ಆಷಾಡ ಶುಕ್ರವಾರ ಚಾಮುಂಡಿಬೆಟ್ಟಕ್ಕೆ ತೆರಳೋರು ಗಮನಿಸಿ..
ಮೈಸೂರು: ಆಷಾಡ ಶುಕ್ರವಾರದ ವಿಶೇಷ ದರ್ಶನಕ್ಕೆ ಆಗಮಿಸುವ ಭಕ್ತರಿಗಾಗಿ ಚಾಮುಂಡಿಬೆಟ್ಟ ಸಕಲ ರೀತಿಯಲ್ಲೂ ಸಜ್ಜಾಗಿದೆ.
ಜೂನ್ 30, ಜುಲೈ 7, ಜುಲೈ 14, ಜುಲೈ 21 ಹಾಗೂ ಚಾಮುಂಡೇಶ್ವರಿ ವರ್ಧಂತಿ ಜುಲೈ 16 ರಂದು ನಡೆಯಲಿದ್ದು, ಭಕ್ತರು ಸಮಾರೋಪಾದಿಯಲ್ಲಿ ಆಗಮಿಸುವುದರಿಂದ ಎಲ್ಲರಿಗೂ ಯಾವುದೇ ರೀತಿಯ ತೊಂದರೆಯಾಗದಂತೆ ದರ್ಶನ ಪಡೆಯಲು ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಮಾಡಿದೆ.
ಇನ್ನೊಂದೆಡೆ ಭಕ್ತಾಧಿಗಳಿಗೆ ಸುಗಮ ವಾಹನ ಸಂಚಾರದ ವ್ಯವಸ್ಥೆ ಮತ್ತು ದೇವಿಯ ದರ್ಶನ, ವಿಶೇಷ ಪೂಜೆಗೂ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಇಲಾಖೆ ಹಲವು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದು, ಅದನ್ನು ಪಾಲಿಸುವಂತೆಯೂ ಭಕ್ತಾಧಿಗಳಿಗೆ ಸೂಚಿಸಿದೆ. ಈ ಬಾರಿಯ ಆಷಾಡ ಶುಕ್ರವಾರಕ್ಕೆ ಕೈಗೊಂಡಿರುವ ವಿಶೇಷತೆಗಳ ಬಗ್ಗೆ ತಿಳಿಯಲು ಮುಂದೆ ಓದಿ...
ಲಲಿತಮಹಲ್ ಹೆಲಿಪ್ಯಾಡ್ನಿಂದ ಉಚಿತ ಬಸ್
ಆಷಾಡ ಶುಕ್ರವಾರ ಮತ್ತು ವರ್ಧಂತಿಯ ದಿನ ಚಾಮುಂಡಿಬೆಟ್ಟಕ್ಕೆ ಆಗಮಿಸುವವರು ತಮ್ಮ ವಾಹನವನ್ನು ಲಲಿತಮಹಲ್ ಹೆಲಿಪ್ಯಾಡ್ನಲ್ಲಿ ನಿಲುಗಡೆ ಮಾಡಿ ದೇವಸ್ಥಾನ ಆಡಳಿತ ಮಂಡಳಿ ವ್ಯವಸ್ಥೆ ಮಾಡಿರುವ ಉಚಿತ ಕೆ.ಎಸ್.ಆರ್.ಟಿ.ಸಿ. ಬಸ್ಗಳಲ್ಲಿ ದೇವಸ್ಥಾನಕ್ಕೆ ತೆರಳುವುದು ಅಗತ್ಯವಾಗಿದೆ. ಉಚಿತ ಬಸ್ ಸೌಲಭ್ಯ ಬೆಳಗಿನ ಜಾವ 2 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಇರಲಿದೆ
ಪ್ರಸಾದ ವಿತರಣೆ ಪಾಸ್ ಕಡ್ಡಾಯ
ದೇವಸ್ಥಾನದಲ್ಲಿ ಉಚಿತ ಪ್ರಸಾದ ವಿನಿಯೋಗದ ವಾಹನಗಳಿಗೆ ಚಾಮುಂಡಿಬೆಟ್ಟದ ಬಸ್ನಿಲ್ದಾಣದ ಎದುರಿರುವ ಪಾರ್ಕಿಂಗ್ ಜಾಗದಲ್ಲಿ ವ್ಯವಸ್ಥೆ ಮಾಡಿದ್ದು, ಪ್ರಸಾದ ವಿನಿಯೋಗದ ವಾಹನಗಳಿಗೆ ಪೊಲೀಸ್ ಆಯುಕ್ತರ ಕಚೇರಿಯಿಂದ ಅಥವಾ ಜಿಲ್ಲಾಡಳಿತದಿಂದ ನೀಡುವ ಪಾಸ್ನ್ನು ಪಡೆಯುವುದು ಕಡ್ಡಾಯವಾಗಿದೆ. ಅಷ್ಟೇ ಅಲ್ಲದೆ ನಿಗಧಿತ ಸ್ಥಳದಲ್ಲಿ, ನಿಗಧಿತ ಸಮಯದಲ್ಲಿ ಪ್ರಸಾದ ವಿನಿಯೋಗ ಮಾಡಬೇಕಾಗುತ್ತದೆ.
ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ
ದೇವಸ್ಥಾನಕ್ಕೆ ಬರುವ ವಿ.ವಿ.ಐ.ಪಿ., ವಿ.ಐ.ಪಿ ಮಾಧ್ಯಮ ವಾಹನಗಳು, ಕರ್ತವ್ಯದ ಮೇರೆಗೆ ತೆರಳುವ ವಾಹನಗಳಿಗೆ ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ವಾಹನ ಪಾಸ್ ನೀಡಲಾಗುತ್ತಿದ್ದು ಅಂತಹ ವಾಹನಗಳಿಗೆ ಬೆಟ್ಟದ ಮೇಲೆ ಹೋಗಲು ಅವಕಾಶವಿದೆ. ಪಾರ್ಕಿಂಗ್ಗೆ ನಿಗಧಿಪಡಿದ 2, 3ನೇ ಪಾರ್ಕಿಂಗ್ ಜಾಗಗಳಲ್ಲಿ ವಾಹನ ನಿಲುಗಡೆ ಮಾಡಬೇಕು. ಮಹಿಷಾಸುರ ಪ್ರತಿಮೆದಿಂದ ದೇವಸ್ಥಾನದ ವರೆಗೆ ಯಾವುದೇ ವಾಹನಗಳಿಗೆ ಪ್ರವೇಶವಿಲ್ಲ. ಆಷಾಡ ಶುಕ್ರವಾರದ ಹಿಂದಿನ ದಿನ ರಾತ್ರಿ 10 ಗಂಟೆಯಿಂದಲೇ ವಾಹನಗಳಿಗೆ ಚಾಮುಂಡಿಬೆಟ್ಟಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಉತ್ತನಹಳ್ಳಿ ಮಾರ್ಗ ಬಂದ್
ಉತ್ತನಹಳ್ಳಿ ರಸ್ತೆ ಕಡೆಯಿಂದ ಚಾಮುಂಡಿಬೆಟ್ಟಕ್ಕೆ ಬರುವ ಹಾಗೂ ಹೋಗುವ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಚಾಮುಂಡಿಬೆಟ್ಟದ ನಿವಾಸಿಗಳು ವಾಹನ ಸಂಚಾರಕ್ಕೆ ಅನುಮತಿ ಪಡೆಯಲು ಡಿ.ಎಲ್, ವಾಹನದ ದಾಖಲಾತಿ, ಮತದಾರರ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿಯನ್ನು ಚಾಮುಂಡಿಬೆಟ್ಟದ ಗ್ರಾಮ ಪಂಚಾಯಿತಿಗೆ ಸಲ್ಲಿಸಿ ಅನುಮತಿ ಪಾಸ್ ಪಡೆದುಕೊಳ್ಳುವುದು ಕಡ್ಡಾಯವಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಎ. ಸುಬ್ರಮಣ್ಯೇಶ್ವರರಾವ್ ತಿಳಿಸಿದ್ದಾರೆ.
ದೇವರ ದರ್ಶನಕ್ಕೆ ವ್ಯವಸ್ಥೆ
ಆಷಾಡ ಶುಕ್ರವಾರ ಮುತ್ತು ವರ್ಧಂತಿ ದಿನದಂದು ಬೆಳಿಗ್ಗೆ 5.30 ರಿಂದ ರಾತ್ರಿ 9.30 ರವರೆಗೆ ಮೂರು ಪ್ರತ್ಯೇಕ ಸರತಿ ಸಾಲುಗಳಲ್ಲಿ ಭಕ್ತರು ಶ್ರೀ ದೇವಿಯ ದರ್ಶನ ಮಾಡಲು ವ್ಯವಸ್ಥೆ ಮಾಡಲಾಗಿದೆ. ಉಚಿತ ದರ್ಶನದ ಸಾಲಲ್ಲಿ ಬರುವವರು ಶ್ರೀ ನಾರಾಯಣಸ್ವಾಮಿ ದೇವಸ್ಥಾನದ ಮುಂಭಾಗದಿಂದ ಪ್ರವೇಶ ನೀಡಿದರೆ ರೂ.50ರ ವಿಶೇಷ ಸರತಿ ಸಾಲಿಗೆ ಶ್ರೀ ಮಹಾಬಲೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಿಂದ ಪ್ರವೇಶ ಕಲ್ಪಿಸಿದೆ ಹಾಗೂ ರೂ.300 ಗಳ ಅಭಿಷೇಕ ಸೇವೆಯವರ ಸಾಲು ದೇವಸ್ಥಾನದ ಉತ್ತರ ದಿಕ್ಕಿನ ಹೈಮಾಸ್ಟ್ ಕಂಬ ನಂದಿನಿ ಪಾರ್ಲರ್ ಮುಂಭಾಗದಿಂದ ಪ್ರಾರಂಭವಾಗಲಿದೆ.
ದೊಡ್ಡಕೆರೆ ಮೈದಾನದಿಂದಲೂ ಬಸ್ ವ್ಯವಸ್ಥೆ
ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲದ ಕಾರಣ ವಾಹನಗಳನ್ನು ದಸರಾ ವಸ್ತು ಪ್ರದರ್ಶನದ ಮುಂಭಾಗದ ದೊಡ್ಡಕೆರೆ ಮೈದಾನದಲ್ಲಿ ನಿಲುಗಡೆ ಮಾಡಿ, ಅಲ್ಲಿಂದ ಕೆ.ಎಸ್.ಆರ್.ಟಿ.ಸಿ ಬಸ್ಸುಗಳಲ್ಲಿ 17ರೂ. ಟಿಕೆಟ್ ಪಡೆದು ಬೆಟ್ಟಕ್ಕೆ ಹೋಗುವ ಮತ್ತು ಬರುವ ವ್ಯವಸ್ಥೆ ಮಾಡಲಾಗಿದೆ. ಇದು ಬೆಳಿಗ್ಗೆ 5.30 ರಿಂದ ರಾತ್ರಿ 9.ರವರೆಗೆ ಲಭ್ಯವಿದೆ. ಚಾಮುಂಡಿಬೆಟ್ಟದಲ್ಲಿ ಪ್ಲಾಸ್ಟಿಕ್ ಬ್ಯಾಗ್, ನೀರಿನ ಬಾಟಲ್ಗಳ ಬಳಕೆಯನ್ನು ನಿಷೇಧಿಸಲಾಗಿದೆ