ಬಣ್ಣಾರಿ ಅಮ್ಮನ್ ಶುಗರ್ಸ್ ಕಂಪನಿಯ 350 ಗುತ್ತಿಗೆ ನೌಕರರು ಅತಂತ್ರ
ಮೈಸೂರು, ಮೇ 06: ಮಾನವೀಯ ದೃಷ್ಟಿಯಿಂದ ಯಾವುದೇ ಕಾರ್ಮಿಕರನ್ನು ಕೆಲಸದಿಂದ ತೆಗೆಯದಂತೆ ಸರ್ಕಾರ ಮನವಿ ಮಾಡಿಕೊಂಡಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ನಷ್ಟ ಅನುಭವಿಸಿರುವ ಕಾರಣದಿಂದ ಕೆಲವು ಕಾರ್ಖಾನೆಗಳ ಮಾಲೀಕರು ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯುತ್ತಿರುವ ಕುರಿತಂತೆ ಸುದ್ದಿಗಳು ಅಲ್ಲಲ್ಲಿ ಹೊರಬರುತ್ತಿವೆ.
ಈ ನಡುವೆ ಕೊರೊನಾದ ಹಾಟ್ ಸ್ಪಾಟ್ ಆಗಿದ್ದ ನಂಜನಗೂಡಿನಲ್ಲಿ ಇನ್ನೂ ಪರಿಸ್ಥಿತಿ ತಿಳಿಯಾಗಿಲ್ಲ. ಜನ ಭಯದಿಂದಲೇ ಬದುಕುತ್ತಿದ್ದಾರೆ. ಆದರೆ ನಂಜನಗೂಡು ವ್ಯಾಪ್ತಿಯ ಕೈಗಾರಿಕಾ ಪ್ರದೇಶದಲ್ಲಿ ನೂರಾರು ಕಾರ್ಖಾನೆಗಳಿದ್ದು, ಬಹುತೇಕ ಕಾರ್ಖಾನೆಗಳು ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಚ್ಚಿವೆ. ಹೀಗಾಗಿ ಕಾರ್ಖಾನೆಗಳನ್ನು ನಂಬಿಕೊಂಡು ಬಂದಿದ್ದ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳ ಕಾರ್ಮಿಕರು ಪರಿತಪಿಸುವಂತಾಗಿದೆ.
ಚಾಮರಾಜನಗರ ಸಕ್ಕರೆ ಕಾರ್ಖಾನೆಗೆ ತಮಿಳುನಾಡು ಕಾರ್ಮಿಕರು
ಬಣ್ಣಾರಿ ಅಮ್ಮನ್ ಶುಗರ್ಸ್ ಕಾರ್ಖಾನೆ ಕಾರ್ಮಿಕರು ಹೊರಗೆ?
ಈ ನಡುವೆ ನಂಜನಗೂಡು ತಾಲೂಕಿನ ಮಲ್ಲುಪುರ ಗ್ರಾಮದಲ್ಲಿರುವ ಬಣ್ಣಾರಿ ಅಮ್ಮನ್ ಶುಗರ್ಸ್ ಕಾರ್ಖಾನೆಯಿಂದ ಸುಮಾರು ಮುನ್ನೂರೈವತ್ತು ಗುತ್ತಿಗೆ ಕಾರ್ಮಿಕರನ್ನು ಹೊರ ಕಳುಹಿಸಿರುವುದು ಬೆಳಕಿಗೆ ಬಂದಿದೆ. ಈ ಕಾರ್ಮಿಕರು ನಾಲ್ಕೈದು ಕಿಲೋಮೀಟರ್ ದೂರವನ್ನು ಕಾಲ್ನಡಿಗೆಯಲ್ಲಿ ನಡೆದು ನಂಜನಗೂಡು ಪಟ್ಟಣದ ಮಿನಿವಿಧಾನಸೌಧದ ತಹಶೀಲ್ದಾರ್ ಕಚೇರಿಗೆ ತಲುಪಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ತಹಶೀಲ್ದಾರ್ ಬಳಿ ಅಳಲು ತೋಡಿಕೊಂಡ ಕಾರ್ಮಿಕರು
ಅತಂತ್ರರಾಗಿರುವ ಕಾರ್ಮಿಕರ ಪೈಕಿ ಹೆಚ್ಚಿನವರು ಬಿಹಾರ ಮತ್ತು ಉತ್ತರಪ್ರದೇಶದವರಾಗಿದ್ದಾರೆ. ಅವರೆಲ್ಲರೂ ತಹಶೀಲ್ದಾರ್ ಮಹೇಶ್ ಕುಮಾರ್ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದು, ನಾವು ಮತ್ತೆ ಕಾರ್ಖಾನೆಗೆ ಹೋಗಿ ಕೆಲಸ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಮ್ಮನ್ನು ನಮ್ಮ ಊರಿಗೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಿಕೊಡಿ ಎಂದು ದುಂಬಾಲು ಬಿದ್ದಿದ್ದಾರೆ.
ಸಂಬಳ, ಆಹಾರ ಇಲ್ಲ ಎಂದ ಕಾರ್ಮಿಕರು
ಕಾರ್ಖಾನೆಯ ಮಾಲೀಕರು ಮತ್ತು ಗುತ್ತಿಗೆದಾರರು ನಮಗೆ ಕಳೆದ ಒಂದು ತಿಂಗಳುಗಳಿಂದ ಸರಿಯಾದ ರೀತಿಯಲ್ಲಿ ಆಹಾರ ಪದಾರ್ಥ ನೀಡಿಲ್ಲ. ದಿನನಿತ್ಯ ಅನ್ನ ಆಹಾರವಿಲ್ಲದೆ ಹಸಿವಿನಿಂದಲೇ ದಿನ ದೂಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಾವು ದುಡಿದಿರುವ ಮೂರು ತಿಂಗಳ ಸಂಬಳವನ್ನು ಕಾರ್ಖಾನೆಯವರು ನಮಗೆ ನೀಡಬೇಕು. ಇತ್ತ ಸಂಬಳವೂ ಕೊಡುತ್ತಿಲ್ಲ, ಜತೆಗೆ ಆಹಾರವನ್ನೂ ನೀಡುತ್ತಿಲ್ಲ. ತಮಿಳುನಾಡು ಮೂಲದ ಚೆಟ್ಟಿನಾಡು ಎಂಬ ಗುತ್ತಿಗೆ ಸಂಸ್ಥೆಯ ಮೂಲಕ ಕಾರ್ಖಾನೆಯ ಕೆಲಸ ನಿರ್ವಹಿಸುತ್ತಿರುವುದಾಗಿ ಅವರು ಹೇಳಿದ್ದಾರೆ.
ಭರವಸೆ ನೀಡಿದ ತಹಶೀಲ್ದಾರ್
ಕಾರ್ಮಿಕರ ಅಳಲು ಆಲಿಸಿದ ತಹಶೀಲ್ದಾರ್ ಮಹೇಶ್ ಕುಮಾರ್, ಸರ್ಕಾರದ ನಿಯಮಾನುಸಾರ ಆದೇಶವನ್ನು ಪಾಲನೆ ಮಾಡಿ ಅವರವರ ಊರುಗಳಿಗೆ ತಲುಪಿಸುವ ವ್ಯವಸ್ಥೆ ಮಾಡುವುದಾಗಿಯೂ, ಆ ಬಗ್ಗೆ ಭಯಪಡುವ ಅಗತ್ಯವಿಲ್ಲವೆಂದು ಭರವಸೆ ನೀಡಿದ್ದಾರೆ. ಕಾರ್ಖಾನೆಗೆ ತೆರಳುವುದಿಲ್ಲವೆಂದು ಪಟ್ಟು ಹಿಡಿದಿದ್ದ ಕಾರ್ಮಿಕರ ಮನವೊಲಿಸಿ ಸರ್ಕಾರದ ನಿಯಮ ಪಾಲಿಸಲು ಮೂರು ದಿನಗಳ ಕಾಲಾವಕಾಶ ಬೇಕಾಗಿದೆ. ಹೀಗಾಗಿ ನೀವೆಲ್ಲರೂ ಕಾರ್ಖಾನೆಗೆ ತೆರಳಿ ಎಂದು ಹೇಳಿ, ಎಲ್ಲ ಕಾರ್ಮಿಕರನ್ನು ಕಾರ್ಖಾನೆಯ ಬಸ್ ಗಳನ್ನು ತರಿಸಿ ಕಳುಹಿಸಿಕೊಟ್ಟಿದ್ದಾರೆ.