ಮೈಸೂರು; ತಾಯಿಯ ಮಹತ್ವ ಸಾರಲಿದೆ ಬಹುರೂಪಿ ರಂಗೋತ್ಸವ
ಮೈಸೂರು, ಫೆಬ್ರವರಿ 16; ಕೊರೊನಾ ಮಹಾಮಾರಿಯ ಹಾವಳಿ, ಅತಿಥಿಗಳ ಆಯ್ಕೆಯಲ್ಲಿ ವಿವಾದ, ಹೋರಾಟ, ಪ್ರತಿಭಟನೆ ಹೀಗೆ ಒಂದಷ್ಟು ವೈರುದ್ಧಗಳ ನಡುವೆಯೂ, ಕೊರೊನಾ ಅಬ್ಬರ ಕಡಿಮೆಯಾಗಿ, ಕೋವಿಡ್ ನಿರ್ಬಂಧಗಳು ತೆರವಾಗಿ, ಎಲ್ಲೆಡೆ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ಈ ಬಾರಿಯ ಬಹುರೂಪಿ ರಂಗೋತ್ಸವವೂ ನಡೆಯುತ್ತಿರುವುದು ಕಲಾಪ್ರೇಮಿಗಳಲ್ಲಿ ಸಂತಸವನ್ನುಂಟು ಮಾಡಿದೆ.
ತನ್ನದೇ ಆದ ಘನತೆ, ಗೌರವದೊಂದಿಗೆ ಕಲಾವಿದರಿಗೆ ಬದುಕು ಕಟ್ಟಿಕೊಟ್ಟಿದ್ದ ರಂಗಾಯಣ ಕೆಲವು ಸಮಯಗಳ ಹಿಂದೆ ಹೋರಾಟದ ವೇದಿಕೆಯಾಗಿ ರೂಪುಗೊಂಡಿತ್ತು. ಎಡ, ಬಲ ಪಂಥದ ನಡುವೆ ಹೋರಾಟಗಳು ಆರಂಭವಾಗಿತ್ತು. ಇದೀಗ ಎಲ್ಲವೂ ತಣ್ಣಾಗಿದೆ. ಎಂದಿನಂತೆ ಈ ಬಾರಿಯೂ ನಾಟಕೋತ್ಸವ ನಡೆಯುವುದರೊಂದಿಗೆ ವೀಕ್ಷಕರಿಗೆ ರಸದೌತಣ ನೀಡಲು ಸಿದ್ಧತೆ ಆರಂಭವಾಗಿದೆ.
ಮೈಸೂರಿನಲ್ಲಿ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಪರ- ವಿರುದ್ಧ ಪ್ರತಿಭಟನೆ
ಮಾರ್ಚ್ 11ರಿಂದ ಆರಂಭವಾಗಿ ಮಾರ್ಚ್ 20ರವರೆಗೆ ಸುಮಾರು 9 ದಿನಗಳ ಕಾಲ ನಾಟಕೋತ್ಸವ ನಡೆಯಲಿದೆ. ಈ ಬಾರಿ ತಾಯಿ ವಸ್ತುವಿಷಯಾಧಾರಿತವಾಗಿ ನಾಟಕೋತ್ಸವ ನಡೆಯುತ್ತಿರುವುದು ವಿಶೇಷವಾಗಿದೆ. ಜತೆಗೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಬದಲಾಗಿ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಎಂದು ಹೆಸರು ಬದಲಾಯಿಸಲಾಗಿದೆ.
ನಿರಂತರ ರಂಗ ಚಟುವಟಿಕೆಯಲ್ಲಿ ಮೈಸೂರು ರಂಗಾಯಣ
ಈ ಬಾರಿ ತಾಯಿ ಪರಿಕಲ್ಪನೆ ಅಡಿ ನಾಟಕಗಳು, ಜಾನಪದ ನೃತ್ಯ, ಸಂಗೀತ, ಭಿತ್ತಿಚಿತ್ರ ಪ್ರದರ್ಶನ, ಸಿನಿಮಾ ಸೇರಿದಂತೆ ರಂಗೋತ್ಸವವನ್ನು ರೂಪಿಸಲಾಗುತ್ತಿರುವುದು ಗಮನಾರ್ಹವಾಗಿದೆ. ಮಾರ್ಚ್ 11ರಂದು ಸಂಜೆ 5.30ಕ್ಕೆ ವನರಂಗದಲ್ಲಿ ನಾಟಕೋತ್ಸವ ಆರಂಭವಾಗುತ್ತಿದ್ದು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ತುಳಸಿಗೌಡ ಚಾಲನೆ ನೀಡಲಿದ್ದಾರೆ.
ಉಡುಪಿಯಲ್ಲಿ 7 ಕೋಟಿ ವೆಚ್ಚದಲ್ಲಿ ರಂಗಾಯಣ ಕಟ್ಟಡ ನಿರ್ಮಾಣ
ಈ ಬಾರಿ 35 ನಾಟಕಗಳನ್ನು ಆಯ್ಕೆ ಮಾಡಿದ್ದು, ತಮಿಳು, ರಾಜಸ್ಥಾನಿ, ಒರಿಯಾ, ಮಲಯಾಳಂ, ತುಳು, ತೆಲುಗು ಸೇರಿದಂತೆ 12 ಭಾಷೆಯ ನಾಟಕಗಳು ಪ್ರದರ್ಶನವಾಗಲಿವೆ. ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ನಾಟಕಗಳೂ ಇವೆ. ಇದರೊಂದಿಗೆ 20 ಕನ್ನಡ ನಾಟಕಗಳು ಇರಲಿವೆ. ವೃತ್ತಿ ಕಂಪನಿ ನಾಟಕ, ಪೌರಾಣಿಕ ನಾಟಕಕ್ಕೂ ಅವಕಾಶ ನೀಡಲಾಗಿದೆ. ಬಯಲಾಟ, ಯಕ್ಷಗಾನ, ದೊಡ್ಡಾಟ, ಗೊಂಬೆಯಾಟಕ್ಕೂ ವೇದಿಕೆ ಕಲ್ಪಿಸಲಾಗಿದೆ.
ಜಾನಪದ ಕಲಾ ಪ್ರದರ್ಶನಕ್ಕೂ ಅವಕಾಶ; ವಿವಿಧ ಜಾನಪದ ಕಲೆಗಳ ಪ್ರದರ್ಶನ ನಡೆಯಲಿದ್ದು, ಜೋಗತಿ ನೃತ್ಯ, ಮಲ್ಲಕಂಬ, ಸಿದ್ಧಿ ಕುಣಿತ, ಲಂಬಾಣಿ ನೃತ್ಯ, ಚಂಡೆ ಮೇಳ, ಗೊಂಬೆ ಗಾರುಡಿಗ ಇನ್ನಿತರ ಪ್ರಕಾರದ ಕಲೆಗಳ ಪ್ರದರ್ಶನ ಇರಲಿದೆ. ಇದರಲ್ಲಿ ಶೇ.50ರಷ್ಟು ಮಹಿಳೆಯರಿಗೆ ಅವಕಾಶ ನೀಡಲಾಗಿದೆ.
ಇದರೊಂದಿಗೆ ಹೊರ ರಾಜ್ಯಗಳ ಜಾನಪದ ಕಲೆಗಳಾದ ಛತ್ತೀಸ್ಘಡದ ಕಕ್ಸರ್ನೃತ್ಯ, ಮಧ್ಯಪ್ರದೇಶದ ಬಾಗೋರಿಯಾ, ಮಹಾರಾಷ್ಟ್ರದ ಢಾಂಗಾಲಿಯಾ, ಒರಿಸ್ಸಾದ ಗೋಟಿಪೂವಾ, ಮಣಿಪುರದ ಲಾಯ್ ಹರೋಬ, ಕೇರಳದ ಕಳರಿಪಯಟ್ ನೃತ್ಯ ಈ ಸಲದ ವಿಶೇಷತೆ ಎಂದರೆ ತಪ್ಪಾಗಲಾರದು.
ಇಷ್ಟೇ ಅಲ್ಲದೆ, ಮಾರ್ಚ್ 19 ಮತ್ತು 20ರಂದು ತಾಯಿ ಹೆಸರಿನಲ್ಲಿ ವಿಚಾರ ಸಂಕಿರಣ ನಡೆಯಲಿದೆ. ಬಿ. ವಿ. ಕಾರಂತ ರಂಗಚಾವಡಿಯಲ್ಲಿ ನಿತ್ಯ ಸಂಜೆ 4ರಿಂದ 5ರ ವರೆಗೆ ವಿವಿಧ ಕಾರ್ಯಕ್ರಮಗಳು ನಡೆಯುವುದರೊಂದಿಗೆ ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ಮಾತೃ ದೇವೋಭವ ಕುರಿತು ಪ್ರೊ. ಕೃಷ್ಣೇಗೌಡ, ಕನ್ನಡ ಕಾವ್ಯಗಳಲ್ಲಿ ತಾಯಿ ಕುರಿತು ಹಿರೇಮಗಳೂರು ಕಣ್ಣನ್ ಮತ್ತು ತಾಯಿ ಮತ್ತು ತಾಯ್ತನದ ಬಗ್ಗೆ ಚಕ್ರವತಿ ಸೂಲಿಬೆಲೆ ವಿಚಾರ ಮಂಡಿಸಲಿದ್ದಾರೆ.
ಸಿನಿಮಾ ಪ್ರದರ್ಶನ; ಚಲನಚಿತ್ರೋತ್ಸವದಲ್ಲಿ ತಾಯಿ ಪರಿಕಲ್ಪನೆಯ 2 ಕನ್ನಡ ಚಿತ್ರಗಳು ಸೇರಿದಂತೆ 25 ಸಿನಿಮಾಗಳು ಪ್ರದರ್ಶನವಾಗಲಿದ್ದು, ದಿವಂಗತ ಪುನೀತ್ ರಾಜ್ಕುಮಾರ್ ಅಭಿಯನದ 'ರಾಜ್ಕುಮಾರ್' ಮತ್ತು ಡಾ. ರಾಜ್ಕುಮಾರ್ ನಟಿಸಿರುವ 'ಬಬ್ರುವಾಹನ' ಚಿತ್ರವೂ ಸೇರಿದೆ.
ಮಾರ್ಚ್ 1ರಿಂದ ಆನ್ಲೈನ್ನಲ್ಲಿ ನಾಟಕಗಳ ಟಿಕೆಟ್ ದೊರೆಯಲಿದ್ದು, ಟಿಕೆಟ್ ದರವನ್ನು 100 ರೂ. ನಿಗದಿ ಪಡಿಸಲಾಗಿದೆ. ಈ ಸಲ 60 ಮಳಿಗೆಗಳು ಇರಲಿವೆ. ಆಹಾರ, ಕರಕುಶಲ ಮತ್ತು ಪುಸ್ತಕ ಮಳಿಗೆಗಳು ರಂಗಾಯಣದ ಹೊರಭಾಗದಲ್ಲಿ ಇರಲಿದ್ದು, ಒಂದೊಳ್ಳೆಯ ಕಲಾ ಜಗತ್ತು ಸೃಷ್ಟಿಯಾಗಲಿದೆ. ಒಟ್ಟಾರೆ ಈ ಬಾರಿ ಬಹುರೂಪಿ ರಂಗೋತ್ಸವ ನಡೆಯುತ್ತಿರುವುದು ಎಲ್ಲರ ಮನದಲ್ಲಿ ಹರ್ಷ ತಂದಿದೆ.