ಬೋಧನೆಗೆ ದೃಶ್ಯ ಮಾಧ್ಯಮದ ಸಹಾಯ ಅಗತ್ಯ : ತನ್ವೀರ್ ಸೇಠ್
ಇಂದು ಮಕ್ಕಳನ್ನು ತರಗತಿಗಳಿಗೆ ಆಕರ್ಷಿಸುವುದೇ ದೊಡ್ಡ ಸವಾಲಾಗಿದ್ದು, ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಬೋಧನೆಗೆ ದೃಶ್ಯ ಮಾಧ್ಯಮಗಳನ್ನು ಬಳಸಲು ಚಿಂತಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದರು.
ಮೈಸೂರು, ಮೇ 11: ಇಂದು ಮಕ್ಕಳನ್ನು ತರಗತಿಗಳಿಗೆ ಆಕರ್ಷಿಸುವುದೇ ದೊಡ್ಡ ಸವಾಲಾಗಿದ್ದು, ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಬೋಧನೆಗೆ ದೃಶ್ಯ ಮಾಧ್ಯಮಗಳನ್ನು ಬಳಸಲು ಚಿಂತಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ವತಿಯಿಂದ ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಆಯೋಜಿಸಿದ್ದ ಇಟಿ-17 ಶಿಕ್ಷಣದಲ್ಲಿ ಮಾಹಿತಿ ಸಂವಹನ ತಂತ್ರಜ್ಞಾನ ಬಳಕೆ ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.[ಮೈಸೂರಿನಲ್ಲಿ ಎಸ್ ವಿವೈಎಂ ನಿಂದ ಇಟಿ-17 ಎಂಬ ವಿಶಿಷ್ಟ ಕಾರ್ಯಕ್ರಮ]
ಸ್ವಾತಂತ್ರ್ಯ ಬಂದ 70 ವರ್ಷಗಳಲ್ಲಿ ಎಲ್ಲಾ ಮೂಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಆದರೆ ಶಿಕ್ಷಣ ವ್ಯವಸ್ಥೆಯಲ್ಲಿ ಸಮಾನತೆ ತರಲಾಗಿಲ್ಲ. ಬಡವ, ಬಲ್ಲಿದ ಎಂಬ ತಾರತಮ್ಯ ತೊಲಗಿ ಸಮಾನ ಶಿಕ್ಷಣ ವ್ಯವಸ್ಥೆ ಜಾರಿಯಾದಾಗ ಮಾತ್ರ ಭಾರತ ಅಭಿವೃದ್ಧಿಶೀಲ ರಾಷ್ಟ್ರವಾಗಲಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಸರ್ಕಾರಿ ಶಾಲೆಗಳು ಬಡವರಿಗೆ, ಖಾಸಗಿ ಶಾಲೆಗಳು ಧನಿಕರಿಗೆ ಎಂಬ ಮನೋಭಾವ ಬೇರೂರಿದೆ. ಮೊದಲು ಜನರ ಮನಸ್ಸಿನಿಂದ ಈ ಭಾವನೆಯನ್ನು ಕಿತ್ತೊಗೆಯಬೇಕು. ಸರ್ವರಿಗೂ ಸಮಾನ ಶಿಕ್ಷಣ ನೀಡಬೇಕು. ಒಂದು ಸಾವಿರ ಶಾಲೆಗಳಿಗೆ ತಂತ್ರಜ್ಞಾನ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನ ಪಡಲಾಗುತ್ತಿದೆ.
ಅಲ್ಲದೆ ಪಠ್ಯಗಳನ್ನು ಭವಿಷ್ಯದ ಭಾರತದ ದೃಷ್ಟಿಯಿಂದ ಅಳವಡಿಸಲಾಗುವುದು ಎಂದ ಅವರು, ಕಸ್ತೂರಿ ರಂಗನ್ ವರದಿಯ ಅಧ್ಯಯನ ಮಾಡಿ ಶಿಫಾರಸುಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷ ಕೆ.ಕಸ್ತೂರಿ ರಂಗನ್, ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥಾಪಕ ಅಧ್ಯಕ್ಷ ಡಾ.ಆರ್.ಬಾಲಸುಬ್ರಹ್ಮಣ್ಯಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.