ಬಳ್ಳೆ ಸಾಕಾನೆ ಶಿಬಿರಕ್ಕೆ ಬರಲಿರುವ ಅತಿಥಿ ಯಾರು?
ಮೈಸೂರು, ಜನವರಿ 11: ಹೆಚ್. ಡಿ. ಕೋಟೆಯ ಬಳ್ಳೆ ಸಾಕಾನೆ ಶಿಬಿರದಲ್ಲಿ ಸಂಭ್ರಮ ಮನೆ ಮಾಡಿದೆ. ಕಾರಣ ಇಲ್ಲಿಗೊಬ್ಬ ಅತಿಥಿಯ ಆಗಮನದ ನಿರೀಕ್ಷೆಯಲ್ಲಿ ಇಲ್ಲಿನ ಜನರಿದ್ದಾರೆ. ಹಾಗಾದರೆ ಆ ಅತಿಥಿ ಯಾರಾಗಿರಬಹುದು? ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.
ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತು ಗಜ ಗಾಂಭೀರ್ಯದ ಹೆಜ್ಜೆ ಹಾಕುತ್ತಿದ್ದ ಅರ್ಜುನನ ನೆನಪು ಎಲ್ಲರಿಗೂ ಇದ್ದೇ ಇರುತ್ತದೆ. ಇದೀಗ ಈ ಅರ್ಜುನ ಅಪ್ಪನಾಗುವ ಮೂಲಕ ಉತ್ತಾಧಿಕಾರಿಯ ಆಗಮನವಾಗುತ್ತಿದೆ.
ಮೈಸೂರಲ್ಲಿ ಆನೆ ಕಾರಿಡಾರ್ ಕಂಬಿಗಳ ಕಳ್ಳ ಸಾಗಣೆ!
ಹೀಗಾಗಿಯೇ ಸಾಕಾನೆ ಶಿಬಿರದಲ್ಲೊಂದು ರೀತಿಯ ಖುಷಿ, ಸಂತಸ, ಕಾತರ ಎಲ್ಲವೂ ಮನೆ ಮಾಡಿದೆ. ಬಳ್ಳೆ ಆನೆ ಶಿಬಿರದಲ್ಲಿರುವ ದುರ್ಗಾಪರಮೇಶ್ವರಿ ಎಂಬ ಹೆಣ್ಣಾನೆ ಗರ್ಭಿಣಿಯಾಗಿದ್ದು, ಹುಟ್ಟಲಿರುವ ಮರಿಗೆ 60ರ ಅರ್ಜುನನೇ ಅಪ್ಪನಾಗಿರುವುದು ವಿಶೇಷ.
ಹೆದ್ದಾರಿಯಲ್ಲಿ 'ದರೋಡೆ' ಮಾಡಿದ ಆನೆ: ವೈರಲ್ ವಿಡಿಯೋ
ಇದೀಗ ದುರ್ಗಾಪರಮೇಶ್ವರಿ ಹನ್ನೊಂದು ತಿಂಗಳ ಗರ್ಭಿಣಿಯಾಗಿದ್ದು ಇನ್ನು ಮರಿ ಹಾಕಲು ಏಳೆಂಟು ತಿಂಗಳ ಕಾಲ ಕಾಯ ಬೇಕಾಗಿದೆ. ಹೀಗಾಗಿ ಆನೆ ಶಿಬಿರದಲ್ಲಿ ತಾಯಿಯಾಗಲಿರುವ ದುರ್ಗಾಪರಮೇಶ್ವರಿಯನ್ನು ಜತನದಿಂದ ನೋಡಿಕೊಳ್ಳಲಾಗುತ್ತಿದೆ.
ದಸರಾ; ಆನೆ ಘೀಳಿಡುವ ಶಬ್ದಕ್ಕೆ ಬೆದರಿದ ಪಲ್ಲಕ್ಕಿ ಎತ್ತುಗಳು
ಅರ್ಜುನನ ಉತ್ತರಾಧಿಕಾರಿ
ದುರ್ಗಾಪರಮೇಶ್ವರಿ ಆನೆ ಅರ್ಜುನನ ಪಕ್ಕದಲ್ಲಿಯೇ ಇದೆ. ಈಕೆಗೆ ಎಲ್ಲಾ ರೀತಿಯ ಆಹಾರ ಪದಾರ್ಥಗಳನ್ನು ಒದಗಿಸಲಾಗುತ್ತಿದ್ದು, ಮರಿಯೂ ಅರ್ಜುನನಂತೆ ದಷ್ಠಪುಷ್ಠವಾಗಿ ಹುಟ್ಟಲಿ ಎಂಬ ಆಶಯ ಇಲ್ಲಿನ ಮಾವುತ ಮತ್ತು ಕಾವಡಿಗಳದ್ದಾಗಿದೆ.
ದಶಕಗಳ ಕಾಲ ಅಂಬಾರಿ ಹೊತ್ತ ಅರ್ಜುನ
ದಶಕಗಳ ಕಾಲ ಮೈಸೂರು ದಸರಾದಲ್ಲಿ ಅಂಬಾರಿ ಹೊರುವ ಮೂಲಕ ಜಂಬೂಸವಾರಿಗೆ ಕಳೆ ಕಟ್ಟಿಕೊಂಡು ಬಂದಿದ್ದ ಅರ್ಜುನನಿಗೆ ಕಳೆದ ವರ್ಷ ವಿಶ್ರಾಂತಿ ನೀಡಲಾಗಿತ್ತು. ಕೋವಿಡ್ ಹಿನ್ನಲೆಯಲ್ಲಿ ಸರಳವಾಗಿ ದಸರಾ ನಡೆದಿದ್ದರಿಂದ ಅರ್ಜುನನ ಜವಾಬ್ದಾರಿಯನ್ನು ಅಭಿಮನ್ಯು ಯಶಸ್ವಿಯಾಗಿ ನಿರ್ವಹಿಸಿದ್ದನು. ಅರ್ಜುನ ಬಳ್ಳೆ ಶಿಬಿರದಲ್ಲಿಯೇ ಉಳಿದಿದ್ದು, ದಸರಾ ಸಂಭ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಇದೀಗ ಅರ್ಜುನ ಅಪ್ಪನಾಗುತ್ತಿರುವ ಸುದ್ದಿ ಹೊರ ಬಂದಿದ್ದು ಎಲ್ಲರೂ ಸಂಭ್ರಮ ಪಡುವಂತಾಗಿದೆ.
ಹುಟ್ಟಲಿರುವ ಮರಿ ಗಂಡೋ? ಹೆಣ್ಣೋ?
ಅರ್ಜುನ ಬಳ್ಳೆ ಆನೆ ಶಿಬಿರದ ಪ್ರಮುಖ ಆಕರ್ಷಣೆಯಾಗಿದೆ. ಮಾವುತ, ಕಾವಾಡಿಗಳ ಕುಟುಂಬಗಳ ಮಧ್ಯೆ ಹೊಂದಿಕೊಂಡು ಹೋಗುತ್ತಿದ್ದಾನೆ. ಹುಲಿ ಕಾರ್ಯಾಚರಣೆ, ಕಾಡಾನೆಗಳನ್ನು ಕಾಡಿಗೆ ಅಟ್ಟಲು ಹೀಗೆ ಹಲವು ಕಾರ್ಯಗಳಿಗೆ ಈತನನ್ನು ಬಳಸಲಾಗುತ್ತಿದೆ. ಇದೀಗ 60 ವರ್ಷವಾಗಿದ್ದರೂ ಇನ್ನೂ ಅದೇ ಗಾಂಭೀರ್ಯದಲ್ಲಿರುವ ಈತನ ಉತ್ತರಾಧಿಕಾರಿಯತ್ತ ಎಲ್ಲರ ಚಿತ್ತ ನೆಟ್ಟಿದೆ. ಹುಟ್ಟಲಿರುವ ಮರಿ ಗಂಡೋ ಅಥವಾ ಹೆಣ್ಣೋ ಎಂಬ ಚರ್ಚೆಯೂ ನಡೆಯುತ್ತಿದೆ. ಆದರೆ, ಇದ್ಯಾವುದರ ಪರಿವೇ ಇಲ್ಲದೆ ಅರ್ಜುನ ಮತ್ತು ದುರ್ಗಾಪರಮೇಶ್ವರಿ ಆನೆಗಳು ಶಿಬಿರದಲ್ಲಿ ಮಾವುತರು ಮತ್ತು ಕಾವಾಡಿಗಳು ನೀಡುತ್ತಿರುವ ಆಹಾರನ್ನು ಸೇವಿಸುತ್ತಾ ಆರಾಮಾಗಿ ಇವೆ.
ದುರ್ಗಾಪರಮೇಶ್ವರಿಗೆ ಸುಖಪ್ರಸವವಾಗಲಿ
ಸಾಕಾನೆ ಶಿಬಿರಗಳಲ್ಲಿ ಆನೆಮರಿಗಳು ಹುಟ್ಟುವುದು ಮಾಮೂಲಿಯೇ ಅದರಲ್ಲೇನು ವಿಶೇಷತೆಗಳಿರುವುದಿಲ್ಲ. ಆದರೆ, ಬಳ್ಳೆ ಶಿಬಿರದಲ್ಲಿ ಅರ್ಜುನನಿಗೆ ಮರಿ ಹುಟ್ಟುತ್ತಿದೆ ಎನ್ನುವುದಷ್ಟೆ ವಿಶೇಷವಾಗಿದೆ. ಇನ್ನು ಮುಂದೆ ಹುಟ್ಟಲಿರುವ ಮರಿ ಮತ್ತು ಅದರ ತುಂಟಾಟಗಳನ್ನು ನೋಡಲು ಇಲ್ಲಿನ ಮಂದಿ ಕಾಯುತ್ತಿದ್ದಾರೆ. ದುರ್ಗಾಪರಮೇಶ್ವರಿಗೆ ಸುಖಪ್ರಸವವಾಗಲಿ ಎಂಬುದಷ್ಟೆ ಹಾರೈಕೆ.