ಮೈಸೂರು ಮಹಾನಗರ ಪಾಲಿಕೆ ಗದ್ದುಗೆಯಲ್ಲಿ ಸಿದ್ದುಗೆ ಮುಖಭಂಗ
ಮೈಸೂರು, ನವೆಂಬರ್, 13 : ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕೈಜೋಡಿಸಿದ್ದು, ಮೇಯರ್ ಆಗಿ ಬಿ.ಎಲ್ ಭೈರಪ್ಪ ಹಾಗೂ ಉಪಮೇಯರ್ ಆಗಿ ವನಿತಾ ಪ್ರಸನ್ನ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಗೆ ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದೆಂಬ ಹಠಕ್ಕೆ ಬಿದ್ದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಕೊನೆಗಳಿಗೆಯಲ್ಲಿ ತಂತ್ರ ರೂಪಿಸಿದ್ದು, ತವರು ಜಿಲ್ಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖಭಂಗ ತಂದೊಡ್ಡಿದೆ. ಬೆಂಗಳೂರು ಮಹಾನಗರಪಾಲಿಕೆಯಲ್ಲಿ ಕಾಂಗ್ರೆಸ್ ಜೊತೆ ಜೆಡಿಎಸ್ ಸಖ್ಯ ಬೆಳೆಸಿತ್ತು.[ಬೆಂಗಳೂರಿನ ಪ್ರಥಮ ಪ್ರಜೆಯಾಗಿ ಮಂಜುನಾಥ ರೆಡ್ಡಿ ಆಯ್ಕೆ]
ಕಳೆದ ಕೆಲ ದಿನಗಳಿಂದ ಮೈಸೂರು ಮಹಾನಗರಪಾಲಿಕೆಯ ಮೇಯರ್ ಸ್ಥಾನ ಯಾರಿಗೆ ದಕ್ಕುತ್ತದೆ ಎಂಬ ಚರ್ಚೆಗಳು ನಡೆದಿದ್ದವು. ಈ ಕುರಿತಂತೆ ಭಾರೀ ಕುತೂಹಲ ಜನ ವಲಯದಲ್ಲಿತ್ತು. ಇದೀಗ ಅವರ ಗೊಂದಲ, ಕುತೂಹಲಗಳು ನಿವಾರಣೆಯಾಗಿದ್ದು, ಪಕ್ಷೇತರ ಅಭ್ಯರ್ಥಿ(ಕೆಜೆಪಿ)ಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಬಿ.ಎಲ್.ಬೈರಪ್ಪ ಅವರಿಗೆ ಮೇಯರ್, ಬಿಜೆಪಿಯ ವನಿತಾ ಪ್ರಸನ್ನ ಅವರಿಗೆ ಉಪಮೇಯರ್ ಸ್ಥಾನ ದಕ್ಕಿದೆ.[ಉಪಮೇಯರ್ ಆಗಿ ಎಸ್ ಪಿ ಹೇಮಲತಾ ಆಯ್ಕೆ]
ಮೈಸೂರು ಮಹಾನಗರ ಪಾಲಿಕೆಗೆ ಇಂದು ನಡೆದ ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ ದಳ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಬಿ.ಎಲ್.ಬೈರಪ್ಪ, ಕಾಂಗ್ರೆಸ್ ಪಕ್ಷದಿಂದ ನಾಗಭೂಷಣ ನಾಮಪತ್ರ ಸಲ್ಲಿಸಿದರು, ಉಪಮೇಯರ್ ಸ್ಥಾನಕ್ಕೆ ಬಿಜೆಪಿಯ ವನಿತಾ ಪ್ರಸನ್ನ ಮತ್ತು ಕಾಂಗ್ರೆಸ್ ನಿಂದ ರಂಜನಿ ನಾಮಪತ್ರ ಸಲ್ಲಿಸಿದ್ದರು.