ಹುಣಸೂರು ತಾಲೂಕಿನ ಅಬ್ಬೂರಲ್ಲಿ ಹೆಜ್ಜೇನು ದಾಳಿಗೆ ರೈತ ಬಲಿ
ಮೈಸೂರು, ಸೆಪ್ಟೆಂಬರ್ 15 : ಹೆಜ್ಜೇನು ದಾಳಿಗೆ ರೈತನೊಬ್ಬ ಸಾವನ್ನಪ್ಪಿ ಮತ್ತೊಬ್ಬ ಗಂಭೀರ ಗಾಯಗೊಂಡಿರುವ ಘಟನೆ ಹುಣಸೂರು ತಾಲೂಕಿನ ಅಬ್ಬೂರು ಗ್ರಾಮದಲ್ಲಿ ಶನಿವಾರ ನಡೆದಿದೆ
ಅಬ್ಬೂರು ಗ್ರಾಮದ ನಿವಾಸಿ ಶಂಕರೇಗೌಡ(45) ಮೃತಪಟ್ಟ ದುರ್ದೈವಿ. ರಾಮೇಗೌಡ ಎಂಬುವರು ಗಾಯಗೊಂಡಿದ್ದು ಹನಗೋಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶನಿವಾರ ಬೆಳಿಗ್ಗೆ ಮೃತ ಶಂಕರೇಗೌಡ ಅವರು, ತಮ್ಮ ಜಮೀನಿನಲ್ಲಿ ಬೆಳೆದಿದ್ದ ಮುಸುಕಿನ ಜೋಳದ ಬೆಳೆಯ ಕಟಾವಿಗೆ ರಾಮೇಗೌಡ ಎಂಬುವರೊಂದಿಗೆ ತೆರಳಿದ್ದರು. ಈ ವೇಳೆ ಜಮೀನಿನ ಮಾವಿನ ಮರದಲ್ಲಿದ್ದ ಹೆಜ್ಜೆನು ನೊಣಗಳು ದಿಢೀರ್ ಆಗಿ ಇವರ ಮೇಲೆ ದಾಳಿ ಮಾಡಿವೆ.
ರಾಮೇಗೌಡ ಅವರ ಮೇಲೆ ಹೆಚ್ಚಿನ ಜೇನು ನೊಣಗಳು ದಾಳಿ ಮಾಡಿದ ಪರಿಣಾಮ ಅವರು ಗಂಭೀರ ಗಾಯಗೊಂಡಿದ್ದಾರೆ. ಆದರೂ ಅಲ್ಲಿಯೇ ಇದ್ದ ಜೋಳದ ಸೋಗೆಗೆ ಬೆಂಕಿ ಹಚ್ಚಿದ್ದರಿಂದ ನೊಣಗಳು ಅವರನ್ನು ಬಿಟ್ಟು ಹೋಗಿವೆ.
ಇನ್ನು ಜತೆಗಿದ್ದ ಶಂಕರೇಗೌಡರ ಮೇಲೆಯೂ ಹೆಜ್ಜೇನು ದಾಳಿ ಮಾಡಿವೆ. ತಕ್ಷಣವೇ ವಿಷಯ ತಿಳಿದ ಅಕ್ಕ-ಪಕ್ಕದ ರೈತರು ಸೇರಿ ಅವರಿಬ್ಬರನ್ನು ಹತ್ತಿರದ ಹನಗೋಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಂಭೀರ ಗಾಯಗೊಂಡ ಶಂಕರೇಗೌಡ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆ, ರಾಮೇಗೌಡ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.