ಬಿ.ಶರತ್ ವರ್ಗಾವಣೆ ವಿಚಾರ; ನಾಲ್ಕನೇ ಬಾರಿ ವಿಚಾರಣೆ ಮುಂದೂಡಿಕೆ
ಮೈಸೂರು, ಅಕ್ಟೋಬರ್ 23: ನಿರ್ಗಮಿತ ಜಿಲ್ಲಾಧಿಕಾರಿ ಬಿ.ಶರತ್ ಅವರ ವರ್ಗಾವಣೆ ಸಂಬಂಧ ಸಿಎಟಿ ವಿಚಾರಣೆಯನ್ನು ಮತ್ತೆ ಮುಂದೂಡಿದ್ದು, ನವೆಂಬರ್ 3ಕ್ಕೆ ದಿನಾಂಕವನ್ನು ನಿಗದಿಗೊಳಿಸಿದೆ.
ತಮ್ಮ ವರ್ಗಾವಣೆ ಪ್ರಶ್ನಿಸಿ ನಿರ್ಗಮಿತ ಡಿಸಿ ಶರತ್ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಸಿಎಟಿ ನವೆಂಬರ್ 3ಕ್ಕೆ ಮುಂದೂಡಿದೆ. ಇದರಿಂದ ರೋಹಿಣಿ ಸಿಂಧೂರಿ ಅವರಿಗೆ ಮತ್ತೊಮ್ಮೆ ರಿಲೀಫ್ ಸಿಕ್ಕಿದೆ.
ಬಿ.ಶರತ್ ವರ್ಗಾವಣೆ; ಸಿಎಟಿ ಮುಂದಿನ ವಿಚಾರಣೆ ಅ.23ಕ್ಕೆ
ತಮ್ಮನ್ನು ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ದಿಢೀರ್ ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿ ನಿರ್ಗಮಿತ ಡಿಸಿ ಶರತ್ ಅವರು ಅಕ್ಟೋಬರ್ 1ರಂದು ಸಿಎಟಿ ಮೊರೆ ಹೋಗಿದ್ದರು. ಅರ್ಜಿ ಸಂಬಂಧ ಅಕ್ಟೋಬರ್ 14ಕ್ಕೆ ವಿಚಾರಣೆ ನಡೆದಿದ್ದು, ಶರತ್ ಪರ ವಕೀಲ ಎ.ಎಸ್.ಪೊನ್ನಣ್ಣ ವಾದ ಮಂಡಿಸಿದ್ದರು. ಆದರೆ ಪ್ರತಿವಾದ ಮಂಡಿಸಲು ಎಜಿ ಕಾಲಾವಕಾಶ ಕೇಳಿದ ಕಾರಣ ಸಿಎಟಿ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 23ಕ್ಕೆ ಮುಂದೂಡಲಾಗಿತ್ತು. ಇಂದು ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಸರ್ಕಾರದ ಅಡ್ವೊಕೇಟ್ ಜನರಲ್ ಅವರು ಸಮಯ ಕೇಳಿದ ಹಿನ್ನೆಲೆಯಲ್ಲಿ ಸಿಎಟಿ ನವೆಂಬರ್ 3ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿತು.
ರೋಹಿಣಿ ಸಿಂಧೂರಿ ಅವರ ವರ್ಗಾವಣೆ ಕುರಿತಂತೆ ವಿಚಾರಣೆ ನಡೆಸುತ್ತಿರುವ ಸಿಎಟಿ ಈ ತನಕ ನಾಲ್ಕು ಬಾರಿ ವಿಚಾರಣೆ ಮುಂದೂಡಿದೆ.