ಚಿಗುರು ಮೀಸೆ ಜ್ಯೋತಿಷಿಗೆ ಅಧಿಕಾರಿಗಳು ಸರ್ಟಿಫಿಕೇಟ್ ಕೊಟ್ರಾ?
ಮೈಸೂರು, ಏಪ್ರಿಲ್ 13; ಸಾಮಾನ್ಯವಾಗಿ ಜ್ಯೋತಿಷ್ಯ ಹೇಳುವ ಕೆಲವು ಜ್ಯೋತಿಷಿಗಳು ಸಿನಿಮಾ ನಟರು, ರಾಜಕಾರಣಿಗಳು ಸೇರಿದಂತೆ ಗಣ್ಯರೊಂದಿಗೆ ಇರುವ ಚಿತ್ರಗಳನ್ನು ತಮ್ಮ ಜ್ಯೋತಿಷಿ ಮಂದಿರದಲ್ಲಿ ಹಾಕಿಕೊಳ್ಳುತ್ತಾರೆ.
ಕೊಡಗಿನ ಕುಶಾಲನಗರ ವ್ಯಾಪ್ತಿಯಲ್ಲಿ ಅಡ್ಡಾಡುತ್ತಿದ್ದ ಚಿಗುರು ಮೀಸೆಯ ಯುವ ಜ್ಯೋತಿಷಿಯೊಬ್ಬನ ಬಳಿ ಅಧಿಕಾರಿಗಳು ನೀಡಿರುವ ಸರ್ಟಿಫಿಕೇಟ್ ಮತ್ತು ಅಧಿಕಾರಿಗಳೊಂದಿಗಿರುವ ಫೋಟೋಗಳು ಅಚ್ಚರಿ ಮೂಡಿಸಿದೆ.
Astrology Tips: ಮದುವೆ ಸಂದರ್ಭದಲ್ಲಿ ಗಮನಿಸಬೇಕಾದ ಜ್ಯೋತಿಷ್ಯ ಸಂಗತಿಗಳು
ಇದು ನಿಜವಾಗಿಯೂ ಅಧಿಕಾರಿಗಳು ನೀಡಿದ ಸರ್ಟಿಫಿಕೇಟೋ ಅಥವಾ ಫೋಟೋ ಶಾಪ್ ಬಳಸಿ ಮಾಡಿಕೊಂಡ ನಕಲಿ ಸರ್ಟಿಫಿಕೇಟಾ? ಎಂಬುದು ಖಾತರಿಯಾಗಬೇಕಿದೆ. ಆದರೆ ಇಷ್ಟರಲ್ಲಿಯೇ ಅದನ್ನು ಎಲ್ಲರಿಗೂ ತೋರಿಸುತ್ತಾ ಜನರಲ್ಲಿ ನಂಬಿಕೆ ಹುಟ್ಟಿಸಿ ಜ್ಯೋತಿಷ್ಯ ಹೇಳುವ ಕೆಲಸವನ್ನು ಆ ಯುವಕ ಮಾಡುತ್ತಿದ್ದಾನೆ.
ಸೈಟು ಖರೀದಿ- ಮನೆ ನಿರ್ಮಾಣದ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ?
ಆತನ ಬಳಿಯಿರುವುದು ನಕಲಿಯೋ ಅಥವಾ ಅಸಲಿಯೋ? ಎಂಬುದರ ಬಗ್ಗೆ ಯಾರೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಬದಲಿಗೆ ಅಧಿಕಾರಿಗಳ ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಂಡಿದ್ದಾನೆ ಎಂದರೆ ಈತ ಮಹಾನ್ ಜ್ಯೋತಿಷಿಯೇ ಇರಬೇಕೆಂದು ಆತ ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸುತ್ತಿದ್ದಾರೆ.
ಜ್ಯೋತಿಷ್ಯ ಲೇಖನ: ಗ್ರಹಗಳು ಉತ್ತಮ ಫಲ ನೀಡುವ ಸಮಯ ಯಾವುದು?
ಡಿಸಿ, ಎಡಿಸಿಯೊಂದಿಗಿರುವ ಫೋಟೋಗಳು
ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಜ್ಯೋತಿಷ್ಯ ಹೇಳುವ ನೆಪದಲ್ಲಿ ಸುಲಿಗೆ, ವಂಚನೆ, ಕಳ್ಳತನ ಮಾಡಿರುವ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಲೇ ಇದೆ. ಹೀಗಿರುವಾಗ ಈ ಯುವಕ ಅಧಿಕಾರಿಗಳ ಫೋಟೋದೊಂದಿಗೆ ಸರ್ಟಿಫಿಕೇಟ್ ಹಿಡಿದುಕೊಂಡು ಅಡ್ಡಾಡುತ್ತಿರುವುದು ಹತ್ತು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.
ಜಿಲ್ಲಾಧಿಕಾರಿ ಬದಲಾವಣೆ
ಹಿಂದೆ ಕೊಡಗು ಜಿಲ್ಲಾಧಿಕಾರಿಯಾಗಿದ್ದ ಅನೀಸ್ ಕಣ್ಮಣಿ ಜಾಯ್, ಅಪರ ಜಿಲ್ಲಾಧಿಕಾರಿ ಸ್ನೇಹಾ ಹಾಗೂ ಪೊಲೀಸ್ ಅಧಿಕಾರಿಯೊಬ್ಬರ ಚಿತ್ರ ಮತ್ತು ಅವರು ನೀಡಿದ ಸರ್ಟಿಫಿಕೇಟ್ನ್ನು ಈತ ಲ್ಯಾಮಿನೇಷನ್ ಮಾಡಿಸಿಟ್ಟುಕೊಂಡಿದ್ದಾನೆ. ಇದು ಅಸಲಿಯಾ? ನಕಲಿಯಾ? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಈಗ ಕೊಡಗು ಜಿಲ್ಲಾಧಿಕಾರಿ ಬದಲಾಗಿದ್ದಾರೆ.
ಸರ್ಟಿಫಿಕೇಟ್ ತೋರಿಸುವ ಜ್ಯೋತಿಷಿ
ಈತ ಯಾರು ಎಂಬುದೇ ಗೊತ್ತಿಲ್ಲ. ಆದರೆ ಸರ್ಟಿಫಿಕೇಟ್ನಲ್ಲಿರುವಂತೆ ಈತ ಉತ್ತರ ಕರ್ನಾಟಕದ ಗದಗ ಜಿಲ್ಲೆಯ ರಾಮನಗರದ ಕಳಸಾಪುರ ನಿವಾಸಿಯಂತೆ. ಹೆಸರು ಹನುಮಂತ ಲಕ್ಷ್ಮಣ ಕರಿ. ಮನೆಮನೆಗೆ ಹೋಗಿ ಜ್ಯೋತಿಷ್ಯ ಹೇಳುವುದು ಇವನ ವೃತ್ತಿಯಂತೆ. ಈಗಾಗಲೇ ನಾನು ಹಲವರಿಗೆ ಜ್ಯೋತಿಷ್ಯ ಹೇಳಿದ್ದು ಅವರ ಲೈಫ್ ಬದಲಾಗಿದೆ ಎಂದು ಪುಂಗಿ ಬಿಡುತ್ತಾನೆ. ಇತ್ತೀಚೆಗೆ ಶಾಸ್ತ್ರ ಹೇಳುವ ನೆಪದಲ್ಲಿ ಮನೆಗಳಿಗೆ ಬಂದು ಮನೆಯವರನ್ನು ಮರಳು ಮಾಡಿ ವಂಚಿಸುವ ಪ್ರಕರಣಗಳು ನಡೆಯುತ್ತಿರುವುದರಿಂದ ಮನೆ, ಮನೆಗೆ ಹೆಗಲಿಗೆ ಚೀಲ ನೇತು ಹಾಕಿಕೊಂಡು ಬರುವ ಜ್ಯೋತಿಷಿಗಳನ್ನು ಜನ ದೂರ ಇಡುತ್ತಿದ್ದಾರೆ. ಆದರೆ ಈತ ತನ್ನ ಬ್ಯಾಗಿನಿಂದ ಅಧಿಕಾರಿಗಳು ನೀಡಿದ ಸರ್ಟಿಫಿಕೇಟ್ಗಳನ್ನು ನೋಡುತ್ತಿದ್ದಂತೆಯೇ ದಂಗಾಗಿ ಹೋಗುತ್ತಿದ್ದಾರೆ.
ಸಂಬಂಧಿಸಿದವರು ಕ್ರಮ ಕೈಗೊಳ್ಳಲಿ
ಜ್ಯೋತಿಷ್ಯ ಹೇಳುವ ನೆಪದಲ್ಲಿ ಕೆಲವು ಸಮಯಗಳ ಹಿಂದೆಯಷ್ಟೆ ಮಹಿಳೆಯೊಬ್ಬಳು ನಿಂಬೆ ಹಣ್ಣಿನ ಪಾನಕದಲ್ಲಿ ಮತ್ತು ಬರುವ ಔಷಧಿ ನೀಡಿ ಪ್ರಜ್ಞೆ ತಪ್ಪಿಸಿ ಹಣ ಬಂಗಾರ ದೋಚಿಕೊಂಡು ಪರಾರಿಯಾಗಿದ್ದಳು. ಬಳಿಕ ಪೊಲೀಸರು ಆಕೆಯನ್ನು ಬಂಧಿಸಿದ್ದರು. ಮೇಲಿಂದ ಮೇಲೆ ಜ್ಯೋತಿಷ್ಯ ಹೇಳುವ ನೆಪದಲ್ಲಿ ವಂಚನೆ ಮಾಡುವುದು ಮೇಲಿಂದ ಮೇಲೆ ನಡೆಯುತ್ತಿರುವಾಗಲೇ ಅಧಿಕಾರಿಗಳು ನೀಡಿದ್ದು ಎನ್ನಲಾದ ಸರ್ಟಿಫಿಕೇಟ್ ಇಟ್ಟುಕೊಂಡು ಜನಕ್ಕೆ ಮಂಕು ಬೂದಿ ಎರಚುತ್ತಿರುವುದು ನಿಜಕ್ಕೂ ವಿಷಾದದ ಸಂಗತಿಯಾಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ಕ್ರಮ ಕೈಗೊಳ್ಳಬೇಕಿದೆ.