ಕಾಲ್ನಡಿಗೆ ಮೂಲಕ ಕೊರೋನಾ ಯೋಧರಿಗೆ ಧನ್ಯವಾದ ಸಮರ್ಪಣೆ!
ಮೈಸೂರು, ಏಪ್ರಿಲ್ 8; ಈಗಲೂ ಕೊರೋನಾದಿಂದ ಸಂಕಷ್ಟ ಅನುಭವಿಸುತ್ತಲೇ ಇದ್ದೇವೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜನ ಕೊರೋನಾ ನಡುವೆಯಿದ್ದುಕೊಂಡು ಕೊರೋನಾದ ವಿರುದ್ಧ ಹೋರಾಡುವುದನ್ನು ಕಲಿತಿದ್ದಾರೆ. ಅಷ್ಟೇ ಅಲ್ಲ ಹೋರಾಡುತ್ತಲೇ ಇದ್ದಾರೆ.
ಇದೇ ಸಮಯದಲ್ಲಿ ಕಳೆದ ವರ್ಷದ ಪರಿಸ್ಥಿತಿ ಹೇಗಿತ್ತು? ಎಂಬುದನ್ನು ನೆನಪಿಸಿಕೊಂಡರೆ ಮೈಜುಂ ಎನ್ನುತ್ತದೆ. ಆವತ್ತು ಜನ ಆತಂಕದಲ್ಲಿಯೇ ಬದುಕು ಸಾಗಿಸುತ್ತಿದ್ದರು. ಕೊರೋನಾ ಸೋಂಕು ಪೀಡಿತರನ್ನು ನೋಡುತ್ತಿದ್ದ ನೋಟವೇ ಭಯಾನಕವಾಗಿತ್ತು.
ಮೈಸೂರು-ತಾಳಗುಪ್ಪ ಹೊಸ ರೈಲು; ವೇಳಾಪಟ್ಟಿ
ಆದರೂ ಅಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಮುಖ್ಯವಾಹಿನಿಯಲ್ಲಿ ನಿಂತು ಹೋರಾಡಿದ ಕೊರೋನಾ ಯೋಧರ ಕಾರ್ಯವನ್ನು ನಾವು ಮರೆಯುವಂತಿಲ್ಲ. ಅದು ಆಸ್ಪತ್ರೆ ವೈದ್ಯರಿಂದ ಆರಂಭವಾಗಿ ಪೌರಕಾರ್ಮಿಕರ ತನಕ.
ಬೆಂಗಳೂರಿನಿಂದ ಮೈಸೂರಿಗೆ ಬರುವವರು ಕೋವಿಡ್-19 ನೆಗೆಟಿವ್ ವರದಿ ತರಲು ಜಿಲ್ಲಾಧಿಕಾರಿ ಸಲಹೆ
ತಮ್ಮ ಜೀವವನ್ನೇ ಪಣವಾಗಿಟ್ಟು ಹಲವರು ಹಲವು ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಅದರ ಪರಿಣಾಮವಾಗಿ ನವೆಂಬರ್, ಡಿಸೆಂಬರ್ ವೇಳೆಗೆಲ್ಲ ಕೊರೋನಾ ಸೋಂಕು ಹರಡುವಿಕೆಯಲ್ಲಿ ತುಸು ಇಳಿಕೆ ಕಂಡು ಬಂದಿತ್ತು.
ಅರಸೀಕರೆ-ಮೈಸೂರು ಎಕ್ಸ್ಪ್ರೆಸ್ ರೈಲು; ವೇಳಾಪಟ್ಟಿ
ಶ್ಲಾಘನೀಯ ಕಾರ್ಯ ಮಾಡಿದ ಯುವಕ
ಕೊರೋನಾದ ಸಂಕಷ್ಟದಲ್ಲಿ ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿದ ಯೋಧರಿಗೆ ಜನ, ಸಂಘ ಸಂಸ್ಥೆಗಳು ಹಲವು ರೀತಿಯಲ್ಲಿ ಸನ್ಮಾನಿಸಿವೆ, ಗೌರವಿಸಿವೆ, ಶ್ಲಾಘಿಸಿವೆ. ಆದರೆ ಇದೆಲ್ಲದರ ನಡುವೆ ಮೈಸೂರಿನ ಯುವಕ ಕೊರೋನಾ ಯೋಧರಿಗೊಂದು ಧನ್ಯವಾದ ಹೇಳುವ ಸಲುವಾಗಿ ಕೈಗೊಂಡ ಕಾರ್ಯವಿದೆಯಲ್ಲ ಅದು ಮಾತ್ರ ಸಾಮಾನ್ಯವಾದುದಲ್ಲ. ಅದೊಂದು ಕಠಿಣ ತಪಸ್ಸು ಎಂದರೆ ತಪ್ಪಾಗಲಾರದು. ಹಾಗಾದರೆ ಆತ ಮಾಡಿದ್ದಾದರೂ ಏನು ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತದೆ, ಆತ ಮಾಡಿದ ಕಾರ್ಯದ ಬಗ್ಗೆ ತಿಳಿಯುತ್ತಾ ಹೋದರೆ ನಿಜಕ್ಕೂ ಹೆಮ್ಮೆಯಾಗುತ್ತದೆ.
ಡಿ.11ರಂದು ಮೈಸೂರಿನಿಂದ ನಡಿಗೆ ಆರಂಭ
ಕೊರೋನಾ ಯೋಧರಿಗೆ ಅಲ್ಲಲ್ಲಿ ಸನ್ಮಾನ, ಗೌರವ ನೀಡುತ್ತಿದ್ದ ಸಮಯದಲ್ಲಿ ಮೈಸೂರಿನ ಯುವಕ ಭರತ್ಗೆ ತಾನು ಏನಾದರೊಂದು ಕಾರ್ಯವನ್ನು ಮಾಡಲೇ ಬೇಕೆಂಬ ಬಯಕೆ ಮೂಡಿತ್ತು. ಅದು ಯಾರೂ ಮಾಡದ ಮತ್ತು ಕಠಿಣವಾದ ನಿರ್ಧಾರವಾಗಿತ್ತು. ಇಡೀ ದೇಶದಲ್ಲಿ ಕೊರೋನಾ ವಿರುದ್ಧ ಯೋಧರು ಹೋರಾಡಿದ್ದಾರೆ. ಅವರಿಗೆ ಧನ್ಯವಾದಗಳನ್ನು ಹೇಳಲೇ ಬೇಕೆಂಬುದು ಅವರ ಮನದಾಸೆಯಾಗಿತ್ತು. ಹೀಗಾಗಿಯೇ ಅವರು ಧನ್ಯವಾದಗಳನ್ನು ತಿಳಿಸುವ ಸಲುವಾಗಿ ಊರು ಬಿಟ್ಟು ಹೊರಟು ಬಿಟ್ಟರು. ನಡಿಗೆಯ ಮೂಲಕವೇ ಇಡೀ ದೇಶ ಸುತ್ತುವ ನಿರ್ಧಾರಕ್ಕೆ ಅವರು ಬಂದರು. ಅದರಂತೆ 2020 ಡಿಸೆಂಬರ್ 11ರಂದು ಮೈಸೂರಿನಿಂದ ನಡೆಯಲು ಆರಂಭಿಸಿದ ಅವರು ನಡೆಯುತ್ತಲೇ ಮುಂದೆ ಸಾಗಿದರು. ಅವರು ಕೇವಲ ನಡಿಗೆಯೊಂದನ್ನೇ ಮಾಡಿದ್ದರೆ ಅದರಲ್ಲೇನು ವಿಶೇಷ ಎಂದು ತಳ್ಳಿ ಹಾಕಬಹುದಿತ್ತು. ಆದರೆ ಅವರು ಮಾಡಿದ ಕಾರ್ಯ ಮಾತ್ರ ನಿಜಕ್ಕೂ ಶ್ಲಾಘನೀಯ.
ಪರಿಸರಕ್ಕೆ 140 ಗಿಡನೆಟ್ಟು ಕೊಡುಗೆ
ರಾಷ್ಟ್ರೀಯ ಹೆದ್ದಾರಿಯಲ್ಲಿ ತಮ್ಮ ನಡಿಗೆಯನ್ನು ಆರಂಭಿಸಿದ ಅವರು ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ತೆರಳುವ ಗುರಿಯನ್ನಿಟ್ಟುಕೊಂಡರು. ಅದರಂತೆ ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಪಂಜಾಬ್, ಹರಿಯಾಣ, ದೆಹಲಿ, ಚಂಡೀಘಡ ಮೂಲಕ ಜಮ್ಮು ಕಾಶ್ಮೀರಕ್ಕೆ ತೆರಳುವ ಮೂಲಕ ಗುರಿ ಸಾಧಿಸಿ ಕೀರ್ತಿಯ ಪತಾಕೆಯನ್ನು ಹಾರಿಸಿದ್ದಾರೆ. ಸುಮಾರು ಮೂರು ತಿಂಗಳು ಮತ್ತು ಒಂಬತ್ತು ದಿನಗಳ ಕಾಲದ ನಡಿಗೆಯಲ್ಲಿ ಸುಮಾರು ನಾಲ್ಕು ಸಾವಿರ ಕಿ.ಮೀ.ನ್ನು ಕ್ರಮಿಸಿರುವುದು ನಿಜಕ್ಕೂ ಹೆಮ್ಮೆ ಪಡುವ ವಿಚಾರವೇ. ಈ ವೇಳೆ ಅವರು ಬರೀ ನಡಿಗೆಯೊಂದನ್ನೇ ಮಾಡಿಲ್ಲ. ಸುಮಾರು 140 ಗಿಡಗಳನ್ನು ನೆಟ್ಟಿದ್ದಾರೆ. ಜತೆಗೆ ಶಾಲಾ ಕಾಲೇಜುಗಳಿಗೆ ತೆರಳಿ ಅಲ್ಲಿನ ಮಕ್ಕಳಿಗೆ ಭಾಷಣ ಮಾಡಿ ದೇಶಭಕ್ತಿ ತುಂಬಿದ್ದಾರೆ. ಅಲ್ಲಲ್ಲಿ ಸಿಕ್ಕ ಕೊರೋನಾ ವಾರಿಯರ್ಸ್ಗೆ ಧನ್ಯವಾದ ಸಮರ್ಪಿಸಿದ್ದಾರೆ.
ಯಶಸ್ವಿಯಾಗಿ ತವರಿಗೆ ಮರಳಿದ ಭರತ್
ರಾತ್ರಿ ಹಗಲೆನ್ನದೆ ನಡೆದ ಅವರು ರಾತ್ರಿ ಹೊತ್ತು ಊರುಗಳ ಮನೆಯ ಜಗುಲಿ ಮೇಲೆ, ಪಟ್ಟಣಗಳ ಫುಟ್ ಪಾತ್ ನಲ್ಲಿ ದೇಗುಲ, ಗುರು ಮಂದಿರಗಳಲ್ಲಿ ಮಲಗಿದ್ದಾರೆ. ಅಷ್ಟೇ ಅಲ್ಲದೆ ಅಲ್ಲಿಯೇ ಕೊಡುತ್ತಿದ್ದ ಆಹಾರ, ತಿನಿಸುಗಳನ್ನು ಸೇವಿಸಿದ್ದಾರೆ. ಒಂದೇ ದಿನದಲ್ಲಿ ಸುಮಾರು ತೊಂಬತ್ತೊಂಬತ್ತು ಕಿ.ಮೀ. ನಡೆದ ದಾಖಲೆಯೂ ಇದೆ. ಹೀಗೆ ಯಾರು ಮಾಡದ ಸಾಧನೆಯನ್ನು ಮಾಡಿದ ಭರತ್ ತಾವು ಅಂದುಕೊಂಡ ಕೆಲಸವನ್ನು ಮಾಡಿ ಆ ಮೂಲಕ ಕೊರೋನಾ ಯೋಧರಿಗೊಂದು ಸಲಾಮ್ ಹೇಳಿ ತನ್ನ ತವರು ಮೈಸೂರಿಗೆ ಯಶಸ್ವಿಯಾಗಿ ಹಿಂತಿರುಗಿದ್ದಾರೆ. ಇದೀಗ ಅವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಉತ್ತಮ ರೀತಿಯ ಸ್ಪಂದನೆಗಳು ವ್ಯಕ್ತವಾಗುತ್ತಿವೆ.