ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರ ಮುಚ್ಚುವ ಹುನ್ನಾರ?
ಮೈಸೂರು, ಡಿಸೆಂಬರ್ 28: ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ವಿಶ್ವವಿದ್ಯಾಲಯದ ಅಧೀನಕ್ಕೊಳಪಡಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಕೇಂದ್ರದಲ್ಲಿರುವ ಹಾಲಿ ಕಾರ್ಯನಿರ್ವಹಿಸುತ್ತಿರುವ ಇಡೀ ಶೈಕ್ಷಣಿಕ ಸಿಬ್ಬಂದಿಗೆ ಬಿಡುಗಡೆ ಪತ್ರ ನೀಡಿರುವುದು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ಶಾಶ್ವತವಾಗಿ ಮುಚ್ಚುವ ಪ್ರಯತ್ನದ ಆರಂಭಿಕ ನಡೆಯಾಗಿದೆ ಎಂದು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ವಿಶ್ರಾಂತ ಯೋಜನಾ ನಿರ್ದೇಶಕರಾದ ಡಾ.ಕೆ.ಆರ್.ದುರ್ಗಾದಾಸ್ ಆರೋಪಿಸಿದ್ದಾರೆ.
ಈ ಕುರಿತು ಪತ್ರದ ಮೂಲಕ ಸರ್ಕಾರದ ಗಮನ ಸೆಳೆದಿರುವ ಅವರು ಪ್ರಸ್ತುತ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಂತೆಯೇ ಭಾರತೀಯ ಭಾಷಾ ಸಂಸ್ಥಾನದಡಿಯಲ್ಲಿ ಹತ್ತಾರು ಪ್ರಾಜೆಕ್ಟುಗಳು ಕಾರ್ಯನಿರ್ವಹಿಸುತ್ತಿವೆ. ಈ ಪ್ರಾಜೆಕ್ಟುಗಳಲ್ಲಿ 200 ಕ್ಕೂ ಹೆಚ್ಚು ವಿವಿಧ ಭಾಷೆಗಳ ಸಿಬ್ಬಂದಿ ಗುತ್ತಿಗೆ ಆಧಾರದಲ್ಲಿ ಒಂದು ವರ್ಷಕ್ಕೆ ನೇಮಕಗೊಂಡರೂ ಪ್ರತಿ ವರ್ಷವೂ ನವೀಕರಣಗೊಳ್ಳುತ್ತಾ 25 ವರ್ಷಗಳಿಂದ ನಿರಂತರ ಕೆಲಸ ಮಾಡುತ್ತಿದ್ದಾರೆ.
ಆದರೆ ಕೇವಲ 2 ರಿಂದ 4 ವರ್ಷಗಳಿಂದಷ್ಟೇ ಸೇವೆ ಸಲ್ಲಿಸುತ್ತಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸಂಶೋಧಕರನ್ನು ಕೆಲಸದಿಂದ ತೆಗೆಯುತ್ತಿರುವುದು ಸಹಜವಾಗಿ ಅನುಮಾನಗಳನ್ನು ಹುಟ್ಟುಹಾಕಿದೆ. ಇದು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸಂಶೋಧನಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಸ್ವಾಯತ್ತತೆಯನ್ನು ತಡೆಯುವ ಪ್ರಯತ್ನವೇ ಆಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಸಂಶೋಧಕರದ್ದು ಸಂಶೋಧನೆಗೆ ಮಾತ್ರ ಸೀಮಿತವಾದ ಕೆಲಸವಲ್ಲ. ಕೇಂದ್ರವು ಆಯೋಜಿಸುವ ವಿಚಾರ ಸಂಕಿರಣ, ಕಾರ್ಯಾಗಾರಗಳನ್ನು ಒಳಗೊಂಡಂತೆ ಕೇಂದ್ರದ ಎಲ್ಲಾ ಚಟುವಟಿಕೆಗಳ ಸಂಪೂರ್ಣ ಜವಾಬ್ದಾರಿ ಇವರದ್ದೇ ಆಗಿರುತ್ತದೆ. ಇಲ್ಲಿನ ಕೆಲವು ಸಂಶೋಧಕರ ಸಂಶೋಧನೆ ವಿಷಯದ ವ್ಯಾಪ್ತಿ ದೊಡ್ಡದಿದ್ದು, ಸಹಜವಾಗಿಯೇ ಅವುಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಕಾಲಾವಧಿ ಬೇಕಾಗಿರುತ್ತದೆ.
ಮೈಸೂರು ರೈಲು ವಸ್ತು ಸಂಗ್ರಹಾಲಯದಲ್ಲಿ ಹೊಸ ಆಕರ್ಷಣೆಗಳು
ಹಾಲಿ ಶೈಕ್ಷಣಿಕ ಸಿಬ್ಬಂದಿಯನ್ನು ಬದಲಿಸುವ ಪ್ರಯತ್ನ ಕೇಂದ್ರದ ಬೆಳವಣಿಗೆಗೆ ಮಾರಕ ಪರಿಣಾಮ ಬೀರಲಿದೆ. ಈ ಶೈಕ್ಷಣಿಕ ಸಿಬ್ಬಂದಿಯನ್ನು ಕೈಬಿಟ್ಟರೆ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು ಶೂನ್ಯ ಸ್ಥಿತಿಯನ್ನು ತಲುಪಲಿದೆ. ಇವರ ಅನುಭವ ವ್ಯರ್ಥವಾಗಲಿದೆ. ಇದು ಸ್ವಾಯತ್ತತೆಯನ್ನು ಪಡೆಯುವ ಪ್ರಯತ್ನಕ್ಕೂ ಅಡ್ಡಿಯುಂಟು ಮಾಡುತ್ತದೆ ಎಂದು ದೂರಿದ್ದಾರೆ.
ಖಾಲಿ ಇರುವ ಸಂಶೋಧಕರ ಹುದ್ದೆಗಳನ್ನು ಮಾತ್ರ ತುಂಬಿಕೊಳ್ಳುವುದು ವಿವೇಕದ ನಡೆಯಾಗಿರುತ್ತದೆ. ಭಾರತೀಯ ಭಾಷಾ ಸಂಸ್ಥಾನದ ಇತರ ಯೋಜನೆಗಳಲ್ಲಿ ಕಳೆದ 25 ವರ್ಷಗಳಿಂದ ದುಡಿಯುತ್ತಿರುವ ಶೈಕ್ಷಣಿಕ ಗುತ್ತಿಗೆ ಸಿಬ್ಬಂದಿಗೆ ಇಲ್ಲದ ಮರು ನೇಮಕಾತಿ ಅಧಿಸೂಚನೆಯನ್ನು ಇದೀಗ ಸ್ವಾಯತ್ತತೆಯ ಪ್ರಗತಿ ಪಥದಲ್ಲಿರುವ ಶಾಸ್ತ್ರೀಯ ಕನ್ನಡ ಕೇಂದ್ರಕ್ಕೆ ಮಾತ್ರ ಹೊರಡಿಸಿರುವುದು ಒಳಹುನ್ನಾರದ ಭಾಗವೇ ಆಗಿದೆ.
ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು ಕೇಂದ್ರ ಸರ್ಕಾರದಡಿಯಲ್ಲಿ ಇರುವುದಾದರೂ ಇದರ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರದ ಜವಾಬ್ದಾರಿಯ ಪಾಲು ಗಮನಾರ್ಹವಾಗಿದೆ. ಆದ್ದರಿಂದ ಈ ಬಗ್ಗೆ ರಾಜ್ಯ ಸರ್ಕಾರ ಕೇಂದ್ರ ಶಿಕ್ಷಣ ಸಚಿವಾಲಯದ ಮೂಲಕ ಭಾರತೀಯ ಭಾಷಾ ಸಂಸ್ಥಾನಕ್ಕೆ ಸೂಕ್ತ ಆದೇಶ ನೀಡಲು ಕ್ರಮಕೈಗೊಳ್ಳಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.