ಮುಖ್ಯಮಂತ್ರಿಗಳಿಗಿರುವ ಸೌಜನ್ಯ ಶಿಕ್ಷಣ ಸಚಿವರಿಗಿಲ್ಲ : ಬರಗೂರು
ಮೈಸೂರು, ನವೆಂಬರ್ 24 : ರಾಜ್ಯದ ಮುಖ್ಯಮಂತ್ರಿಗಳಿಗಿರುವಷ್ಟು ಸೌಜನ್ಯ, ಸಮಯ, ಸಂಯಮ, ಶಿಕ್ಷಣ ಸಚಿವ ತನ್ವೀರ್ ಸೇಠ್ ಗೆ ಇಲ್ಲ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಛಾಟಿ ಬೀಸಿದರು.
ಚಿತ್ರಗಳು : ಮೈಸೂರಲ್ಲಿ 83ನೇ ಸಾಹಿತ್ಯ ಸಮ್ಮೇಳನ ಸಂಭ್ರಮ
ಮೈಸೂರಿನಲ್ಲಿ ನಡೆಯುತ್ತಿರುವ 83ನೇ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಿಕ್ಷಣ ಸಚಿವರ ಬೇಜವಬ್ದಾರಿ ವರ್ತನೆ ವಿರುದ್ಧ ಗರಂ ಆದರು.
ನಾಡಗೀತೆ, ನಾಡಧ್ವಜದಂತೆಯೇ ನಮಗೆ "ನಾಡಪಠ್ಯ' ವ್ಯವಸ್ಥೆ ಬೇಕು ಈ ಕುರಿತು ಮುಖ್ಯಮಂತ್ರಿಗಳಿಗೆ ಮತ್ತು ಶಿಕ್ಷಣ ಸಚಿವ ತನ್ವೀರ್ ಸೇಠ್ ಗೆ ಪತ್ರ ಬರೆದೆ, ಮುಖ್ಯ ಮಂತ್ರಿಗಳು ವಾರದಲ್ಲೇ ಉತ್ತರಿಸಿದರು ಆದರೆ ಶಿಕ್ಷಣ ಸಚಿವರು ಸೌಜನ್ಯಕ್ಕಾದರೂ ಪ್ರತಿಕ್ರಿಯಿಸಲಿಲ್ಲ. ಕನಿಷ್ಟ ಫೋನ್ ಕರೆ ಕೂಡ ಮಾಡಲಿಲ್ಲ ಎಂದರು.
ಸಮಾಜದಲ್ಲಿ ಈಗ ಆರ್ಥಿಕ ಅವಿವೇಕ, ಜಾತಿವಾದ, ಹಿಂಸೆ ಅಸಹಿಷ್ಣುತೆ ಹೆಚ್ಚಾಗಿದೆ ಎಂದ ಅವರು ಒಕ್ಕೂಟ ವ್ಯವಸ್ಥೆಯಲ್ಲಿ ನಾವು ನಮ್ಮ ರಾಜ್ಯದ ಹಕ್ಕು ಸಾಭೀತುಪಡಿಸಬೇಕಿದೆ ಹಾಗಾಗಿ ನಾಡಗೀತೆಯಂತೆ ನಾಡಪಠ್ಯದ ಅವಶ್ಯಕತೆ ಇದೆ ಎಂದು ಪ್ರತಿಪಾಧಿಸಿದರು.
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಿದ್ದರಾಮಯ್ಯ ಭಾಷಣದ ಮುಖ್ಯಾಂಶ
ದೇಶದ ಪ್ರಸ್ತುತ ಸ್ಥಿತಿಯ ಬಗ್ಗೆ ಮಾತನಾಡಿದ ಬರಗೂರು ರಾಮಚಂದ್ರಪ್ಪ ಅವರು ಮಾನವೀಯತೆ ಮರೆತು ಮತೀಯತೆ ಹುಟ್ಟು ಹಾಕಲಾಗುತ್ತಿದೆ. ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ರಂತವರನ್ನು ನಾವು ಕಳೆದುಕೊಂಡಿದ್ದೇವೆ. ನಮಗೆ ಸುಫಾರಿ ಸಂಸ್ಕೃತಿ ಬೇಕಾ? ಸೌಹಾರ್ಧ ಸಂಸ್ಕೃತಿ ಬೇಕಾ? ಕತ್ತು ಕತ್ತರಿಸುವವರಿಗೆ ಬಹುಮಾನ ಘೋಷಣೆ ಮಾಡಲಾಗುತ್ತಿದೆ ಈ ದೇಶದಲ್ಲಿ. ನಮಗೆ ಭಿನ್ನಾಭಿಪ್ರಾಯಕ್ಕೆ ಬಲಿ ಕೇಳುವ ಭಾರತ ಬೇಕಾ? ಬಹುತ್ವಕ್ಕೆ ಬದ್ಧವಾದ ಭಾರತ ಬೇಕಾ? ಎಂದು ಸಭಿಕರನ್ನು ಪ್ರಶ್ನೆ ಮಾಡಿದರು.
ನಮ್ಮ ದೇಶದಲ್ಲಿ ಸಾಂಸ್ಕೃತಿಕ ಸರ್ವಾಧಿಕಾರ ಶುರುವಾಗಿದೆ ಹೀಗಾಗಿ ಸುಫಾರಿ ಸಂಸ್ಕೃತಿ ತೊಡೆದುಹಾಕಿ, ಸೌಹಾರ್ಧ ಸಂಸ್ಕೃತಿ ಸೃಷ್ಟಿಸಬೇಕು, ನಾವು ಪ್ರತಿನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.
ಸ್ವತಃ ಪ್ರಗತಿಪರರಾದ ಬರಗೂರು ರಾಮಚಂದ್ರಪ್ಪ ಅವರು ತಮ್ಮ ಸಹವರ್ತಿಗಳನ್ನೂ ಬಿಡದೆ ಅವರ ಮೇಲೂ ಹರಿಹಾಯ್ದರು. 'ಇತ್ತೀಚೆಗೆ ಪ್ರಗತಿಪರರಲ್ಲೇ ಏಕತೆ ಇಲ್ಲವಾಗಿದೆ. 80ರ ದಶಕದಲ್ಲಿ ಇದ್ದ ಒಗ್ಗಟ್ಟು ಈಗ ಇಲ್ಲ, ನಾವು ಕಟ್ಟಿ ಹಾಕಿದ ದೋಣಿಯ ಹುಟ್ಟು ಹಾಕುವ ಜನ, ಆದ್ರೆ ನಾವು ಕಟ್ಟು ಬಿಚ್ಚಿದ ದೋಣಿಯ ಹುಟ್ಟು ಹಾಕುವ ಜನರಾಗಬೇಕು ಆ ಮೂಲಕ ನವ ಕರ್ನಾಟಕ ಕಟ್ಟೋಣ ಎಂದು ಅವರು ಕರೆ ನೀಡಿದರು.