ಮೈಸೂರು: ನಟ ದರ್ಶನ್ ಅವರ ಪ್ರೀತಿಯ ಬಸವ ಇನ್ನು ನೆನಪು ಮಾತ್ರ!
ಮೈಸೂರು, ಜೂನ್ 5: ನಟ ದರ್ಶನ್ ಗೆ ಪ್ರೀತಿ ಪಾತ್ರವಾಗಿದ್ದ ಕೆ.ಆರ್ ನಗರ ತಾಲೂಕಿನ ಕಾಳಮ್ಮನಕೊಪ್ಪಲು ಗ್ರಾಮದಲ್ಲಿದ್ದ ಬಸವ (ಎತ್ತು) ಇಹಲೋಕ ತ್ಯಜಿಸಿದೆ. ಬಸವ ಕಳೆದ ಕೆಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಇದಕ್ಕೆ ಎಲ್ಲ ರೀತಿಯ ಶುಶ್ರೂಷೆ ಮಾಡಿ ಆರೈಕೆ ಮಾಡಿದರೂ ಕೂಡ ಉಳಿಸಿಕೊಳ್ಳಲಾಗಲಿಲ್ಲ. ಈ ಬಸವನ ಸಾವು ಗ್ರಾಮಸ್ಥರಿಗೆ ಮಾತ್ರವಲ್ಲ ಸ್ವತಃ ನಟ ದರ್ಶನ್ ಗೂ ನೋವು ತಂದಿದಂತು ಸತ್ಯ.
Recommended Video
ಪ್ರಾಣಿ ಪಕ್ಷಿಗಳನ್ನು ಪ್ರೀತಿಸುವ ಮತ್ತು ಅವುಗಳ ನಡುವೆ ತಾನಿರಲು ಇಷ್ಟಪಡುವ ನಟ ದರ್ಶನ್ ಗೆ ಕಾಳಮ್ಮನಕೊಪ್ಪಲು ಗ್ರಾಮದ ಬಸವ ಎದುರಾಗಿದ್ದು ಅಪರೂಪದ ಸಂದರ್ಭದಲ್ಲಿ. ಕಳೆದ ವರ್ಷ ಮಂಡ್ಯ ಲೋಕಸಭಾ ಚುನಾವಣೆ ಕಾವೇರಿದ್ದ ದಿನಗಳು. ಮೈಸೂರು ಜಿಲ್ಲೆಯ ಕೆ.ಆರ್ ನಗರ ತಾಲೂಕಿನ ಕೆಲವು ಗ್ರಾಮಗಳು ಸ್ಟಾಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸೇರಿದ್ದು, ಅಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪರ ಚುನಾವಣಾ ಪ್ರಚಾರ ನಡೆಸಲು ನಟ ದರ್ಶನ್ ಬಂದಿದ್ದರು.
ಕೊರೊನಾ ಲಾಕ್ ಡೌನ್: ಸರಳವಾಗಿ ಬಸವ ಜಯಂತಿ ಆಚರಣೆ
ಗಜಗಾತ್ರದ ಈ ಬಸವನನ್ನು ನೋಡಿದ ಜನ ಹೆದರಿ ದೂರವಾದರು
ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು, ಅಲ್ಲಲ್ಲಿ ಮತದಾರರನ್ನು ಉದ್ದೇಶಿಸಿ ದರ್ಶನ್ ಭಾಷಣ ಮಾಡುತ್ತಿದ್ದರು. ತೆರೆದ ವಾಹನದಲ್ಲಿ ದರ್ಶನ್ ಸೇರಿದಂತೆ ಕೆಲವು ನಾಯಕರಿದ್ದರೆ, ಉಳಿದ ಅಭಿಮಾನಿಗಳು ಕಾರ್ಯಕರ್ತರು ವಾಹನ ಮುಂದೆ ತಂಡೋಪ ತಂಡವಾಗಿ ಸಾಗುತ್ತಿದ್ದರು. ಎಲ್ಲೆಡೆ ಜಯಕಾರ ಮೊಳಗುತ್ತಿತ್ತು.
ಚುನಾವಣಾ ಮೆರವಣಿಗೆ ಕಾಳಮ್ಮನಕೊಪ್ಪಲು ಗ್ರಾಮವನ್ನು ತಲುಪಿತ್ತು. ಈ ವೇಳೆ ಜನರ ಸದ್ದುಗದ್ದಲಕ್ಕೆ ಹೆದರದೆ ರಸ್ತೆ ನಡುವೆ ಊರ ಬಸವ ಅಡ್ಡಲಾಗಿ ನಿಂತಿತ್ತು. ಗಜಗಾತ್ರದ ಈ ಬಸವನನ್ನು ನೋಡಿದ ಜನ ಹೆದರಿ ದೂರವಾದರು. ಬಸವ ದಾರಿ ಬಿಡದಿದ್ದರೆ ದರ್ಶನ್ ಇದ್ದ ವಾಹನ ಮುಂದೆ ಚಲಿಸುವಂತಿರಲಿಲ್ಲ.
ಜೊತೆಗಿದ್ದವರಿಗೆ ಭಯದ ಜೊತೆಗೆ ಅಚ್ಚರಿಯಾಗಿತ್ತು
ಆದರೆ ಅಲ್ಲೊಂದು ಅಚ್ಚರಿಯ ಸನ್ನಿವೇಶವೊಂದು ಸೃಷ್ಟಿಯಾಗಿತ್ತು. ಎಲ್ಲಾರು ಏನು ಮಾಡೋದು ಎಂದು ಯೋಚಿಸುತ್ತಿರುವಾಗಲೇ ದರ್ಶನ್ ತಾನಿದ್ದ ವಾಹನದಿಂದ ಕೆಳಗಿಳಿದು ಬಂದಿದ್ದರು. ಅಲ್ಲದೆ ಬಸವನ ಕಡೆಗೆ ಹೆಜ್ಜೆ ಹಾಕಿದ್ದರು. ಜೊತೆಗಿದ್ದವರಿಗೆ ಭಯದ ಜೊತೆಗೆ ಅಚ್ಚರಿಯಾಗಿತ್ತು. ಹೀಗಾಗಿ ಎಲ್ಲರೂ ಕುತೂಹಲ ಭರಿತರಾಗಿ ದರ್ಶನ್ ಅವರನ್ನೇ ನೋಡುತ್ತಿದ್ದರು.
ಖುಷಿಯಿಂದ ದಾರಿ ಬಿಟ್ಟು ನಿಂತಿತು
ಈ ವೇಳೆ ಒಂದಿಷ್ಟು ಭಯಪಡದೆ ಬಸವನ ಬಳಿಗೆ ತೆರಳಿದ ದರ್ಶನ್ ಅದರ ಮೈದಡವಿದರು, ಅದು ಖುಷಿಯಿಂದ ದಾರಿ ಬಿಟ್ಟು ನಿಂತಿತು. ಅಲ್ಲಿದ್ದವರು ಆ ದೃಶ್ಯವನ್ನು ನೋಡಿ ಮೂಕಸ್ಮಿತರಾದರು. ಎಲ್ಲರೂ ಜೋರಾಗಿ ಜೈಕಾರ ಹಾಕತೊಡಗಿದರು. ಈ ಅಪರೂಪದ ದೃಶ್ಯ ಮೊಬೈಲ್ಗಳಲ್ಲಿ ಸೆರೆಯಾಗಿ ಸಾಮಾಜಿಕ ಜಾಲ ತಾಣ ಸೇರಿದಂತೆ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಯಿತು. ಅಲ್ಲಿಂದೀಚೆಗೆ ಆ ಬಸವನ ಖ್ಯಾತಿಯೂ ಇಮ್ಮಡಿಯಾಯಿತು. ಊರ ತುಂಬಾ ಓಡಾಡುತ್ತಾ, ಜನ ನೀಡಿದ್ದನ್ನು ತಿನ್ನುತ್ತಾ ಆರೋಗ್ಯವಾಗಿದ್ದ ಬಸವನಿಗೆ ಇತ್ತೀಚೆಗೆ ಆರೋಗ್ಯ ಹದಗೆಟ್ಟು ಮಲಗಿ ಬಿಟ್ಟಿತು. ಇದು ಸುದ್ದಿಯಾಗಿ ದರ್ಶನ್ ಅದರ ಆರೈಕೆಗೆ ಒತ್ತು ನೀಡುವಂತೆ ಹೇಳಿದ್ದರು. ಪಶುವೈದ್ಯರು ಚಿಕಿತ್ಸೆ ನೀಡಿದ್ದರು.
ಬಸವ ಕೊನೆಗೂ ಶುಕ್ರವಾರ ಸಾವನ್ನಪ್ಪಿದೆ
ಬಸವ ಚೇತರಿಸಿಕೊಳ್ಳಬಹುದೆಂದು ಊರಿನ ಜನ ಆಲೋಚನೆ ಮಾಡಿದ್ದರು. ಆದರೆ ದಿನಕಳೆಯುತ್ತಿದ್ದಂತೆಯೇ ಬಸವನ ಆರೋಗ್ಯ ಹದಗೆಡುತ್ತಾ ಹೋಯಿತು. ಕಳೆದ ಒಂದು ತಿಂಗಳಿನಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಸವ ಕೊನೆಗೂ ಶುಕ್ರವಾರ (ಜೂ.5) ಸಾವನ್ನಪ್ಪಿದೆ. ಬಸವಗಳು ಸಾಮಾನ್ಯವಾಗಿ ಎಲ್ಲ ಊರಿನಲ್ಲಿ ಇರುತ್ತವೆ. ಜನ ಅವುಗಳನ್ನು ಮುಟ್ಟಿ ನಮಸ್ಕರಿಸುತ್ತಾರೆ, ಪೂಜಿಸುತ್ತಾರೆ. ಅದರಂತೆ ಕೆ.ಆರ್ ನಗರ ತಾಲೂಕಿನ ಕಾಳಮ್ಮನಕೊಪ್ಪಲು ಗ್ರಾಮದಲ್ಲಿ ಬಸವ ಇತ್ತು. ಆದರೆ ಅದು ದರ್ಶನ್ ಅವರ ಪ್ರೀತಿಗೆ ಪಾತ್ರವಾಗಿದ್ದರಿಂದ ಹೆಚ್ಚು ಖ್ಯಾತಿಗೊಳಗಾಗಿತ್ತು. ಈ ಬಸವ ಇನ್ಮುಂದೆ ಬರೀ ನೆನಪಷ್ಟೆ.