ರಂಗಾಯಣದಲ್ಲಿ ಬಹುರೂಪಿಯ ಗುಂಗಿಗೆ ಮನಸೋತ ರಂಗಾಸಕ್ತರು
ಮೈಸೂರು, ಜನವರಿ 13: ಪುರುಷರಲ್ಲಿ ಭೇದವಿಲ್ಲವೆಂಬ ನೃತ್ಯ ಪ್ರದರ್ಶನದ ಮೂಲಕ ಲಿಂಗ ಸಮಾನತೆ' ಆಶಯದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ-2019 ಅದ್ಧೂರಿಯಾಗಿ ಚಾಲನೆ ಪಡೆದುಕೊಂಡಿತು.
ಬಹುರೂಪಿ ಉದ್ಘಾಟನೆಗೆ ರಂಗಾಯಣದ ಆವರಣ ಕಲಾತ್ಮಕವಾಗಿ ಸಿಂಗಾರಗೊಂಡಿತ್ತು. ಚಂದ್ರನ ತಿಳಿ ಬೆಳಕು ವನರಂಗದ ಮೇಲೆ ಚೆಲ್ಲಿತ್ತು. ರಂಗಾಯಣದ ಪರಿಸರ, ಅಲ್ಲಿ ನೆರೆದಿದ್ದ ಮನಸ್ಸುಗಳು ಲಿಂಗ ತಾರತಮ್ಯ ಮಾಡಿಲ್ಲವೆಂಬ ಶಪಥ ಮಾಡಿದಂತಿತ್ತು. ವನರಂಗದಲ್ಲಿ ಕಿಕ್ಕಿರಿದು ತುಂಬಿದ್ದ ನೂರಾರು ರಂಗ ಪ್ರಿಯರ ಸಮ್ಮುಖದಲ್ಲಿ ಖ್ಯಾತ ರಂಗಕರ್ಮಿ ಪ್ರಸನ್ನ ಬಹುರೂಪಿಗೆ ಚಾಲನೆ ನೀಡಿದರು.
ಮೈಸೂರಿನಲ್ಲಿ ಈ ಬಾರಿ ಮೇಳೈಸಲಿದೆ ಬಹುರೂಪಿ - 2019 ರಂಗೋತ್ಸವ
ಮೈಮ್ ರಮೇಶ್ ಮತ್ತು ತಂಡ ಸ್ತ್ರೀ- ಪುರುಷರಲ್ಲಿ ಭೇದವಿಲ್ಲ ಎಂಬ ನೃತ್ಯ ಪದರ್ಶಿಸಿದರು. ತೃತೀಯ ಲಿಂಗಿಗಳು ಪ್ರಾರ್ಥನೆ ಗೀತೆ ಹಾಡಿದ್ದು ಅರ್ಥಪೂರ್ಣವಾಗಿತ್ತು. ಬಳಿಕ ಮಾತನಾಡಿದ ಪ್ರಸನ್ನ ಅವರು, ನಮ್ಮ ವಚನಕಾರರು, ಸಂತರಾದ ಕಬೀರ ಮಗ್ಗದಲ್ಲಿ ನೇಯುತ್ತ, ರವಿದಾಸ ಚಪ್ಪಲಿ ಹೊಲೆಯುತ್ತ ಧರ್ಮ ಪ್ರಸಾರ ಮಾಡಿದರು. ವೈದಿಕತೆಯಲ್ಲಿ ಸಿಲುಕಿರುವ ದೇವರನ್ನು ಎಳೆದು ತಂದು ಶೂದ್ರ ಪರಂಪರೆಗೆ ಸೇರಿಸಬೇಕು ಎಂದು ನುಡಿದರು.
ಮಾನವ ಸಭ್ಯತೆ ಸಂಕಟದಲ್ಲಿದೆ. ಅದನ್ನು ಎಲ್ಲರೂ ಅನುಭವಿಸುತ್ತಿದ್ದೇವೆ. ವಿಜ್ಞಾನಿಗಳು, ತತ್ವಜ್ಞಾನಿಗಳು ಮಾನವ ಸಭ್ಯತೆ ಉಳಿಯುತ್ತೋ ಇಲ್ಲವೋ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ವಿಜ್ಞಾನಿ ಸ್ಟೀಫನ್ ಹಾಕಿಂಗ್ ಮಾನವ ಸಭ್ಯತೆ 200-300 ವರ್ಷಗಳು ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ ಎಂದರು.
ಶೂದ್ರತ್ವವನ್ನು ಸ್ವೀಕರಿಸಿ ನಾಟಕ ಆಡಬೇಕು
ರಂಗಭೂಮಿಯ ಒಳಗೆ ಬಂದರೆ ಜಾತಿ, ಧರ್ಮ ಮುಖ್ಯವಾಗುವುದಿಲ್ಲ ಎಂದ ಪ್ರಸನ್ನ ಅವರು, ಘನತೆ, ಗೌರವಗಳಿಂದ ಶೂದ್ರತ್ವವನ್ನು ಸ್ವೀಕರಿಸಿ ನಾಟಕ ಆಡಬೇಕು. ನಾಟಕ ರಚನೆಯಲ್ಲಿ ಶೂದ್ರತ್ವ ಕಾಣಿಸಬೇಕು. ಇವತ್ತಿಗೂ ಕೂಡ ರಂಗಭೂಮಿಯ ಬಹುಮುಖ್ಯ ಜವಾಬ್ದಾರಿ ಧರ್ಮ ಸಂರಕ್ಷಣೆಯೇ ಅಗಿದೆ. ಆದರೆ ಇಂದು ಧರ್ಮ ಸಂರಕ್ಷಣೆ ಎಂಬುದು ಕೇವಲ ವೈದಿಕ ಧರ್ಮ, ಜಾತಿಪದ್ಧತಿ, ಮೇಲು-ಕೀಳು, ಲಿಂಗ ಅಸಮಾನತೆಯ ಸಂರಕ್ಷಣೆ ಎಂಬ ಅರ್ಥವನ್ನು ಪಡೆದು ಕೊಂಡಿರುವುದು ವಿಪರ್ಯಾಸ. ಮಾನವನ ಸಭ್ಯತೆಗೆ ಎದುರಾಗಿರುವ ಸಂಕಟವನ್ನು ಬೊಟ್ಟು ಮಾಡಿ ತೋರಿಸಲು ಸರಳ ನಾಟಕಗಳನ್ನು ಆಡಬೇಕು. ಆದರೆ ಸಮಾಜವು ಇಂದು ಸರಳ ನಾಟಕ ಆಡುವವರನ್ನು ದರಿದ್ರರ ರೀತಿಯಲ್ಲಿ ನೋಡುತ್ತದೆ. ಹಾಗೆ ನೋಡಿದರೆ ಕುಗ್ಗದೆ, ಮತ್ತಷ್ಟು ಧೈರ್ಯದಿಂದ ನಾಟಕ ಪ್ರದರ್ಶಿಸಬೇಕಿದೆ ಎಂದು ಕಿವಿಮಾತು ಹೇಳಿದರು.
ನಾಟಕೋತ್ಸವಕ್ಕೆ ಉತ್ತಮ ಪ್ರತಿಕ್ರಿಯೆ
ಒಂದೆಡೆ ನಾಟಕ ಪ್ರದರ್ಶನ ನಡೆಯುತ್ತಿದ್ದರೆ, ಇನ್ನೊಂದೆಡೆ ಚಲನಚಿತ್ರ ಪ್ರದರ್ಶನ. ಮತ್ತೊಂದು ಕಡೆ ನೃತ್ಯದ ವೈಭವ, ಚಿತ್ರಕಲಾ ಪ್ರದರ್ಶನ ಕಂಡುಬಂತು. ಜನರು ದೇಸಿ ಸಂಸ್ಕೃತಿ ಬಿಂಬಿಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು. ಮೊದಲ ದಿನವೇ ನಾಟಕೋತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸಿತು. ನೂರಾರು ರಂಗಪ್ರೇಮಿಗಳು ಭೇಟಿ ನೀಡಿದ್ದರು. 'ಶ್ರೀರಾಮಾಯಣ ದರ್ಶನಂ' ನಾಟಕ ಪ್ರದರ್ಶನ ನಡೆದ ಕಲಾಮಂದಿರದ ಆಸನಗಳು ಭರ್ತಿಯಾಗಿದ್ದವು.
ಗುರುವಾರದಿಂದ ಮೈಸೂರಲ್ಲಿ ಬಹುರೂಪಿ ನಾಟಕೋತ್ಸವ
ಇವೆಲ್ಲವೂ ಜನರನ್ನು ಆಕರ್ಷಿಸಿದವು
ನಾಟಕೋತ್ಸವದಲ್ಲಿ ಗ್ರಾಮೀಣ ಪ್ರದೇಶದ ಯುವಕರು, ಮಹಿಳಾ ರೈತರು ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ ತಮ್ಮ ಭೂಮಿ -ಬದುಕಿನ ಅಭಿವ್ಯಕ್ತಿ ಫೋಟೋಗಳು. ಕಾರಾಗೃಹವಾಸಿಗಳು ತಯಾರಿಸಿದ ಮ್ಯಾಟ್, ಬೆಡ್ಶೀಟ್, ಹೂವಿನ ಹಾರ, ಶರ್ಟ್ ಗಳು. ಮತ್ತೊಂದೆಡೆ ನಾಲಗೆಗೆ ರುಚಿ ನೀಡುವ ನವಣೆದೋಸೆ, ಕಜ್ಜಾಯ, ನವಣೆ ಚಕ್ಕಲಿ, ದಾಳಿಂಬೆ, ಅವರೇಕಾಳು ಚುರುಮುರಿ, ಹೋಳಿಗೆ, ಜೋಳದ ರೊಟ್ಟಿಗಳು. ಮಣ್ಣಿ ನಿಂದ ತಯಾರಿಸಿದ ಮ್ಯಾಜಿಕ್ ದೀಪಗಳು. ಜ್ಞಾನ ಭಂಡಾರ, ಸಿದ್ಧ ಉಡುಪುಗಳು... ಇವೆಲ್ಲವೂ ಜನರನ್ನು ತನ್ನತ್ತ ಆಕರ್ಷಿಸುತ್ತಿವೆ.
ತಿಂಡಿ ತಿನಿಸು ಖಾದ್ಯಪ್ರಿಯರನ್ನು ಆಕರ್ಷಿಸುತ್ತಿವೆ
ಬಹುರಾಷ್ಟ್ರೀಯ ನಾಟಕೋತ್ಸವದಲ್ಲಿ ನಾಟಕಗಳಿಗಿಂತ ಹೆಚ್ಚಾಗಿ ಬಾಯಲ್ಲಿ ನೀರುಣಿಸುವ ಬಗೆ ಬಗೆಯ ಸಿಹಿ, ಇತರೆ ತಿಂಡಿ ತಿನಿಸು ಖಾದ್ಯ ಪ್ರಿಯರನ್ನು ಆಕರ್ಷಿಸುತ್ತಿವೆ. ಮೈಸೂರಿನ ರಂಗಾಯಣದ ಆವರಣದಲ್ಲಿ ತೆರೆದಿರುವ ಮಳಿಗೆಗಳಲ್ಲಿ 9 ಆಹಾರ ಮಳಿಗೆಗಳಿದ್ದು, ದಾಳಿಂಬೆ, ಅವರೆಕಾಳು ಚುರುಮುರಿ, ದತ್ತ ಸ್ಪೆಷಲ್ ಕೊಬ್ಬರಿ ಮಿಠಾಯಿ, ಹೋಳಿಗೆ, ಜೋಳದ ರೊಟ್ಟಿ, ಗಿರ್ಮಿಟ್ಟು, ಬೆಣ್ಣೆದೋಸೆ ಮತ್ತಿತರೆ ತಿನಿಸುಗಳು ಜನರ ಬಾಯಲ್ಲಿ ನೀರುಣಿಸಲಿವೆ.