ಸಾಂಸ್ಕೃತಿಕ ನಗರಿಯಲ್ಲಿ ಕಲ್ಲರಳಿ ಕಲೆಯಾಯ್ತು!
ಮೈಸೂರು: ಐತಿಹಾಸಿಕ ದೇವಾಲಯಗಳು, ಗುಡಿ- ಗೋಪುರಗಳು ಸೇರಿದಂತೆ ರಾಜ್ಯದ ಪ್ರಸಿದ್ಧ ಪ್ರೇಕ್ಷಣೀಯ ತಾಣಗಳು ಹಾಗೂ ಐತಿಹಾಸಿಕ ಸ್ಮಾರಕಗಳನ್ನು ಕ್ಯಾಮೆರಾ ಕಣ್ಣಿನಲ್ಲಿ ನೋಡಲು ಇಚ್ಛಿಸುವವರಿಗೆ ನಗರದ ಕಲಾಮಂದಿರ ಸುಚಿತ್ರ ಕಲಾ ಆರ್ಟ್ ಗ್ಯಾಲರಿಯಲ್ಲಿ ವಾರ್ತಾ ಇಲಾಖೆಯ ಛಾಯಾ ಮತ್ತು ಚಲನಚಿತ್ರ ನಿವೃತ್ತ ಅಧಿಕಾರಿ ಟಿ.ಕೆಂಪಣ್ಣ ಸುಂದರ ಲೋಕವನ್ನು ತೆರೆದಿಟ್ಟಿದ್ದಾರೆ.
ವಿಶ್ವ ಛಾಯಾಗ್ರಹಣ ದಿನೋತ್ಸವ ಪ್ರಯುಕ್ತ 'ಕಲ್ಲರಳಿ ಕಲೆಯಾಗಿ' ಎಂಬ ಶೀರ್ಷಿಕೆಯಡಿ ಛಾಯಾಚಿತ್ರಗಳ ಪ್ರದರ್ಶನ ಆ.19 ರಿಂದ 21ರ ವರೆಗೆ ನಡೆಯುತ್ತದೆ. ಮುಂಜಾನೆ ಮತ್ತು ಸಂಜೆಯ ರಸಮಯ ಕ್ಷಣಗಳಲ್ಲಿ ತೆಗೆದಿರುವ ಫೋಟೋಗಳು ಇಲ್ಲಿದ್ದು, , ಸೂರ್ಯನ ಹೊಂಗಿರಣಗಳ ನಡುವೆ ನೆರಳು ಮತ್ತು ಬೆಳಕುಗಳ ಸೌಂದರ್ಯವನ್ನು ಉತ್ತಮವಾಗಿ ಸೆರೆ ಹಿಡಿಯಲಾಗಿದೆ.[ವಿಶ್ವ ಫೋಟೋಗ್ರಫಿ ದಿನಕ್ಕೊಂದಿಷ್ಟು ವಿಶಿಷ್ಟ ಚಿತ್ರಗಳು]
ಬನವಾಸಿಯ ಮಧುಕೇಶ್ವರ ದೇವಾಲಯ, ಕದಂಬರ ವಾಸ್ತುಶಿಲ್ಪದ ಪ್ರತೀಕವಾಗಿ ನಂದಿ, ಪಟ್ಟದಕಲ್ಲಿನ ದೇವಾಲಯಗಳ ಸಮೂಹ, ಬಾದಾಮಿ ಗುಹಾಲಯದಲ್ಲಿರುವ ಆದಿಶೇಷನ ಮೇಲೆ ಆಸೀನನಾಗಿರುವ ವಿಷ್ಣು, ಸೋಮನಾಥಪುರದ ದೇವಾಲಯ, ಬೇಲೂರಿನ ನರ್ತನ ಸುಂದರಿ, ದರ್ಪಣ ಸುಂದರಿ, ಚೆನ್ನಕೇಶವ ದೇವಾಲಯದ ವಿಹಂಗಮ ನೋಟ, ಇಟಗಿಯ ಮಹಾದೇವ ದೇವಾಲಯ, ಬೀದರ್ನ ಕೋಟೆಯ ಹೆಬ್ಬಾಗಿಲು, ಮಹ್ಮದ್ ಗವಾನನ ಮದರಸ, ವಿಜಯಪುರದ ಬಾರ ಕಮಾನ್, ಗೋಳಗುಮ್ಮಟ, ಹಂಪಿಯ ವಿಜಯವಿಠ್ಠಲ ದೇವಾಲಯಗಳ ಸಮೂಹ, ಉಗ್ರ ನರಸಿಂಹ ಪ್ರದರ್ಶನದಲ್ಲಿದೆ.[ವಿಶೇಷ ಲೇಖನ: ಸ್ವಲ್ಪ ಈ ಕಡೆ ನೋಡಿ... ಸ್ಮೈಲ್ ಪ್ಲೀಸ್...]
ಜತೆಗೆ ಇಕ್ಕೇರಿಯ ಅಘೋರೇಶ್ವರ ದೇವಾಲಯ, ಬಸವ ಕಲ್ಯಾಣದ ಕೋಟೆ, ಚಿತ್ರದುರ್ಗದ ದುರ್ಗದ ಕೋಟೆಯ ಮನೋಹರ ನೋಟ, ಮೇಲುಕೋಟೆಯ ಪುಷ್ಕರಣಿಯಿಂದ ಕಾಣುವ ನರಸಿಂಹ, ಮೈಸೂರು ಚಾಮುಂಡಿ ಬೆಟ್ಟದ ನಂದಿ, ಮೈಸೂರು ಅರಮನೆಯ ಒಳಾಂಗಣ ನೋಟ, ಮೈಸೂರು ಅರಮನೆ, ಬೆಂಗಳೂರು ಅರಮನೆ, ಮೇಕೆ ದಾಟುವಿನಲ್ಲಿ ಹರಿಯುವ ಕಾವೇರಿ ಹೀಗೆ ಹಲವಾರು ಐತಿಹಾಸಿಕ ಸ್ಥಳಗಳನ್ನು ಕಲಾರಸಿಕರು ಕಣ್ತುಂಬಿಕೊಳ್ಳಬಹುದಾಗಿದೆ.
ಕಲ್ಲಿನ ರಥದ ಸೌಂದರ್ಯ
ಕಣ್ಮನ ಸೆಳೆಯುವ ಹಂಪಿಯ ಕಲ್ಲಿನ ರಥದ ಸೌಂದರ್ಯ.
ದೇಗುಲಗಳ ಸಮೂಹ
ಪಟ್ಟದಕಲ್ಲಿನಲ್ಲಿರುವ ದೇಗುಲಗಳ ಸಮೂಹದ ದೃಶ್ಯ.
ವಿಜಯ ವಿಠ್ಠಲ
ಹಂಪಿಯ ವಿಜಯ ವಿಠ್ಠಲ ದೇವಾಲಯದ ಅದ್ಭುತ ಚಿತ್ರ.
ಪೂರ್ಣ ನೋಟ
ಹಂಪಿಯ ವಿಜಯ ವಿಠ್ಠಲ ದೇವಾಲಯದ ಪೂರ್ಣ ನೋಟ.