ಚಿಂತಕ ಭಗವಾನ್ ಆರೋಗ್ಯದಲ್ಲಿ ಏರುಪೇರು: ಇಂದು ಶಸ್ತ್ರಚಿಕಿತ್ಸೆ
ಮೈಸೂರು, ಮೇ 18 : ಚಿಂತಕ ಹಾಗೂ ಹಿರಿಯ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ಗೆ ಅನಾರೋಗ್ಯದ ಕಾರಣ ನಿನ್ನೆ ಸಂಜೆ ವಾಯುವಿಹಾರಕ್ಕೆ ತೆರಳಿದ್ದ ವೇಳೆ ಕುಸಿದುಬಿದ್ದು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಶಸ್ತ್ರ ಚಿಕಿತ್ಸೆ ನಡೆಯಲಿದೆ. ಸದ್ಯ ಅವರಿಗೆ ಐಸಿಯುನಲ್ಲಿಯೇ ಟ್ರೀಟ್ ಮೆಂಟ್ ಮುಂದುವರೆದಿದೆ.
ದಿಢೀರ್ ಅನಾರೋಗ್ಯಕ್ಕೀಡಾದ ಕೆ.ಎಸ್.ಭಗವಾನ್ ರವರು ಶುಕ್ರವಾರ ಸಂಜೆ ವಾಕಿಂಗ್ ಮಾಡುವ ವೇಳೆ ಕುಸಿದು ಬಿದ್ದರು. ತಕ್ಷಣ ಅವರ ಅಂಗರಕ್ಷಕರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.
ಪ್ರೊ.ಕೆ.ಎಸ್.ಭಗವಾನ್ ಅಸ್ವಸ್ಥ, ಆಸ್ಪತ್ರೆಗೆ ದಾಖಲು
ಇದೇ ವೇಳೆ ಅವರಿಗೆ ಹಾರ್ಟ್ ಬ್ಲಾಕ್ ಗೊಂಡಿದ್ದು, ಬಿದ್ದ ರಭಸಕ್ಕೆ ತಲೆ ಹಾಗೂ ಮೂಗಿನಿಂದ ರಕ್ತ ಸ್ರಾವವಾಗಿದೆ.
ತಕ್ಷಣ ಮೈಸೂರಿನ ಸುಯೋಗ್ ಆಸ್ಪತ್ರೆಯ ಕ್ಯಾಥ್ ಲ್ಯಾಬ್ ನಲ್ಲಿ ಭಗವಾನ್ ಅವರ ಆರೋಗ್ಯ ತಪಾಸಣೆ ನಡೆಸಿದರು. ಡಾ.ಯೋಗಣ್ಣ ಹಾಗೂ ಕಾರ್ಡಿಯಾಲಾಜಿಸ್ಟ್ ಡಾ. ಹರ್ಷ ಅವರಿಂದ ಭಗವಾನ್ ರವರ ಆರೋಗ್ಯ ತಪಾಸಣೆ ನಡೆದಿದೆ.
ಶುಕ್ರವಾರ ತಾತ್ಕಾಲಿಕವಾಗಿ ಪೇಸ್ ಮೇಕರ್ ಹಾಕಿ ಚಿಕಿತ್ಸೆ ನೀಡಲಾಗಿತ್ತು. ಇಂದು ಅದನ್ನು ತೆರೆದು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಅವರನ್ನು ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿದೆ.