ಮತ ಕೇಳುವ ನೈತಿಕತೆ ಯಡಿಯೂರಪ್ಪನವರಿಗೆಲ್ಲಿದೆ ?: ಸಿದ್ದರಾಮಯ್ಯ
ಅಧಿಕಾರದಲ್ಲಿದ್ದಾಗ ಒಂದು, ಇಲ್ಲದಾಗ ಇನ್ನೊಂದು ಮಾತನಾಡುವ ಯಡ್ಡಿಯೂರಪ್ಪ ಅವರಿಗೆ ಮತ ಕೇಳುವ ನೈತಿಕತೆಯಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು, ಏಪ್ರಿಲ್ 5: ಮಹದೇವಪ್ರಸಾದ್ ಗುಂಡ್ಲುಪೇಟೆಯಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಹಾಗಾಗಿ ಅವರ ಪತ್ನಿಗೆ ಓಟು ಕೊಡೋದು ನ್ಯಾಯ. ಬಿಜೆಪಿಗೆ ಯಾಕೆ ಓಟು ಕೊಡಬೇಕು, ನೀವೇ ಹೇಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಏಪ್ರಿಲ್ 9 ಭಾನುವಾರದಂದು ನಡೆಯಲಿರುವ ಗುಂಡ್ಲೆಪೇಟೆ ಉಪಚುನಾವಣೆಯ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಚಾಮರಾಜನಗರಕ್ಕೆ ಬರಲಿಲ್ಲ. ಈಗ ಮತ ಕೇಳಲು ಯಾವ ನೈತಿಕತೆ ಇದೆ.? ನಾನು ಚಾಮರಾಜ ನಗರಕ್ಕೆ ಭೇಟಿ ಕೊಟ್ಟಿದ್ದಕ್ಕೆಮುಖ್ಯಮಂತ್ರಿ ಸ್ಥಾನ ನಂಗೆ ಗಟ್ಟಿಯಾಯ್ತು ಎಂದರು.[ಅನುಕಂಪದ ಅಲೆಯಲ್ಲ, ಪತಿಯ ಜನಸೇವೆ ನನ್ನ ಗೆಲ್ಲಿಸುತ್ತೆ: ಗೀತಾ ಮಹಾದೇವಪ್ರಸಾದ್]
ಕರ್ನಾಟಕ ಉತ್ತರ ಪ್ರದೇಶವಲ್ಲ, ಇದು ಸಂತರ ನಾಡು. ನಾವು ಮುಂದಿನ ತಿಂಗಳಿಂದ ಒಬ್ಬರಿಗೆ ಏಳು ಕೆಜಿ ಉಚಿತ ಅಕ್ಕಿ ಕೊಡುತ್ತಿದ್ದೇವೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಫ್ರೀ ಅಕ್ಕಿ ಕೊಟ್ಟಿದ್ದಾರಾ? ಆಹಾರ ಭದ್ರತಾ ಕಾಯ್ದೆ ಮಾಡಿದ್ದು ಯುಪಿಎ ಸರ್ಕಾರ ಎಂದರು.[ಮೋದಿಗೆ ನನ್ನ ವಯಸ್ಸು ಗೊತ್ತಿದೆ, ನಾನೇ ಮುಂದಿನ ಸಿಎಂ - ಯಡಿಯೂರಪ್ಪ]
ಹಲವು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದೆ. ಆದರೆ ಅಲ್ಲೆಲ್ಲಾ ಉಚಿತ ಅಕ್ಕಿಯಾಕೆ ಕೊಡುತ್ತಿಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿ ಎಂದರೆ ನಂಗೆ ಕೇಂದ್ರ ಸರ್ಕಾರ ನೋಟುಪ್ರಿಂಟ್ ಮಾಡೋ ಅಧಿಕಾರ ಕೊಟ್ಟಿಲ್ಲ ಎಂದಿದ್ದರು. ಮುಂದೆ ಅಧಿಕಾರಕ್ಕೆ ಬಂದ್ರೆ ಸಾಲ ಮನ್ನಾ ಮಾಡ್ತೇವೆ ಅಂತಾರೆ. ಇವರದು ಅಧಿಕಾರದಲ್ಲಿದ್ದಾಗ ಒಂದು ನಾಲಿಗೆ, ಇಲ್ಲದಾಗ ಮತ್ತೊಂದು ನಾಲಿಗೆ ಎಂದು ಯಡಿಯೂರಪ್ಪ ವಿರುದ್ಧ ಹರಿಹಾಯ್ದರು.[ಸಿದ್ದರಾಮಯ್ಯ ಒಬ್ಬ ತಲಾಕ್ ರಾಜಕಾರಣಿ: ಈಶ್ವರಪ್ಪ ವ್ಯಂಗ್ಯ]
ಮೋದಿ ಹೇಳಿದಂತೆ ಅಚ್ಛೆ ದಿನ ಬಂತಾ, ವಿದೇಶದಲ್ಲಿರುವ ಕಪ್ಪು ಹಣ ಬಂತಾ, ಪ್ರತಿ ಖಾತೆಗೆ ಹದಿನೈದು ಲಕ್ಷ ರೂ. ಅಂದಿದ್ದರು. ಹದಿನೈದು ಪೈಸೆಯಾದರೂ ಕೊಟ್ಟಿದ್ದಾರಾ ಎಂದ ಅವರು, ಯಡಿಯೂರಪ್ಪ ನಗುವುದೇ ಇಲ್ಲ, ಯಾವಾಗಲೂ ಮುಖ ಗಂಟು ಹಾಕ್ಕೊಂಡೇ ಇರುತ್ತಾರೆ. ಇವರ ಹಾಗೂ ಶೋಭಾ ಕರಂದ್ಲಾಜೆಯವರ ಮುಖ ನೋಡ್ಕೊಂಡು ಓಟು ಹಾಕಬೇಕಾ ಎಂದು ಪ್ರಶ್ನಿಸಿದರು.
ಬಿಜೆಪಿಯವರಿಗೆ ಸಂಸ್ಕೃತಿಯೇ ಇಲ್ಲ. ಅವನ್ಯಾರೋ ಸಿಂಹ ಅಂತೆ, ರೇಣುಕಾಚಾರ್ಯ ಅಂತೆ ಇವರಿಗೆಗೆ ಹೆಣ್ಮಕ್ಕಳ ಬಗ್ಗೆ ಗೌರವವೇ ಇಲ್ಲ ಎಂದು ವ್ಯಂಗ್ಯವಾಗಿ ಕುಟುಕಿದರು.
ಒಟ್ಟಿನಲ್ಲಿ, ಏಪ್ರಿಲ್ 13, ಗುರುವಾರದಂದು ಹೊರಬೀಳಲಿರುವ ಉಪಚುನಾವಣಾ ಫಲಿತಾಂಶದವರೆಗೂ ನಾಯಕರ ಇಂಥ ಪರಸ್ಪರ ಕೆಸರೆರಚಾಟವನ್ನು ಜನ ಸಹಿಸಿಕೊಳ್ಳಲೇಬೇಕು!