ನಟ ಮಂಡ್ಯ ರಮೇಶ್ ರಂಗಶಾಲೆಯ ವಿನ್ಯಾಸಕ್ಕೆ ಪ್ರಶಸ್ತಿ
ಮೈಸೂರು, ಡಿಸೆಂಬರ್ 16 : ನಟ ಮಂಡ್ಯರಮೇಶ್ ರ ಕನಸಿನ ಕೂಸು ನಟನ ರಂಗಶಾಲೆಗೆ ಪ್ರಶಸ್ತಿಯೊಂದು ಲಭಿಸಿದೆ. ಮೈಸೂರು ನಗರದ ಹೊರವಲಯ ದಟ್ಟಗಳ್ಳಿಯಲ್ಲಿರುವ ಮಂಡ್ಯ ರಮೇಶ್ ಅವರ ನಟನ ರಂಗಮಂದಿರದ ವಾಸ್ತು ವಿನ್ಯಾಸಕ್ಕೆ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್(ಇಂಡಿಯಾ) ಜಿಲ್ಲಾ ಘಟಕ ಪ್ರಶಸ್ತಿ ನೀಡಿದೆ.
ಇದರಿಂದ ಕೆಲ ದಿನಗಳ ಹಿಂದೆ ನಾಟಕ ಅಕಾಡೆಮಿ ರಾಜ್ಯ ಪಶಸ್ತಿಗೆ ಆಯ್ಕೆಯಾಗಿರುವ ಮಂಡ್ಯ ರಮೇಶ್ ಅವರ ಮುಖದಲ್ಲಿ ಸಂತಸ ಇಮ್ಮಡಿಯಾಗಿದೆ. ರಂಗ ತರಬೇತಿ ಸಂಸ್ಥೆಯಾಗಿರುವ ನಟನ ರಂಗಮಂದಿರ ಕಲಾತ್ಮಕ, ಸೃಜನಶೀಲವಾಗಿದೆ ಎಂದು ಈ ಪ್ರಶಸ್ತಿ ನೀಡಲಾಗಿದೆ. ಈ ಕುರಿತಾಗಿ ಒನ್ ಇಂಡಿಯಾದೊಂದಿಗೆ ಮಾತನಾಡಿದ ಮಂಡ್ಯ ರಮೇಶ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ .
ನಾನು ಯಾವ ಪ್ರಶಸ್ತಿಗೂ ಅರ್ಜಿ ಗುಜರಾಯಿಸಿದವನೇ ಅಲ್ಲ. ಇದಕ್ಕಿದ್ದ ಹಾಗೆ ನಾನು ಲಂಡನ್ ಗೆ ಕಾರ್ಯಕ್ರಮದ ನಿಮಿತ್ತ ತೆರಳಿದಾಗ ನಮ್ಮ ರಂಗಶಾಲೆಗೆ ಬಂದಿದ್ದ ತಂಡ, ಇಲ್ಲಿನ ಮಾಹಿತಿಯನ್ನು ಕಲೆ ಹಾಕಿದೆ. ಪರಿಪೂರ್ಣ ರಂಗಮಂದಿರದ ಚಿತ್ರಣ ಅವರ ಬಳಿ ಇದೆ. ಕನಸುಗಾರ ಹಾಗೂ ಕಲಾಗಾರನ ಸಂಪೂರ್ಣ ನಮ್ಮ ರಂಗಶಾಲೆಯ ಕಟ್ಟಡದಲ್ಲಿದೆ. ಕಲಾತ್ಮಕತೆಗೆ ಕುರಿತಾದ ನಿಜವಾದ ಬೆಲೆ ಈ ರೀತಿ ಪ್ರಶಸ್ತಿ ಹುಡುಕಿ ಬಂದ ಹಾಗಾಗಿದೆ. ನಮಗೆ ಸಂತಸ ತಂದಿದೆ.
ನಮ್ಮ ಎಲ್ಲಾ ಆಶಯ, ಕನಸು ನನಸಾಗಿದೆ. ನನ್ನ 35 ವರುಷಗಳ ಕನಸು, ಕಿಶೋರ್ ಚಂದ್ರ ಎಂಬ ಇಂಜಿನಯರ್ರವ ರ ಸಹಕಾರದಿಂದ ನನಸಾಗಿದೆ. ಅವರ ಬಗ್ಗೆ ನನಗೆ ಹೆಮ್ಮೆಯಿದೆ. ಇದು ನನ್ನೊಬ್ಬನ ಗೆಲುವಲ್ಲ. ನಮ್ಮ ಈ ಕಟ್ಟಡದ ನಿರ್ಮಾಣದಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಸಲ್ಲಬೇಕಾದ ಪ್ರಶಸ್ತಿ ಇದಾಗಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ನಟ, ಮಂಡ್ಯ ರಮೇಶ್.
ಕರ್ನಾಟಕ ನಾಟಕ ಅಕಾಡೆಮಿಯ 2017ನೇ ಸಾಲಿನ ಪ್ರಶಸ್ತಿಗಳನ್ನು ಘೋಷಿಸಿದ್ದು,. ಚಲನಚಿತ್ರ ನಟ, ರಂಗ ನಿರ್ದೇಶಕ ಮಂಡ್ಯ ರಮೇಶ್ ಗೂ ಸಹ ಬಾರಿ ಪ್ರಶಸ್ತಿ ಭಾಜನವಾಗಿದೆ. ಇನ್ನು ಈ ಕುರಿತಾಗಿಯೂ ಪ್ರತಿಕ್ರಿಯಿಸಿದ ಅವರು, ನನಗೊಂದು ತರಹ ದು ಹ್ಯಾಟ್ರಿಕ್ ಗೆಲುವು. ಇದು ನಾನು ಮರೆಯಲಾಗದ ಅಭೂತಪೂರ್ವ ಕ್ಷಣ. ನಾನಗೆ ಹಿರಿಯ ರಂಗಕರ್ಮಿ ಹೆಗ್ಗೋಡು ಪ್ರಸನ್ನ ಅವರಂತಹ ವ್ಯಕ್ತಿಯೊಂದಿಗೆ ವೇದಿಕೆ ಹಂಚಿಕೊಳ್ಳುವುದು ಶ್ಲಾಘನಾರ್ಹ. ಅದರಲ್ಲಿ ಅವರೊಂದಿಗೆಯೇ ಪ್ರಶಸ್ತಿ ಪಡೆಯುತ್ತಿರುವುದು ನಂಬಲಾರ್ಹ ವಿಷಯ ಎಂದು ಮುಗುಳ್ನಕ್ಕರು ಮಂಡ್ಯ ರಮೇಶ್.