ಶಾಸಕ ತನ್ವೀರ್ ಸೇಠ್ ಮೇಲೆ ಕತ್ತಿಯಿಂದ ಹಲ್ಲೆ, ತೀವ್ರ ಗಾಯ
ಮೈಸೂರು, ನವೆಂಬರ್ 18: ಮಾಜಿ ಸಚಿವ, ನರಸಿಂಹ ರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಮೇಲೆ ಭಾನುವಾರ ರಾತ್ರಿ ಯುವಕನೊಬ್ಬ ಕತ್ತಿಯಿಂದ ಕುತ್ತಿಗೆ ಭಾಗಕ್ಕೆ ಭೀಕರ ಹಲ್ಲೆ ನಡೆಸಿದ್ದು, ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ನಗರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬನ್ನಿಮಂಟಪದ ಬಾಲಭವನದ ಆವರಣದಲ್ಲಿ ಭಾನುವಾರ ನಡೆಯುತ್ತಿದ್ದ ವಿವಾಹ ಸಮಾರಂಭದಲ್ಲಿ ತನ್ವೀರ್ ಸೇಠ್ ಪಾಲ್ಗೊಂಡಿದ್ದರು. ರಾತ್ರಿ 11.30ರ ವೇಳೆಗೆ ಯುವಕನೊಬ್ಬ ಏಕಾಏಕಿ ಅವರ ಮೇಲೆ ದಾಳಿ ನಡೆಸಿ ಕತ್ತಿಯಿಂದ ಕುತ್ತಿಗೆ ಭಾಗಕ್ಕೆ ಬೀಸಿದ್ದಾನೆ ಎನ್ನಲಾಗಿದೆ.
ಹಲ್ಲೆ ಮಾಡಿದ ಯುವಕನನ್ನು ಫರ್ಹಾನ್ ಪಾಷಾ (24) ಎಂದು ಗುರುತಿಸಲಾಗಿದೆ. ಈತ ಮೈಸೂರಿನ ಗೌಸಿಯಾನಗರದ ಕೆಆರ್ ಪುರಂ ನಿವಾಸಿ ಎಂದು ಹೇಳಲಾಗಿದೆ. ಆರೋಪಿಯನ್ನು ಹಿಡಿದ ಶಾಸಕರ ಬೆಂಬಲಿಗರು ಎನ್.ಆರ್. ಠಾಣೆಯ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಎಡಭಾಗದಲ್ಲಿ ಇರಿತ
ಬನ್ನಿಮಂಟಪದ ಆವರಣದಲ್ಲಿ ಸಂಬಂಧಿಯೊಬ್ಬರ ಬೀಗರ ಔತಣಕೂಟದಲ್ಲಿ ತನ್ವೀರ್ ಸೇಠ್ ಪಾಲ್ಗೊಂಡಿದ್ದರು. ಈ ವೇಳೆ ಫರ್ಹಾನ್ ಕತ್ತಿಯಿಂದ ಅವರ ಕುತ್ತಿಗೆಯ ಎಡಭಾಗದಲ್ಲಿ ಇರಿದ್ದಾನೆ. ಬಳಿಕ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಸಾರ್ವಜನಿಕರು ಆತನನ್ನು ಹಿಡಿದಿದ್ದಾರೆ. ಫರ್ಹಾನ್ ಎಸ್ಡಿಪಿಐ ಕಾರ್ಯಕರ್ತ ಎಂದು ತಿಳಿದುಬಂದಿದೆ. ಹಲ್ಲೆ ನಡೆಸಲು ಕಾರಣ ಏನೆಂದು ತಿಳಿದುಬಂದಿಲ್ಲ.
ಕುತ್ತಿಗೆಯಿಂದ ಇಳಿದ ರಕ್ತ
ಹಲ್ಲೆ ನಡೆಸಿದ ವೇಳೆ ಔತಣಕೂಟದಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ನಡೆಯುತ್ತಿತ್ತು. ತನ್ವೀರ್ ಸೇಠ್ ಅವರು ಹಾಡು ಕೇಳುತ್ತಾ ಸಂಬಂಧಿಕರೊಂದಿಗೆ ಕುಳಿತಿದ್ದರು. ಆಗ ಏಕಾಏಕಿ ಈ ದಾಳಿ ನಡೆದಿದೆ. ಗಾಯಗೊಂಡ ತನ್ವೀರ್ ಸೇಠ್ ಅವರನ್ನು ಕರೆದೊಯ್ಯುವ ದೃಶ್ಯ ವಿಡಿಯೋಗಳಲ್ಲಿ ಸೆರೆಯಾಗಿದೆ. ಗಾಯದಿಂದ ಸೇಠ್ ಅವರ ಕುತ್ತಿಗೆಯಿಂದ ಧಾರಾಕಾರವಾಗಿ ರಕ್ತ ಸುರಿದೆ. ಅವರು ಧರಿಸಿದ್ದ ಸೂಟ್ ರಕ್ತಸಿಕ್ತವಾಗಿದೆ.
ಆರೋಪಿ ಫರ್ಹಾನ್ ವಿಚಾರಣೆ
ತೀವ್ರ ಗಾಯಗೊಂಡ ಅವರನ್ನು ಕೂಡಲೇ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ಫರ್ಹಾನ್ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಕ್ಷೇತ್ರದ ಹಲವೆಡೆ ಭದ್ರತೆ
ಸೇಠ್ ಅವರ ಮೇಲೆ ಹಲ್ಲೆ ನಡೆದ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ನೂರಾರು ಬೆಂಬಲಿಗರು ಆಸ್ಪತ್ರೆ ಮುಂದೆ ಸೇರಿದರು. ಆಸ್ಪತ್ರೆ ಆವರಣದಲ್ಲಿ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಸಾರ್ವಜನಿಕರಿಗೆ ಆಸ್ಪತ್ರೆ ಪ್ರವೇಶಕ್ಕೆ ಅವಕಾಶ ನಿರ್ಬಂಧಿಸಲಾಗಿದೆ. ಜತೆಗೆ ಮೈಸೂರಿನ ಎನ್.ಆರ್. ಮೊಹಲ್ಲಾ, ಮಂಡಿಮೊಹಲ್ಲಾ, ಉದಯಗಿರಿ ಮತ್ತು ಲಷ್ಕರ್ ಮೊಹಲ್ಲಾ ಸೇರಿದಂತೆ ನರಸಿಂಹರಾಜ ಕ್ಷೇತ್ರದ ಹಲವೆಡೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ.