿ ಹೋಗುತ್ತಿದ್ದರು. ಆಗ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರನ್ನು ಕಂಡು ಹಿಂದಕ್ಕೆ ಪರಾರಿಯಾಗಲು ಯತ್ನಿಸಿದ್ದಾರೆ.
ಆತುರದಲ್ಲಿ ಯು-ಟರ್ನ್ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಯುವಕರು ಬೈಕ್ನಿಂದ ರಸ್ತೆಗೆ ಬಿದ್ದಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ ಯುವಕರನ್ನು ಸ್ಥಳೀಯರ ನೆರವಿನಿಂದ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಸಾವನ್ನಪ್ಪಿದ್ದಾರೆ.