ದಸರಾ ಆಹಾರ ಮೇಳದಲ್ಲಿ ನೀರೂರಿಸಲಿದೆ ಬಂಬೂ ಬಿರಿಯಾನಿ
ಮೈಸೂರು, ಸೆಪ್ಟೆಂಬರ್ 21: ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕಳೆದ ವರ್ಷ ಸರಳವಾಗಿ ದಸರಾ ಆಚರಿಸಲಾಗಿತ್ತು. ಹೀಗಾಗಿ ಆಹಾರಮೇಳವನ್ನು ಕೈಬಿಡಲಾಗಿತ್ತು.
ಈ ಬಾರಿ ದಸರಾವನ್ನು ಮಿತ-ಹಿತವಾಗಿ ಆಚರಿಸುವ ನಿರ್ಧಾರ ಮಾಡಲಾಗಿದೆ. ಹೀಗಾಗಿ ಆಹಾರಮೇಳವನ್ನು ವಿಶಿಷ್ಟ, ವಿಭಿನ್ನ ರೀತಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಅಕ್ಟೋಬರ್ 1 ರಿಂದ ಒಂಬತ್ತು ದಿನ ಕಾಲ ಆಹಾರ ಮೇಳ ನಗರದ ಸ್ಕೌಟ್ ಅಂಡ್ ಗೈಡ್ಸ್ ಮೈದಾನದಲ್ಲಿ ನಡೆಸಲಾಗುತ್ತಿದೆ.[ಶಬ್ದಕ್ಕೆ ಬೆಚ್ಚದಂತೆ ಗಜಪಡೆಗಳಿಗೆ ಸಿಡಿಮದ್ದಿನ ತಾಲೀಮು]
ಆಹಾರಮೇಳದಲ್ಲಿ ಬಂಬೂ ಬಿರಿಯಾನಿ, ಗೆಡ್ಡೆ ಗೆಣಸು-ಜೇನುತುಪ್ಪ ಜತೆಗೆ ಬಿದಿರಕ್ಕಿ ಪಾಯಸದಂತಹ 16 ವೆರೈಟಿಯ ಆದಿವಾಸಿಗಳ ಸ್ಪೆಷಲ್ ತಿನಿಸುಗಳನ್ನು ಬೋಜನಪ್ರಿಯರಿಗೆ ಉಣಬಡಿಸಲಾಗುತ್ತಿದೆ.
ಇದಕ್ಕಾಗಿ ರಾಜ್ಯ ಆದಿವಾಸಿ ಬುಡಕಟ್ಟು ಪರಿಷತ್ತು ಹಾಗೂ ಕರ್ನಾಟಕ ರಾಜ್ಯ ಆದಿವಾಸಿ ಅದ್ಯಯನ ಕೇಂದ್ರ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ಸಂಪ್ರದಾಯದಂತೆ ಆಹಾರ ಮೇಳ ನಡೆಯುವ ಸ್ಕೌಟ್ ಅಂಡ್ ಗೈಡ್ಸ್ ಮೈದಾನದಲ್ಲಿ ಬಿದಿರಿನ ಬೊಂಬಿಗೆ ಜಿಲ್ಲಾಧಿಕಾರಿ ರಂದೀಪ್ ಅವರು ಪೂಜೆ ನೆರವೇರಿಸುವ ಮೂಲಕ ಬುಡಕಟ್ಟು ಆಹಾರದ ಸಿದ್ಧತೆಗೆ ಚಾಲನೆ ನೀಡಿದ್ದಾರೆ.[ಅದ್ದೂರಿಯಾಗಿ ಮೈಸೂರು ದಸರಾ ಆಚರಣೆ ಇಲ್ಲ]
ಬುಡಕಟ್ಟು ಜನಾಂಗಕ್ಕೆ ಬಿದಿರೇ ದೈವ. ಹಾಗಾಗಿ ಬಿದಿರಿನ ಚಪ್ಪರದೊಳಗೆ ಅಡುಗೆ ತಯಾರಾಗಲಿದೆ. ಬೊಂಬು ಬಿರಿಯಾನಿ, ಗೆಣಸು, ಜೇನುತುಪ್ಪ, ಬಿದಿರಕ್ಕಿ ಪಾಯಸ, ನಳ್ಳಿ ಸಾರು, ಕಾಡುಸೊಪ್ಪು, ಕರಳೇ ಪಲ್ಯ, ಮುದ್ದೆ ಉಪ್ಸಾರು, ರಾಗಿಮುದ್ದೆ, ಹುರಳಿಕಟ್ಟು ಸೇರಿದಂತೆ ಸುಮಾರು 16 ಬಗೆಯ ಆದಿವಾಸಿ ಸಂಪ್ರದಾಯದ ರುಚಿಕರ ಹಾಗೂ ನೈಸರ್ಗಿಕ ತಿನಿಸುಗಳು ಮೆನುವಾಗಿದೆ.
2 ಒಲೆಯಲ್ಲಿ ಒಮ್ಮೆಗೆ 10 ಪ್ಲೇಟ್ ಬಿರಿಯಾನಿ ತಯಾರು ಮಾಡಲಾಗುವುದು. ನಾಗರಹೊಳೆ ಹಾಗೂ ಕೇರಳದಿಂದ ಬಿದಿರಿನ ಅಕ್ಕಿಯನ್ನು ತಂದು, ಬಿದಿರಿನಲ್ಲಿ ಹಾಕಲಾಗುವುದು. ಜತೆಗೆ ಬೇಯಿಸಿಕೊಂಡ ಮಾಂಸ ಹಾಗೂ ಮಸಾಲೆಗಳೆಲ್ಲವನ್ನೂ ಕೊರೆದ ಬಿದಿರಿಗೆ ತುಂಬಿ ಅದನ್ನು ಮುಚ್ಚಿ ನಿಲ್ಲಿಸಿ ಅದನ್ನು ಬೆಂಕಿ ಹಾಕಿ ಬೇಯಿಸಲಾಗುವುದು.[ಸಂಗೀತಗಾರರ ಗಾಡಿ ಎಳೆಯುವ ಅಭಿಮನ್ಯು!]
ಸುಮಾರು ಅರ್ಧ ತಾಸು ಬೆಂದ ಬಿದಿರನ್ನು ಹೊರಗೆ ತೆಗೆಯಲಾಗುತ್ತದೆ. ಅದರೊಳಗೆ ಎಲ್ಲವೂ ಬೆಂದಿರುತ್ತದೆ ಅದೇ ಬಿರಿಯಾನಿ. ಇದೇ ರೀತಿ ಎಲ್ಲವನ್ನೂ ಬಿದಿರಿನಲ್ಲೇ ಬೇಯಿಸುವುದು ಆದಿವಾಸಿಗಳ ಅಡುಗೆಯ ಸ್ಪೆಷಾಲಿಟಿಯಾಗಿದೆ. ಈ ಬಾರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿ, ಮುಂಚಿತವಾಗಿ ಹೆಚ್ಚಿನ ಬಿದಿರನ್ನು ತರಿಸಿಕೊಳ್ಳಲಾಗಿದೆ.
93 ಮಳಿಗೆ ನಿರ್ಮಾಣ: ಆಹಾರ ಮೇಳ ಕುರಿತಂತೆ ಮಾಹಿತಿ ನೀಡಿದ ಆಹಾರ ಇಲಾಖೆ ಉಪನಿರ್ದೇಶಕ ಕಾ.ರಾಮಶ್ವೇರಪ್ಪ, ಈ ಬಾರಿ 95 ಮಳಿಗೆ ನಿರ್ಮಿಸಲು ಉದ್ದೇಶಿಸಲಾಗಿದೆ. ಜಾನಪದದಿಂದ ಆಧುನಿಕ ತಿನಿಸುಗಳವರೆಗೆ ಆಹಾರಮೇಳದಲ್ಲಿ ಸವಿಯಬಹುದಾಗಿದೆ ಎಂದು ಹೇಳಿದರು.