ಅಚ್ಚರಿ ಬೆಳವಣಿಗೆ; ದೇವೇಗೌಡ ಭೇಟಿಯಾದ ಶ್ರೀರಾಮುಲು!
Recommended Video
ಮೈಸೂರು, ನವೆಂಬರ್ 25 : ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಉಪ ಚುನಾವಣೆಗೆ ಕೆಲವೇ ದಿನಗಳ ಬಾಕಿ ಇರುವಾಗ ನಡೆದ ಬೆಳವಣಿಗೆಯಿಂದ ಜೆಡಿಎಸ್ ಪಕ್ಷಕ್ಕೆ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ.
ಸೋಮವಾರ ಆರೋಗ್ಯ ಸಚಿವ ಬಿ. ಶ್ರೀರಾಮುಲು ಜೆಡಿಎಸ್ ನಾಯಕ ಜಿ. ಟಿ. ದೇವೇಗೌಡ ಭೇಟಿ ಮಾಡಿದ್ದಾರೆ. ಹುಣಸೂರು, ಕೆ. ಆರ್. ಪೇಟೆ ಕ್ಷೇತ್ರದ ಉಪ ಚುನಾವಣೆಗೂ ಮುನ್ನ ನಡೆದ ಈ ಭೇಟಿ ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಸೋಮವಾರ ಮಾಜಿ ಸಚಿವ, ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡರ ಹುಟ್ಟುಹಬ್ಬ. ಹುಣಸೂರು, ಕೆ. ಆರ್. ಪೇಟೆ ಉಪ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ಬಿ. ಶ್ರೀರಾಮುಲು ಜಿ. ಟಿ. ದೇವೇಗೌಡರನ್ನು ಭೇಟಿಯಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದರು.
"ಮಾಜಿ ಸಚಿವ, ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರನ್ನು ಮೈಸೂರಿನ ಅವರ ನಿವಾಸದಲ್ಲಿ ಸೋಮವಾರ ಭೇಟಿ ಮಾಡಿ ಜನ್ಮದಿನದ ಶುಭಾಶಯ ಕೋರಿದೆ. ನಮ್ಮಿಬ್ಬರದ್ದು ರಾಜಕೀಯ ಮೀರಿದ ಗೆಳೆತನ" ಎಂದು ಶ್ರೀರಾಮುಲು ಫೇಸ್ ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಉಪ ಚುನಾವಣೆ ಮೇಲೆ ಪ್ರಭಾವ
ಬಿ. ಶ್ರೀರಾಮುಲು ಜೆಡಿಎಸ್ ನಾಯಕ ಜಿ. ಟಿ. ದೇವೇಗೌಡ ಭೇಟಿ ಉಪ ಚುನಾವಣೆ ಮೇಲೆ ಪ್ರಭಾವ ಬೀರಲಿದೆಯೇ? ಎಂಬ ಚರ್ಚೆ ಆರಂಭವಾಗಿದೆ. ಹುಣಸೂರು ಕ್ಷೇತ್ರದಲ್ಲಿ ಜಿ. ಟಿ. ದೇವೇಗೌಡರ ಪ್ರಭಾವ ಹೆಚ್ಚಿದೆ. ಇದು ಚುನಾವಣೆಯಲ್ಲಿ ಸಹಾಯಕವಾಗಲಿದೆಯೇ? ಕಾದು ನೋಡಬೇಕು.
ಜೆಡಿಎಸ್ನಿಂದ ಗೌಡರು ದೂರ ದೂರ
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಂಡ ಬಳಿಕ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಜೆಡಿಎಸ್ ಪಕ್ಷದ ಚಟುವಟಿಕೆಗಳಿಂದ ದೂರವಾಗಿದ್ದಾರೆ. ಪಕ್ಷದ ಯಾವ ಕಾರ್ಯಕ್ರಮದಲ್ಲಿಯೂ ಅವರು ಪಾಲ್ಗೊಳ್ಳುತ್ತಿಲ್ಲ.
ಬಿಜೆಪಿ ಸೇರಲಿದ್ದಾರೆ ಜಿಟಿಡಿ
ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಬಿಜೆಪಿ ಸೇರಲಿದ್ದಾರೆ? ಎಂಬ ಸುದ್ದಿಗಳು ಹಬ್ಬಿ ಹಲವು ದಿನಗಳು ಕಳೆದಿವೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರನ್ನು ಜಿ. ಟಿ. ದೇವೇಗೌಡ ಹಲವು ಬಾರಿ ಹೊಗಳಿ ಜೆಡಿಎಸ್ ನಾಯಕರಿಗೆ ಇರುಸುಮುರುಸು ಉಂಟು ಮಾಡಿದ್ದಾರೆ.
ಸಾಕಷ್ಟು ನೋವು ಉಂಟಾಗಿದೆ
"ಪಕ್ಷಕ್ಕಾಗಿ ಹಗಲಿರುವ ಕೆಲಸ ಮಾಡಿದರೂ ಜೆಡಿಎಸ್ ಪಕ್ಷದಲ್ಲಿ ತಮಗೆ ಸಾಕಷ್ಟು ನೀವು ನೀಡಿದ್ದಾರೆ. ಸಹಕಾರಿ, ಅಬಕಾರಿ ಖಾತೆ ಕೊಡುತ್ತೇವೆ ಎಂದರು. 8ನೇ ತರಗತಿ ಓದಿದ ತಮಗೆ ಉನ್ನತ ಶಿಕ್ಷಣ ಖಾತೆ ಕೊಟ್ಟು ಅಪಮಾನ ಮಾಡಿದರು" ಎಂದು ಹಿಂದೆ ಜಿ. ಟಿ. ದೇವೇಗೌಡ ಆಕ್ರೋಶ ಹೊರಹಾಕಿದ್ದರು.