ನಕಲಿ ಚಿನ್ನಾಭರಣದಿಂದ ಲಕ್ಷಾಂತರ ರೂ. ವಂಚಿಸಿದ್ದ ಮಹಿಳೆಯ ಬಂಧನ
ಮೈಸೂರು, ನವೆಂಬರ್ 4: ನಕಲಿ ಚಿನ್ನಾಭರಣಗಳನ್ನು ಗಿರವಿಯಿಟ್ಟು ಲಕ್ಷಾಂತರ ರೂ. ಪಡೆದು ವಂಚಿಸಿದ್ದ ಮಹಿಳೆ ಮತ್ತು ಆಕೆಯ ಸಹಚರನನ್ನು ಕೃಷ್ಣರಾಜ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತಳನ್ನು ಒರಿಸ್ಸಾ ಮೂಲದ ಬೆಂಗಳೂರು ನಿವಾಸಿ, ಎಂಬಿಎ ಪದವೀಧರೆ ಸಂಗೀತಾ ದಾಸ್(40), ಛತ್ತೀಸ್ ಗಢ ಮೂಲದ ಮೋಸಿಂಖಾನ್ (32) ಎಂದು ಗುರುತಿಸಲಾಗಿದೆ. ಬಂಧಿತರಿಂದ 35 ಸಾವಿರ ರೂ. ನಗದು, ಆಧಾರ್ ಕಾರ್ಡ್, ವಾಹನ ಚಾಲನಾ ಪರವಾನಗಿ ಪತ್ರ ಇನ್ನಿತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೂಜೆ ಮಾಡುವೆನೆಂದು 21 ಲಕ್ಷ ರೂ ಮೌಲ್ಯದ ಚಿನ್ನದೊಂದಿಗೆ ಪರಾರಿಯಾಗಿದ್ದ ಪೂಜಾರಿ ಬಂಧನ
ಆಗಸ್ಟ್ 29 ರಂದು ಸಂಜೆ 6.45ರ ಸುಮಾರಿಗೆ ಮೈಸೂರಿನ ಅಗ್ರಹಾರದಲ್ಲಿರುವ ಭಗವತಿ ಜೈನ್ ಅವರ ಚಿನ್ನಾಭರಣ ಮಳಿಗೆಗೆ ಬಂದಿದ್ದ ಸಂಗೀತಾ ದಾಸ್, ತನ್ನ ಬಳಿ ಇದ್ದ 50 ಗ್ರಾಂ ತೂಕದ 4 ಚಿನ್ನದ ಬಳೆಗಳನ್ನು ಅಡವಿಟ್ಟು ಒಂದು ಲಕ್ಷ ರೂ. ಹಣ ನೀಡುವಂತೆ ಕೇಳಿಕೊಂಡಿದ್ದಳು.
ಆಕೆಯ ಮಾತು ನಂಬಿದ ಭಗವತಿ ಜೈನ್, ಆಕೆಯ ಆಧಾರ್ ಕಾರ್ಡ್ ಪರಿಶೀಲಿಸಿ ಅದರ ಜೇರಾಕ್ಸ್ ಪಡೆದು ಬಳೆಗಳನ್ನು ಇಟ್ಟುಕೊಂಡು ಒಂದು ಲಕ್ಷ ರೂ. ಹಣ ನೀಡಿದ್ದರು. ಈ ಸಂದರ್ಭದಲ್ಲಿ ಏನಾದರೂ ತೊಂದರೆಯಾದರೆ ಆಕೆಯನ್ನು ರಕ್ಷಿಸಲೆಂದು ಸಹಚರ ಮೋಸೀಂಖಾನ್ ಮಳಿಗೆಯ ಹೊರಗೆ ಕಾದು ನಿಂತಿದ್ದ.
ಕೆಲ ಸಮಯದ ಬಳಿಕ ಆ ಬಳೆಗಳನ್ನು ಅಶೋಕ ರಸ್ತೆಯಲ್ಲಿರುವ ಚಿನ್ನಾಭರಣ ಪರೀಕ್ಷಾ ಮಳಿಗೆಯಲ್ಲಿ ಪರೀಕ್ಷೆ ಮಾಡಿಸಿದಾಗ ಅವು ಚಿನ್ನದ ಲೇಪನವಿರುವ ತಾಮ್ರದ ಬಳೆಗಳೆಂದು ತಿಳಿದು ಬಂದಿದೆ. ಕೂಡಲೇ ಭಗವತಿ ಜೈನ್ ಕೃಷ್ಣರಾಜ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು.
ಪೊಲೀಸರು ಆಕೆ ನೀಡಿದ್ದ ಆಧಾರ್ ಕಾರ್ಡ್ ದಾಖಲೆ ಪರಿಶೀಲಿಸಿದಾಗ ಯಾರದೋ ಆಧಾರ್ ಕಾರ್ಡಿಗೆ ತನ್ನ ಫೋಟೋ ಹಾಕಿ ಕಲರ್ ಜೇರಾಕ್ಸ್ ತೆಗೆಸಿಕೊಂಡಿದ್ದಾಗಿ ತಿಳಿದಿದೆ. ನಂತರ ತನಿಖೆ ಚುರುಕುಗೊಳಿಸಿದ ಪೊಲೀಸರು, ಇನ್ಸ್ ಪೆಕ್ಟರ್ ಶ್ರೀನಿವಾಸ್ ನೇತೃತ್ವದಲ್ಲಿ ತಂಡ ರಚಿಸಿ ಶ್ರೀರಂಗಪಟ್ಟಣದ ಬಳಿ ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ನ್ಯಾಯಾಧೀಶರ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎಂಬಿಎ ಪದವೀಧರೆಯಾಗಿರುವ ಸಂಗೀತಾ ದಾಸ್, ಬೆಂಗಳೂರಿನಲ್ಲಿ ಕಂಪ್ಯೂಟರ್ ತರಬೇತಿ ಕೇಂದ್ರ ನಡೆಸುತ್ತಿದ್ದಳೆಂದು ಪೊಲೀಸರು ತಿಳಿಸಿದ್ದಾರೆ.