ಮೈಸೂರಿನಲ್ಲಿ ವೃದ್ಧೆಗೆ ಹೊಡೆದು ಚಿನ್ನದ ಸರ ದೋಚಿದ್ದವನಿಗೆ ಏಳು ವರ್ಷ ಸಜಾ
ಮೈಸೂರು, ಫೆಬ್ರವರಿ 13: ವೃದ್ಧೆಯ ಮೇಲೆ ಹಲ್ಲೆ ಮಾಡಿ, ಚಿನ್ನದ ಸರ ದೋಚಿದ್ದವನಿಗೆ ಮೈಸೂರಿನ 2ನೇ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ 5 ಸಾವಿರ ರೂ. ದಂಡ ದೊಂದಿಗೆ 7 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ಬುಧವಾರ ತೀರ್ಪು ನೀಡಿದೆ.
ನಂಜನಗೂಡು ತಾಲೂಕಿನ ತುಮ್ಮನೇರಳೆ ಗ್ರಾಮದ ಟಿ.ಎಂ.ನಾಗೇಂದ್ರ ಶಿಕ್ಷೆಗೆ ಗುರಿಯಾಗಿರುವಾತ. ಈತ ಮೈಸೂರು ತಾಲೂಕಿನ ಬಂಡಿಪಾಳ್ಯದ ನಿವಾಸಿ ನಂಜಮ್ಮ ಅವರ ಮೇಲೆ ಹಲ್ಲೆ ಮಾಡಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆಗೆ ಗುರಿಯಾಗಿದ್ದಾನೆ. 2018ರ ಜನವರಿ 28ರಂದು ಬೆಳಿಗ್ಗೆ ನಂಜಮ್ಮ ಅವರು ಹಾಲಿನ ಬೂತ್ ಬಾಗಿಲು ತೆರೆಯುತ್ತಿದ್ದಾಗ ಹಿಂದಿನಿಂದ ಬಂದ ನಾಗೇಂದ್ರ, ಏಕಾಏಕಿ ನಂಜಮ್ಮ ಅವರ ತಲೆಗೆ ಆಯುಧದಿಂದ ಹೊಡೆದು ಅವರ ಕತ್ತಿನಲ್ಲಿದ್ದ 35 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ನಂಜಮ್ಮ ಅವರನ್ನು ಸ್ಥಳೀಯ ನಿವಾಸಿಗಳು ಆಸ್ಪತ್ರೆಗೆ ದಾಖಲಿಸಿದ್ದರು.
ಪತಿ ಮೇಲೆ ಕಾದ ಎಣ್ಣೆ ಎರಚಿ ಪತ್ನಿಯಿಂದ ಹಲ್ಲೆ
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಮೈಸೂರು ಗ್ರಾಮಾಂತರ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು 7 ವರ್ಷ ಶಿಕ್ಷೆಯೊಂದಿಗೆ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಎಚ್.ಡಿ.ಆನಂದ ಕುಮಾರ್ ವಾದ ಮಂಡಿಸಿದ್ದರು.