ಆರು ದಿನಗಳ ಬಹುರೂಪಿ ನಾಟಕೋತ್ಸವಕ್ಕೆ ಸಂಭ್ರಮದ ತೆರೆ
ಮೈಸೂರು, ಫೆಬ್ರವರಿ 20: ಸಾಂಸ್ಕೃತಿಕ ನಗರಿ ಮೈಸೂರಿನ ರಂಗಾಸಕ್ತರಿಗೆ ಭರಪೂರ ಮನರಂಜನೆ ನೀಡುವ ಮೂಲಕ ಎಲ್ಲರ ಮನತಣಿಸಿದ ರಂಗಾಯಣದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಬುಧವಾರ ಸಂಭ್ರಮದ ತೆರೆ ಬಿದ್ದಿತು.
ಮಹಾತ್ಮ ಗಾಂಧೀಜಿ ಅವರ 150ನೇ ವರ್ಷಾಚರಣೆ ಅಂಗವಾಗಿ 'ಗಾಂಧಿ ಪಥ' ಆಶಯದೊಂದಿಗೆ ಕಳೆದ ಆರು ದಿನಗಳ ಕಾಲ ನಡೆದ ಬಹುರೂಪಿ ನಾಟಕೋತ್ಸವ ನಾಟಕ, ಚಲನಚಿತ್ರೋತ್ಸವ, ಕರಕುಶಲ ವಸ್ತುಪ್ರದರ್ಶನ, ಪುಸ್ತಕ ಪ್ರದರ್ಶನ, ಗಾಂಧಿ ಜೀವನಪಥದ ಛಾಯಾಚಿತ್ರಗಳ ಪ್ರದರ್ಶನ, ಕಾವ್ಯ ವಾಚನ, ಗಾಂಧಿ ಲಾವಣಿ, ಬೀದಿ ನಾಟಕ ಹಾಗೂ ರಾಷ್ಟ್ರೀಯ ವಿಚಾರ ಸಂಕಿರಣದ ಮೂಲಕ ಎಲ್ಲರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು.
ಕೊನೆ ದಿನವೂ ಜನಜಾತ್ರೆ
ಕಳೆದ ಆರು ದಿನಗಳಿಂದ ರಂಗಾಸಕ್ತರು, ಸಿನಿಮಾ ಪ್ರಿಯರು ಸೇರಿದಂತೆ ಎಲ್ಲರನ್ನೂ ತನ್ನತ್ತ ಆಕರ್ಷಿಸಿದ್ದ ಬಹುರೂಪಿ ನಾಟಕೋತ್ಸವದ ಕಡೆ ದಿನವಾದ ಬುಧವಾರವೂ ರಂಗಾಯಣದ ಅಂಗಳದಲ್ಲಿ ಜನ ಜಾತ್ರೆ ಹರಿದು ಬಂದಿತ್ತು. ಅಂತಿಮ ದಿನದಂದು ನಡೆದ ಕಾರ್ಯಕ್ರಮಗಳು ನೋಡುಗರನ್ನು ಪುಳಕಿತರನ್ನಾಗಿಸಿತು. ಮಧ್ಯಾಹ್ನದವರೆಗೂ ಬಿಕೋ ಎನ್ನುತ್ತಿದ್ದ ರಂಗಾಯಣಕ್ಕೆ ಸಂಜೆಯಾಗುತ್ತಲೇ ಜನಜಾತ್ರೆಯೇ ಹರಿದುಬಂತು.
ಮೈಸೂರು "ಬಹುರೂಪಿ"ಯಲ್ಲಿ ಡೈಲಾಗ್ ಹೇಳಿ ರಂಜಿಸಿದ ನಟ ಅನಂತನಾಗ್
ಕಾರ್ಯಕ್ರಮಗಳ ಮೆರಗು
ರಂಗಾಯಣದಲ್ಲಿ ಸಂಜೆ ನಡೆದ ಜಾನಪದೋತ್ಸವ, ನಾಟಕಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕಿಂದರಿಜೋಗಿ ಆವರಣದಲ್ಲಿ ನಡೆದ ದಕ್ಷಿಣ ಮಧ್ಯವಲಯ ಸಾಂಸ್ಕೃತಿಕ ಕೇಂದ್ರದ ನೃತ್ಯ, ಸಾಗರದ ನೇತ್ರಾವತಿ ಮತ್ತು ತಂಡದ ಮಹಿಳಾ ಡೊಳ್ಳು ಕುಣಿತ ಹಾಗೂ ಕುಂದಗೋಳದ ಎಸ್.ಜೆ.ಹೂಗಾರ್ ಮತ್ತು ತಂಡ ಮಲ್ಲಕಂಬ ಪ್ರದರ್ಶನ ನೋಡುಗರಿಗೆ ಭರ್ಜರಿ ಮನರಂಜನೆ ನೀಡಿತು.
ನಾಟಕಗಳ ಆಕರ್ಷಣೆ
ಬಹುರೂಪಿಯ ಕೊನೆಯ ದಿನದಂದು ಪ್ರದರ್ಶನಗೊಂಡ ಹಲವು ನಾಟಕಗಳು ಪ್ರೇಕ್ಷಕರನ್ನು ತನ್ನತ್ತ ಸೆಳೆಯಿತು. ಬಹರುಲ್ ಇಸ್ಲಾಮ್ ನಿರ್ದೇಶನದ ಅಸ್ಸಾಮಿ ಭಾಷೆಯ ಸ್ವಭಾತ್ಜತ, ಶರಣ್ಯಾ ರಾಮ್ ಪ್ರಕಾಶ್ ನಿರ್ದೇಶನ ಕನ್ನಡದ ‘ಅಕ್ಷಯಾಂಬರ', ಗಣೇಶ್ ಮಂದಾರ್ತಿ ನಿರ್ದೇಶನದ ಕನ್ನಡದ 'ಕಾಮ್ಯಕಲಾ ಪ್ರತಿಮಾ', ಎಸ್.ಆರ್.ರಮೇಶ್ ನಿರ್ದೇಶನದ ಕನ್ನಡದ ‘ಮಹಾತ್ಮ' ನಾಟಕಗಳು ರಂಗಾಸಕ್ತರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಅದರಲ್ಲೂ ಕಲಾಮಂದಿರದಲ್ಲಿ ಪ್ರದರ್ಶನಗೊಂಡ ‘ಮಹಾತ್ಮ' ಹಾಗೂ ವನರಂಗದಲ್ಲಿ ಪ್ರದರ್ಶನಗೊಂಡ ಕಾಮ್ಯಕಲಾ ಪ್ರತಿಮಾ ನಾಟಕ ನೋಡಲು ರಂಗಾಸಕ್ತರು ಮುಗಿಬಿದ್ದರು.
ರಂಗಭೂಮಿ, ಕನ್ನಡ ಭಾಷೆ, ರಾಜಕಾರಣ... ಮುಖ್ಯಮಂತ್ರಿ ಚಂದ್ರು ಮಾತುಗಳು
ಸಿನಿಪ್ರಿಯರು ಫುಲ್ ಖುಷ್
ಬಹುರೂಪಿ ನಾಟಕೋತ್ಸವದ ಅಂಗವಾಗಿ ನಡೆದ ಚಲನಚಿತ್ರೋತ್ಸವಕ್ಕೂ ಕೊನೆ ದಿನದಂದು ಪ್ರೇಕ್ಷಕರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಶ್ರೀರಂಗ ವೇದಿಕೆಯಲ್ಲಿ ಅಂತಿಮ ದಿನದಂದು ಎ ಫೋರ್ಸ್ ಮೋರ್ ಪವರ್ಫುಲ್; ಎ ಸೆಂಚುರಿ ಆಫ್ ನಾನ್ವಯಲೆಂಟ್ ಕಾನ್ಪ್ಲಿಕಟ್-1', ‘ಎ ಫೋರ್ಸ್ ಮೋರ್ ಪವರ್ಫುಲ್; ಎ ಸೆಂಚುರಿ ಆಫ್ ನಾನ್ವಯಲೆಂಟ್ ಕಾನ್ಪ್ಲಿಕಟ್-2', ‘ಸತ್ಯ ಹರಿಶ್ಚಂದ್ರ' ಸಿನಿಮಾ ವೀಕ್ಷಿಸಿದ ಪ್ರೇಕಕರು ಫುಲ್ ಖುಷ್ ಆದರು.
ಉಳಿದಂತೆ ಕರಕುಶಲ ವಸ್ತುಗಳ ಮೇಳ, ಆಹಾರ, ತಿನಿಸು, ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕೂ ಉತ್ತಮ ಪ್ರೋತ್ಸಾಹ ದೊರೆಯಿತು. ನಾಟಕೋತ್ಸವಕ್ಕಾಗಿ ದೇಶದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಕ್ಕೂ ಹೆಚ್ಚಿನ ಕಲಾವಿದರು ತಮ್ಮ ಕಲಾ ಶ್ರೀಮಂತಿಕೆ ಪ್ರದರ್ಶಿಸಿದರು. ಒಂದು ವಾರದ ಅವಧಿಯಲ್ಲಿ 10 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಬಹುರೂಪಿಯ ಸಂಭ್ರಮದಲ್ಲಿ ಭಾಗಿಯಾದರು.
ನಿರ್ದೇಶಕರ ವಿರುದ್ಧ ಪ್ರತಿಭಟನೆ
ಬಹುರೂಪಿ ನಾಟಕೋತ್ಸವದ ಸಂಭ್ರಮಕ್ಕೆ ಕೊನೆಯ ದಿನದಂದು ಪ್ರತಿಭಟನೆಯ ಕೂಗು ಕೆಲಕಾಲ ಅಡ್ಡಿಯಾಯಿತು. ಪ್ರಗತಿಪರರು, ಚಿಂತಕರು, ಸಾಹಿತಿಗಳು ಬುಧವಾರ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ವಿರುದ್ಧ ರಂಗಾಯಣದ ಅಂಗಳದಲ್ಲೇ ಪ್ರತಿಭಟನೆ ನಡೆಸಿದ್ದು, ಉತ್ಸವದ ಸಂಭ್ರಮಕ್ಕೆ ಕಪ್ಪುಚುಕ್ಕೆಯಾಗಿ ಕಾಣಿಸಿತು. ರಂಗಾಯಣ ಮಾಜಿ ನಿರ್ದೇಶಕ ಎಚ್.ಜನಾರ್ದನ್ ಹಾಗೂ ಟಿಪ್ಪು ಸುಲ್ತಾನ್ ಬಗ್ಗೆ ಅಡ್ಡಂಡ ಸಿ.ಕಾರ್ಯಪ್ಪ ಅವರು ವೈಯಕ್ತಿಕವಾಗಿ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಅಡ್ಡಂಡ ಕಾರ್ಯಪ್ಪ ಅವರನ್ನು ನಿರ್ದೇಶಕ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ, ಕೆಲ ಕಾಲ ಪ್ರತಿಭಟನೆ ನಡೆಸಿದರು.