ಶ್ರೀಗಂಧ ಕದಿಯಲು ಮೈಸೂರನ್ನೇ ಕೇಂದ್ರ ಮಾಡಿಕೊಂಡಿದ್ದ ಅಂತರ್ ರಾಜ್ಯ ಕಳ್ಳರ ಬಂಧನ
ಮೈಸೂರು, ಜನವರಿ 12: ಶ್ರೀಗಂಧದ ಮರಗಳನ್ನು ಕದಿಯಲು ಸಾಂಸ್ಕೃತಿಕ ನಗರಿ ಮೈಸೂರನ್ನೇ ಕೇಂದ್ರವನ್ನಾಗಿಸಿಕೊಂಡಿದ್ದ ನಾಲ್ವರು ಅಂತರ್ ರಾಜ್ಯ ಕಳ್ಳರು ಪೊಲೀಸರು ಹಾಕಿದ ಬಲೆಗೆ ಬಿದ್ದಿದ್ದಾರೆ.
ಬಂಧಿತರನ್ನು ತಮಿಳುನಾಡಿನ ಈರೋಡ್ ಜಿಲ್ಲೆಯ ಭೂಪತಿ(24), ಫ್ರಾನ್ಸಿಸ್(26), ಸೆಂದಿಲ್ ಕುಮಾರ್(38) ಹಾಗೂ ಪ್ರವೀಣ್ ಕುಮಾರ್(20) ಎಂದು ಗುರುತಿಸಲಾಗಿದ್ದು, ಪ್ರಮುಖ ಆರೋಪಿ ರೋಹಿಲ್ ಪರಾರಿಯಾಗಿದ್ದಾನೆ.
ಮೈಸೂರು: ತಂದೆ-ಮಗನನ್ನು ಕೊಂದಿದ್ದ ಆರೋಪಿಗಳ ಬಂಧನ
ಪ್ರಮುಖ ಆರೋಪಿ ರೋಹಿಲ್ ಪತ್ನಿ ಮೈಸೂರು ಮೂಲದವಳಾಗಿದ್ದು, ರೋಹಿಲ್ ಸೇರಿದಂತೆ ಈ ನಾಲ್ವರು ಐನಾತಿಗಳು ಬೆಳಗಿನ ಹೊತ್ತು ನಗರ ಸುತ್ತಾಡಿ ಸರ್ಕಾರಿ ಕಚೇರಿ, ನಿರ್ಜನ ಪ್ರದೇಶದಲ್ಲಿರುವ ಶ್ರೀಗಂಧದ ಮರಗಳನ್ನು ಗುರುತಿಸಿಕೊಳ್ಳುತಿದ್ದರು. ನಂತರ ರಾತ್ರಿ ವೇಳೆಯಲ್ಲಿ ಮರ ಕೊಯ್ಯುವ ಯಂತ್ರ ಬಳಸಿ, ಗಂಧದ ಮರಗಳನ್ನು ಕದಿಯುತ್ತಿದ್ದರು.
ಕದ್ದ ಮರದ ತುಂಡಗಳನ್ನು ತಮಿಳುನಾಡಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು. ನಗರದಲ್ಲಿ ಇತ್ತೀಚೆಗೆ ಸರ್ಕಾರಿ ಕಚೇರಿಗಳ ಆವರಣದಿಂದ ಶ್ರೀಗಂಧದ ಕಳುವು ಹೆಚ್ಚಾಗಿತ್ತು. ಈ ಕಳ್ಳರನ್ನು ಬಲೆಗೆ ಕೆಡವಲು ಪೊಲೀಸರೂ ಸಾಕಷ್ಟು ತಲೆ ಕೆಡಿಸಿಕೊಂಡಿದ್ದರು.
ಇತ್ತೀಚಿಗೆ ನಜರ್ಬಾದ್ ಠಾಣೆ ಪೊಲೀಸರು ಗಸ್ತಿನಲ್ಲಿದ್ದಾಗ ಕೆ.ಸಿ ಬಡಾವಣೆಯ ಮುಖ್ಯ ರಸ್ತೆಯಲ್ಲಿ ಅನುಮಾನಾಸ್ಪಾದವಾಗಿ ನಿಂತಿದ್ದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಸತ್ಯಾಂಶ ಹೊರ ಬಂದಿದೆ.
ಬಂಧಿತರಿಂದ ಲ್ಯಾನ್ಸರ್ ಕಂಪನಿಯ ಒಂದು ಕಾರು, 5.50 ಲಕ್ಷ ರೂ. ಮೌಲ್ಯದ 46 ಗಂಧದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರ ಬಂಧನದಿಂದ ನಜರ್ಬಾದ್ ಠಾಣೆ, ಅಶೋಕಪುರಂ ಠಾಣೆಯಲ್ಲಿ ಎರಡೆರಡು ಪ್ರಕರಣ, ಕೆ.ಆರ್ ಠಾಣೆಯಲ್ಲಿ ಮೂರು ಪ್ರಕರಣ, ಜಯಲಕ್ಷ್ಮಿಪುರಂ, ಲಕ್ಷ್ಮಿಪುರಂ, ಎನ್.ಆರ್.ಠಾಣೆಯಲ್ಲಿ ಒಂದೊಂದು ಪ್ರಕರಣಗಳು ಸೇರಿದಂತೆ ಒಟ್ಟು 10 ಪ್ರಕರಣಗಳು ದಾಖಲಾಗಿವೆ ಎಂದು ಡಿಸಿಪಿ ಗೀತಾ ಪ್ರಸನ್ನ ತಿಳಿಸಿದರು.