ಆಷಾಢ ಶುಕ್ರವಾರದಲ್ಲಿ ಭಕ್ತರಿಲ್ಲದೆ ಬಣಗುಡುತ್ತಿದೆ ಚಾಮುಂಡಿ ಬೆಟ್ಟ
ಮೈಸೂರು, ಜುಲೈ 3: ಪ್ರತಿ ವರ್ಷ ಆಷಾಢದ ಈ ಸಮಯದಲ್ಲಿ ಚಾಮುಂಡಿ ಬೆಟ್ಟದಲ್ಲಿ ಜನಜಂಗುಳಿ ತುಂಬಿಕೊಂಡಿರುತ್ತಿತ್ತು. ಬೆಟ್ಟದಲ್ಲಿ ನಡೆಯುತ್ತಿದ್ದ ವಿಶೇಷ ಆಷಾಢ ಪೂಜೆಗೆ ಎಲ್ಲೆಲ್ಲಿಂದಲೋ ಜನರು ಆಗಮಿಸುತ್ತಿದ್ದರು. ಆದರೆ ಕೊರೊನಾ ಎಫೆಕ್ಟ್ ನಿಂದಾಗಿ ಈ ಬಾರಿ ಆಷಾಢ ವಿಶೇಷ ಪೂಜೆ ರದ್ದಾಗಿದ್ದು, ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿರುವುದರಿಂದ ಚಾಮುಂಡಿ ಬೆಟ್ಟ ಭಕ್ತರಿಲ್ಲದೇ ಖಾಲಿ ಖಾಲಿಯಾಗಿದೆ.
ಇಂದು ಆಷಾಢ ಮಾಸದ ಎರಡನೇ ಶುಕ್ರವಾರ. ಸದ್ಯಕ್ಕೆ 7.30ವರೆಗೂ ಧಾರ್ಮಿಕ ಪೂಜಾ ಕೈಂಕರ್ಯ ಮುಗಿಸಿ ದೇಗುಲಕ್ಕೆ ಆಡಳಿತ ಮಂಡಳಿ ಬೀಗ ಹಾಕಿದೆ. ಇಂದು ಅಭಿಷೇಕದ ನಂತರ ವಿಶೇಷ ಪೂಜೆ ನೆರವೇರಿಸಿ ಚಾಮುಂಡೇಶ್ವರಿ ಉತ್ಸವ ಮೂರ್ತಿ ಮೆರವಣಿಗೆ ನಡೆಸಲಾಗಿದೆ. ಡಾ.ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆದಿದೆ.
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕ ಪ್ರವೇಶ ನಿಷೇಧ
ಆಷಾಢ ಶುಕ್ರವಾರಗಳಂದು ಚಾಮುಂಡಿ ಬೆಟ್ಟ ಭಕ್ತರಿಂದ ತುಂಬಿ ತುಳುಕುತ್ತಿತ್ತು. ಪ್ರತಿ ವರ್ಷ ಬೆಳಗ್ಗೆ 5.30ರಿಂದ ರಾತ್ರಿ 10ರವರೆಗೂ ದೇವಿಯ ದರ್ಶನಕ್ಕೆ ಅವಕಾಶ ಇರುತ್ತಿತ್ತು. ಆದರೆ ಕೊರೊನಾ ಕಾರಣಕ್ಕಾಗಿ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ. ಪ್ರಸಾದ ವಿತರಣೆಗೂ ಜಿಲ್ಲಾಡಳಿತ ಬ್ರೇಕ್ ಹಾಕಿದೆ.
ಕೊರೊನಾ ಸಾಮುದಾಯಿಕವಾಗಿ ಹರಡುವ ಭೀತಿಯಿದೆ, ಆದ್ದರಿಂದ ಭಕ್ತರು ಸಹಕರಿಸಬೇಕು ಎಂದು ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಅವರು ಭಕ್ತರಲ್ಲಿ ಮನವಿ ಮಾಡಿದ್ದರು.