ಮೈಸೂರು: ಬೆಟ್ಟದಪುರದಲ್ಲಿ ತ್ರಿವಳಿ ರಥ ಎಳೆದ ಭಕ್ತರು
ಮೈಸೂರು, ಫೆಬ್ರವರಿ 3: ಇತಿಹಾಸ ಪ್ರಸಿದ್ಧ ಮೈಸೂರಿನ ಪಿರಿಯಾಪಟ್ಟಣದ ಬೆಟ್ಟದಪುರದಲ್ಲಿ ಒಂದೇ ಬಾರಿ ಮೂರು ರಥಗಳನ್ನು ಎಳೆಯುವುದರೊಂದಿಗೆ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡರು.
ತಾಲೂಕಿನ ಬೆಟ್ಟದಪುರದಲ್ಲಿ ಮೊದಲಿಗೆ ಗ್ರಾಮದ ಮಧ್ಯ ಭಾಗದಲ್ಲಿರುವ ಸಿಡಿಲು ಮಲ್ಲಿಕಾರ್ಜುನ ಸ್ವಾಮಿದೇವಸ್ಥಾನದಲ್ಲಿ ಭಕ್ತರು ಪೂಜೆ ಸಲ್ಲಿಸಿ, ಮೂರು ರಥಗಳಿಗೆ ತಲಾ ಒಂದರಂತೆ ಗಿರಿಜೆ, ಮಲ್ಲಿಕಾರ್ಜುನ ಸ್ವಾಮಿ ಹಾಗೂ ಬೆಳ್ಳಿ ಬಸಪ್ಪ ಮೂರ್ತಿಗಳನ್ನು ಕೂರಿಸಿ, ಅಲಂಕರಿಸಿ, ಪೂಜೆ ಸಲ್ಲಿಸಿ ಬಳಿಕ ರಥಗಳನ್ನು ಎಳೆದರು.
ಪ್ರಸಿದ್ಧ ಶಿಡ್ಲು ಮಲ್ಲಿಕಾರ್ಜುನ ಸ್ವಾಮಿ (ಮಲ್ಲಯ್ಯನ ಬೆಟ್ಟ) ಬೆಟ್ಟವನ್ನು ರಾಜ್ಯದ ವಿವಿಧ ಸ್ಥಳಗಳಿಂದ ಬಂದಿದ್ದ ಸಾವಿರಾರು ಭಕ್ತರು ಗುರುವಾರ ರಾತ್ರಿ ವೇಳೆಯಿಂದ ಶುಕ್ರವಾರ ಸಂಜೆಯವರೆಗೆ ಹತ್ತಿ ಇಳಿದರು.
ಯುವಕಯುವತಿಯರು, ನೂತನ ವಧು-ವರರು ರಥೋತ್ಸವದಲ್ಲಿ ಹಣ್ಣು ಜವನ ಎಸೆದು ಹರಕೆ ತೀರಿಸಿದರು.
ಇದೇ ವೇಳೆ ತಾಲೂಕು ಆಡಳಿತ ಮಂಡಳಿ ರಥೋತ್ಸವದ ಸಂದರ್ಭದಲ್ಲಿ ಒಟ್ಟು ಮೂರು ಜೊತೆ ವಧು-ವರರಿಗೆ ಉಚಿತವಾಗಿ ಸಾಮೂಹಿಕ ವಿವಾಹ ಮಾಡಿಸಿದರು.
ರಥೋತ್ಸವಕ್ಕೆ ಹಾಗೂ ಜಾತ್ರೆಗೆ ಆಗಮಿಸಿದ್ದ ಎಲ್ಲ್ಲ ಭಕ್ತಾಧಿಗಳಿಗೆ ಬೆಟ್ಟದಪುರದ ಸಂಘ ಸಂಸ್ಥೆಗಳು ಹಾಗೂ ದೇವಸ್ಥಾನ ಸಮಿತಿಯ ವತಿಯಿಂದ ಪ್ರಸಾದ, ಪಾನಕ, ಮಜ್ಜಿಗೆ ಹಾಗೂ ಫಲಹಾರವನ್ನು ವಿತರಿಸಲಾಯಿತು.
ತಾಲೂಕು ದಂಡಾಧಿಕಾರಿ ಜೆ.ಮಹೇಶ್, ಉಪತಹಸೀಲ್ದಾರ್ ಕೆ.ಎಸ್. ಕುಬೇರ್, ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಾಧಿಕಾರಿಗಳು, ದೇವಸ್ಥಾನ ಸಮಿತಿಯ ಅಧ್ಯಕ್ಷ ಸದಸ್ಯರು ಹಾಗೂ ಸಾವಿರಾರು ಭಕ್ತರು ಭಾಗವಹಿಸಿದ್ದರು.