ಭಗತ್ ಸಿಂಗ್ ಪಠ್ಯವನ್ನು ಪುಸ್ತಕರಿಂದ ಕೈ ಬಿಟ್ಟಿಲ್ಲ; ಪ್ರತಾಪ್ ಸಿಂಹ
ಮೈಸೂರು, ಮೇ 19: "10ನೇ ತರಗತಿ ಪಠ್ಯ ಪುಸ್ತಕದಿಂದ ಭಗತ್ ಸಿಂಗ್, ನಾರಾಯಣ ಗುರು ಪಠ್ಯವನ್ನು ಕೈ ಬಿಟ್ಟಿಲ್ಲ. ಕಾಂಗ್ರೆಸ್ ವಿನಾಕಾರಣ ಈ ವಿಚಾರದಲ್ಲಿ ವಿವಾದ ಮಾಡುತ್ತಿದೆ" ಎಂದು ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ ದೂರಿದರು.
ಗುರುವಾರ ನಗರದಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ಗೆ ದಿಢೀರ್ ಆಗಿ ಭಗತ್ ಸಿಂಗ್ ಮೇಲೆ ಯಾಕೆ ಇಷ್ಟೊಂದು ಪ್ರೀತಿ ಬಂತು ಎನ್ನುವುದು ಗೊತ್ತಾಗುತ್ತಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಸುಳ್ಳು ಹೇಳುತ್ತಿದೆ. ಭಗತ್ ಸಿಂಗ್ ಪಠ್ಯ ಮುಂದುವರೆದಿದೆ. ನಾರಾಯಣ ಗುರು ಪಠ್ಯ ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ವರ್ಗಾವಣೆಯಾಗಿದೆ" ಎಂದರು.
"ಆರ್ಎಸ್ಎಸ್ ಸಂಸ್ಥಾಪಕ ಹೆಗಡೆವಾರ್ ಪಠ್ಯ ಯಾಕೆ ಇರಬಾರದು?. ಅವರು ದೇಶ ಪ್ರೇಮದ ಬಗ್ಗೆ ಮಾಡಿದ ಭಾಷಣ ಮಕ್ಕಳಿಗೆ ಸ್ಪೂರ್ತಿಯಾಗಲು ಪಠ್ಯದಲ್ಲಿ ಅಳವಡಿಸಿದ್ದೇವೆ. ಅದರಲ್ಲಿ ತಪ್ಪೇನಿದೆ?" ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದರು.
"ಚಕ್ರವರ್ತಿ ಸೂಲಿಬೆಲೆ ಒಬ್ಬ ಶ್ರೇಷ್ಠ ವಾಗ್ಮಿ. ಅವರು ರಚಿಸಿದ ಪಠ್ಯ ಮಕ್ಕಳಿಗೆ ದೇಶದ ಬಗ್ಗೆ ಅಭಿಮಾನ ತುಂಬಲಿದೆ. ತಾಯಿ ಭಾರತೀಯ ಅಮರ ಪುತ್ರರು ಎಂಬ ಪಠ್ಯ ದೇಶ ಪ್ರೇಮ ಬೆಳಸಲಿದೆ. ಇದರಲ್ಲೂ ಕಾಂಗ್ರೆಸ್ನವರು ತಪ್ಪು ಹುಡುಕುವುದು ಹೇಗೆ?"ಎಂದರು.
"ಬೋಲೋ ಭಾರತ್ ಮಾತಾಕೀ ಜೈ ಅನ್ನೋದಕ್ಕೂ ಕಾಂಗ್ರೆಸ್ಗೆ ಸಮಸ್ಯೆ ಇದೆ. ದೇಶ ಪ್ರೇಮದ ಪಾಠ ಬೋಧಿಸುವುದು ಕಾಂಗ್ರೆಸ್ಗೆ ಸಮಸ್ಯೆ ಇದೆ. ಕಾಂಗ್ರೆಸ್ ಯಾವಾಗಲೂ ದೇಶ ವಿರೋಧಿಯಾಗಿಯೇ ವರ್ತಿಸುತ್ತಿದೆ" ಎಂದು ಆರೋಪಿಸಿದರು.
ಮೈಸೂರು ನಗರದ ಮಳೆ; ಮೈಸೂರು ನಗರದ ರಸ್ತೆಗಳು ಗುಂಡಿಬಿದ್ದ ವಿಚಾರದ ಬಗ್ಗೆ ಮಾತನಾಡಿದ ಅವರು, "ಕೆಲ ಪಾಲಿಕೆ ಸದಸ್ಯರಿಗೆ ರಸ್ತೆ ಗುಂಡಿ ಮುಚ್ಚುವ ಕನಿಷ್ಠ ಜ್ಞಾನ ಇಲ್ಲ. ಗುಂಡಿಗಳಿಗೆ ಮಣ್ಣು ಹಾಕಿದ್ದಾರೆ. ಮಳೆಗೆ ಮತ್ತೆ ಮಣ್ಣು ಕೊಚ್ಚಿ ಹೋಗುತ್ತಿದೆ. ಅದಕ್ಕೆ ಸಾರ್ವಜನಿಕರಿಗೆ ಹೇಳುತ್ತಿದ್ದೇನೆ. ನಿಮ್ಮ ಮನೆಯ ರಸ್ತೆ ಸರಿ ಇಲ್ವಾ?, ನೀರು ಬರುತ್ತಿಲ್ಲವಾ?. ಪಾಲಿಕೆ ಸದಸ್ಯರ ಮನೆ ಮುಂದೆ ಧರಣಿ ಕುಳಿತುಕೊಳ್ಳಿ. ಸಾರ್ವಜನಿಕರು ಜನಪ್ರತಿನಿಧಿಗಳ ಅಡಿಯಾಳುಗಳಲ್ಲ. ಅವರ ಮನೆ ಮುಂದೆ ಹೋಗಿ ಧರಣಿ ಮಾಡಿ ಬಿಸಿ ಮುಟ್ಟಿಸಿ" ಎಂದು ಕರೆ ನೀಡಿದರು.
ಮುಸ್ಲಿಂಮರ ಬಗ್ಗೆ ಮಾತ್ರ ಕಾಳಜಿ; ಪ್ರತಿಪಕ್ಷ ನಾಯಕ ಸಿದ್ದರಾಮಯ್ಯದಲಿತರ ಸಾಲ ಮನ್ನ ಮಾಡುವ ಕುರಿತು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, "ಯಾವ ರಾಜ್ಯದಲ್ಲಿ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಏನು ಮಾಡಿದರು?. ಡಾ. ಜಿ ಪರಮೇಶ್ವರ ಸಿಎಂ ಆಗುವುದನ್ನು ತಪ್ಪಿಸಿದ್ದೇ ಸಿದ್ದರಾಮಯ್ಯನವರು ದಲಿತರಿಗೆ ಕೊಟ್ಟ ಕೊಡುಗೆ" ಎಂದು ಟೀಕಿಸಿದರು.
"ಜಿ. ಪರಮೇಶ್ವರ ಅಂಗಾಲಾಜಿದರು ಮಂತ್ರಿ ಸ್ಥಾನವನ್ನು ಕೊಡಲಿಲ್ಲ. ಕೋಲಾರದಲ್ಲಿ ಮುನಿಯಪ್ಪ ಹಾಗೂ ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸೋಲಿಸಿದ್ದೇ ಸಿದ್ದರಾಮಯ್ಯ ದಲಿತರಿಗೆ ಕೊಟ್ಟ ಕೊಡುಗೆ. ದಲಿತ ಸಮಾಜ ಪ್ರಜ್ಞಾವಂತ ಸಮಾಜ. ಸಿದ್ದರಾಮಯ್ಯನವರಿಗೆ ಮುಸ್ಲಿಂಮರ ಬಗ್ಗೆ ಮಾತ್ರ ವಿಶೇಷ ಕಾಳಜಿ ಇದೆ ಹೊರತು ದಲಿತ ಸಮಾಜದ ಮೇಲಲ್ಲಾ" ಎಂದರು.
ಮೈಸೂರು ಹುಲಿ ಆಗಿದ್ದು ಯಾವಾಗ?; ಪಠ್ಯ ಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಟೈಟಲ್ ಕೈ ಬಿಟ್ಟ ವಿಚಾರದ ಬಗ್ಗೆ ಮಾತನಾಡಿದ ಪ್ರತಾಪ್ ಸಿಂಹ, "ಟಿಪ್ಪು ಸುಲ್ತಾನ್ ಮೈಸೂರು ಹುಲಿ ಯಾವಾಗ ಆಗಿದ್ದು. ಯಾವ ಹುಲಿ ಕೊಂದಿದ್ದಂತೆ?. ಪೋಸ್ಟರ್ಗಳಲ್ಲಿ ಹುಲಿ ಚಿತ್ರಗಳನ್ನು ಹಾಕಿಬಿಟ್ಟರೆ ಮೈಸೂರು ಹುಲಿ ಆಗಿಬಿಡುತ್ತಾನೆಯೇ?. ಮೂರನೇ ಮತ್ತು ನಾಲ್ಕನೇ ಆಂಗ್ಲೋ ಮೈಸೂರು ಯುದ್ದದಲ್ಲಿ ಟಿಪ್ಪು ಸುಲ್ತಾನ್ ಯಾವ ರಣರಂಗದಲ್ಲಿ ಹೋರಾಟ ಮಾಡಿದ?. ಟಿಪ್ಪು ಸುಲ್ತಾನ್ ಕೋಟೆಯೊಳಗೆ ಸತ್ತಿದ್ದು, ಹುಲಿ ಎಂದಿಗೂ ಬೋನಿನಲ್ಲಿ ಸಾಯುವುದಿಲ್ಲ" ಎಂದು ವ್ಯಂಗ್ಯವಾಡಿದರು.
"ಟಿಪ್ಪು ಸುಲ್ತಾನ್ ಯುದ್ಧ ಮಾಡದೇ ಸಂಧಾನಕ್ಕೆ ಕಳುಹಿಸಿದ್ದ. ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಹುಲಿ ಎಲ್ಲಿತ್ತು?. ಕೋಟೆಯೊಳಗೆ ಸತ್ತು ಬಿದಿತ್ತು. ಯಾರೋ ನಾಲ್ಕು ಜನ ಟಿಪ್ಪು ಸುಲ್ತಾನ್ ಹುಲಿ ಅಂದರು. ಟಿಪ್ಪು ಸುಲ್ತಾನ್ ಮೈಸೂರು ಹುಲಿ ಅಲ್ಲಾ. ಎಂದಿಗೂ ಮೈಸೂರು ಹುಲಿ ನಾಲ್ವಡಿ ಕೃಷ್ಣ ರಾಜ್ ಒಡೆಯರ್ ಅವರೇ. ನಮ್ಮ ಹುಲಿ ಕೆಆರ್ಎಸ್ ಕಟ್ಟಿದೆ. ಬೆಂಗಳೂರಿಗೆ ಕರೆಂಟ್ ಕೊಟ್ಟಿದ್ದಾರೆ. ಅವರೇ ಎಂದಿಂಗೂ ನಮ್ಮ ಹುಲಿ" ಎಂದು ಪ್ರತಾಪ್ ಸಿಂಹ ಹೇಳಿದರು.