ಹುಣಸೂರು ಚುನಾವಣೆ: ಸಿದ್ದರಾಮಯ್ಯ ಮತ್ತು ಶ್ರೀರಾಮುಲು ನಡುವೆ ಬಿಗ್ ಫೈಟ್
Recommended Video
ಮೈಸೂರು, ನವೆಂಬರ್ 22: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಲ್ಲಿ ಮುಖಾಮುಖಿಯಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಶ್ರೀರಾಮುಲು ಈಗ ಮತ್ತೊಂದು ಆಖಾಡಕ್ಕೆ ಸಿದ್ಧವಾಗಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಸೇಡು ತೀರಿಸಿಕೊಳ್ಳಲು ಶ್ರೀರಾಮುಲು ಮುಂದಾಗಿದ್ದಾರೆ. ಬಾದಾಮಿಯಲ್ಲಿ 1600 ಮತಗಳ ಅಂತರದಲ್ಲಿ ಶ್ರೀರಾಮುಲು ಸೋತಿದ್ದರು.
ಡಿಸೆಂಬರ್ 05 ರಂದು ರಾಜ್ಯದಲ್ಲಿ ನಡೆಯುವ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯ ಹುಣಸೂರು ವಿಧಾನಸಭಾ ಕ್ಷೇತ್ರ ಮಾತ್ರ ಎಲ್ಲದಕ್ಕಿಂತ ಭಿನ್ನವಾಗಿದೆ. ಇಬ್ಬರು ದಿಗ್ಗಜ ನಾಯಕರ ಪರೋಕ್ಷ ಗುದ್ದಾಟಕ್ಕೆ ಸಿದ್ಧವಾಗಿದ್ದು, ಸಿದ್ದರಾಮಯ್ಯ ಮತ್ತು ಶ್ರೀರಾಮುಲು ಬಿರುಸಿನ ಪ್ರಚಾರ ನಡೆಸುವ ಮೂಲಕ ಚುನಾವಣಾ ಕಾವು ಹೆಚ್ಚಿಸುತ್ತಿದ್ದಾರೆ.
ಸಿದ್ದರಾಮಯ್ಯಗೆ ರಾಜೀನಾಮೆ ಸವಾಲು ಎಸೆದ ಶ್ರೀರಾಮುಲು
ಹುಣಸೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಹೆಚ್.ವಿಶ್ವನಾಥ್, ಕಾಂಗ್ರೆಸ್ ನಿಂದ ಹೆಚ್.ಪಿ.ಮಂಜುನಾಥ್ ಅಭ್ಯರ್ಥಿಗಳಾಗಿದ್ದರೂ ಸಹ ಸಿದ್ದರಾಮಯ್ಯ ಮತ್ತು ಶ್ರೀರಾಮುಲು ನಡುವಿನ ಕುಸ್ತಿ ಆಖಾಡವಾಗಿ ಮಾರ್ಪಟ್ಟಿದೆ.
ಏಕೆಂದರೆ ಹೇಗಾದರೂ ಮಾಡಿ ವಿಶ್ವನಾಥ್ ರನ್ನು ಗೆಲ್ಲಿಸಬೇಕೆಂಬುದು ಶ್ರೀರಾಮುಲು ಪಣತೊಟ್ಟಿದ್ದಾರೆ. ಬಾದಾಮಿ ಪ್ರತಿಕಾರಕ್ಕೆ ಹುಣಸೂರಿಗೆ ಬಂದಿರುವ ಶ್ರೀರಾಮುಲು ಶಕ್ತಿ ಇದ್ದರೆ ಮತ್ತೆ ಚುನಾವಣೆಗೆ ಬನ್ನಿ ಎಂದು ಸಿದ್ದುಗೆ ಸವಾಲ್ ಹಾಕಿದ್ದಾರೆ.
ಇಬ್ಬರು ನಾಯಕರು ಪ್ರತಿಷ್ಠೆಯ ಕ್ಷೇತ್ರವನ್ನಾಗಿ ತೆಗೆದುಕೊಂಡಿದ್ದಾರೆ. ಸದ್ಯ ರಾಜಕೀಯ ವೈರಿಯಾಗಿ ಗುರುತಿಸಿಕೊಂಡಿರುವ ಮತ್ತು ಮೈತ್ರಿ ಸರ್ಕಾರ ಬೀಳಿಸಲು ಪ್ರಮುಖ ಕಾರಣೀಭೂತರಾದ ಹೆಚ್.ವಿಶ್ವನಾಥ್ ರನ್ನು ಸೋಲಿಸಿ, ರಾಜಕೀಯವಾಗಿ ಮೂಲೆಗುಂಪು ಮಾಡಲು ಸಿದ್ದರಾಮಯ್ಯ ಪದೇ ಪದೇ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡು ತಾವೇ ಅಭ್ಯರ್ಥಿ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ.
ಮತ್ತೆ ಶ್ರೀರಾಮುಲು ವಿರುದ್ಧ ಗುಡುಗಿದ ಸಿದ್ದರಾಮಯ್ಯ
ಸಿದ್ದರಾಮಯ್ಯರಿಗೆ ಮುಖಭಂಗ ಮಾಡಲು ಇದೇ ಸರಿಯಾದ ಸಮಯ ಎಂದು ಅರಿತ ಶ್ರೀರಾಮುಲು ಹುಣಸೂರಲ್ಲಿ ವಿಶ್ವನಾಥ್ ಪರವಾಗಿ ಮತಬೇಟೆಗೆ ಇಳಿದಿದ್ದಾರೆ. ದಿನದಿಂದ ದಿನಕ್ಕೆ ಮತ್ತಷ್ಟು ರಂಗು ಪಡೆಯುತ್ತಿರುವ ಉಪ ಚುನಾವಣೆ, ಮತದಾನ ದಿನ ಮತದಾರ ಯಾರ ಕಡೆಗೆ ಒಲವು ತೋರಿದ್ದಾರೆ ಎಂದು ಗೊತ್ತಾಗಲು ಫಲಿತಾಂಶ ಬರುವವರೆಗೂ ಕಾಯಲೇಬೇಕು